ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ಕೆಲವು ತಪ್ಪು ಕಲ್ಪನೆ ಹಾಗೂ ವಿಪಕ್ಷಗಳ ರಾಜಕೀಯ ಪ್ರಚೋದನೆಯಿಂದ ಮಾತ್ರ ಈ ಕೃತ್ಯವನ್ನು ಮಾಡಲಾಗಿದೆ. ಮೀಸಲಾತಿ ಕುರಿತು ಯಾವುದೇ ಅಸಮಾಧಾನವಿದ್ದರೂ ಪ್ರತಿಭಟನೆ ಮಾಡುವುದಿದ್ದರೆ ನಮ್ಮ ಮನೆ ಮುಂದೆ ಮಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಮೌರ್ಯ ವೃತ್ತದಿಂದ ಬಸವೇಶ್ವರ್‌ ಸರ್ಕಲ್‌ ವರೆಗಿನ ರೇಸ್‌ ಕೋರ್ಸ್‌ ರಸ್ತೆಗೆ ರೆಬೆಲ್‌ ಸ್ಟಾರ್‌ ಡಾ.ಎಂ.ಹೆಚ್ ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ನಿಜವಾಗಲೂ ನಾವು ಈ ರೀತಿ ಆಗುತ್ತದೆ ಎಂದುಕೊಂಡಿರಲಿಲ್ಲ. ಸ್ವತಃ ಯಡಿಯೂರಪ್ಪ ಅವರೇ ಬಂಜಾರ ಸಮುದಾಯದ ಬಂಜಾರ ಸಮುದಾಯದ ಅಭಿವೃದ್ಧಿ ನಿಗಮವನ್ನು ಮಾಡಿದ್ದಾರೆ. ಶಿಕಾರಿಪುರದಲ್ಲಿ ಈಗ ನಡೆದಿರುವ ಘಟನೆಯ ಹಿಂದೆ ರಾಜಕೀಯ ಪ್ರಚೋದನೆಯಿಂದ ಆಗಿದೆ. ಕೆಲವು ತಪ್ಪು ಕಲ್ಪನೆಗಳು ಇರುವುದು ಗೋಚರ ಆಗುತ್ತಿದೆ. ಕಲ್ಲು ತೂರಾಟ ಮಾಡಿರುವುದು ಅತ್ಯಂತ ಹೀನವಾದ ಕಾರ್ಯವಾಗಿದೆ. ಇದು ಸಂಪೂರ್ಣ ವಿರೋಧ ಪಕ್ಷದವರು ಮಾಡಿರೋ ಕೆಲಸವಾಗಿದೆ ಎಂದು ಕಿಡಿಕಾರಿದರು.

ಪರಿಶಿಷ್ಟ ಜಾತಿಯಿಂದ ಹೊರಗೆ ಹಾಕಲ್ಲ: ಬಂಜಾರ ಸುದಾಯಕ್ಕೆ ನಾವು ಮೊದಲಿನಿಂದಲು ಆದ್ಯತೆ ನೀಡಿದ್ದೇವೆ. ಬಂಜಾರ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರ ಹಾಕುತ್ತಾರೆ ಎಂಬ ಭಯ ಇತ್ತು. ನಾವು ಆ ರೀತಿಯ ಯಾವುದೇ ಕ್ರಮ ಆಗದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಬಂಜಾರ ಸಮುದಾಯಕ್ಕೆ ಮೀಸಲಾತಿ ತಪ್ಪಿ ಹೋಗುವ ಯಾವುದೇ ಆತಂಕ ಬೇಡ. ಬಂಜಾರ ಸಮುದಾಯದ ಎಲ್ಲ ಬಾಂಧವರಿಗೆ ಸೂಕ್ತ ಅನುದಾನವನ್ನೂ ಕೊಟ್ಟಿದ್ದೇವೆ. ಕೆಲವು ತಪ್ಪು ತಿಳುವಳಿಕೆಯಿಂದ ಹೀಗಾಗಿದೆ. ಅತೃಪ್ತಗೊಂಡ ಸಮುದಾಯದ ನಾಯಕರೊಂದಿಗೆ ನಾನು ಮಾತನಾಡಿದ್ದೇನೆ. ಆದರೆ, ಕೆಲವರು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಕೆಟ್ಟ ಕಾರ್ಯಕ್ಕೆ ಪ್ರಚೋದನೆ ಕೊಡಬೇಡಿ: ರಾಜಕೀಯದಲ್ಲಿ ಪ್ರಚೋದನೆ ಮಾಡುವುದನ್ನು ನಿಲ್ಲಿಸಬೇಕು. ಮುಖ್ಯವಾಗಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬ ಬಂಜಾರ ಸಮುದಾಯದ ಮೇಲೆ ಅತಿ ಹೆಚ್ಚು ಪ್ರೀತಿ ಇಟ್ಟಿದೆ. ಆದ್ದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಅವರ ಮನೆಯ ಮುಂದೆ ಪ್ರತಿಭಟನೆ ಮಾಡಿದ್ದು ತಪ್ಪು. ಇನ್ನು ಮೀಸಲಾತಿ ಸಂಬಂಧ ಯಾವುದಾದರೂ ಅಸಮಾಧಾನ ಇದ್ದರೆ ನಮ್ಮ ಮನೆಯ ಮುಂದೆ ಬಂದು ಪ್ರತಿಭಟನೆ ಮಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಭಿಮಾನಿಗಳ ಒತ್ತಾಸೆ ಮೇರೆಗೆ ರಸ್ತೆಗೆ ಅಂಬರೀಶ್‌ ಹೆಸರು: ಕರ್ನಾಟಕದ ರೆಬಲ್ ಸ್ಟಾರ್, ಎಲ್ಲರ ಮನಸ್ಸನ್ನು ಗೆದ್ದಂತಹ ನೇರ ದಿಟ್ಟ ನಿರಂತರವಾಗಿ ಅಂಬರೀಶ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ. ಅಂಬರೀಶ್ ಅವರ ನೆನಪಿಗಾಗಿ ಇವತ್ತು ರೇಸ್ ಕೋರ್ಸ್ ರಸ್ತೆಯನ್ನು ಅಂಬರೀಶ್ ಅವರ ಹೆಸರಿನಲ್ಲಿ ಅತ್ಯಂತ ಸಂತೋಷದಿಂದ ನಾಮಕರಣ ಮಾಡಿದ್ದೇವೆ. ಇದು ಅವರು ಹೆಚ್ಚು ಓಡಾಡಿದ ಸ್ಥಳ. ಎಲ್ಲ ಅಭಿಮಾನಿಗಳ ಒತ್ತಾಸೆ ಮೇರೆಗೆ ಇವತ್ತು ಇವರ ಹೆಸರನ್ನು ಇಟ್ಟಿದ್ದೇವೆ. ಹಲವು ಪ್ರತಿಭೆಯಿರುವ ಮೇರು ವ್ಯಕ್ತಿತ್ವ ಅವರದ್ದು. ಸಿನಿಮಾದಲ್ಲಿ ಸಹಜವಾಗಿ ನಟನೆ ಮಾಡುತ್ತಿದ್ದರು. ಜನರನ್ನು ಹಿಡಿದಿಟ್ಟುಕೊಳ್ಳುವ ವ್ಯಕ್ತಿತ್ವ ಅವರಿಗಿತ್ತು ಎಂದರು.

ನಿಜ, ಸಿನಿಮಾ ಜೀವನದಲ್ಲಿ ನೇರ ವ್ಯಕ್ತಿತ್ವ:  ರೀಲ್ ಆ್ಯಂಡ್ ರಿಯಲ್ ಲೈಫ್ ಎರಡು ಒಂದೆಯಾಗಿದ್ದು, ನೇರ ವ್ಯಕ್ತಿತ್ವ ಅವರದ್ದಾಗಿತ್ತು. ಕ್ರೀಡೆಯಲ್ಲೂ ಪ್ರತಿಭೆಯನ್ನು ಹೊಂದಿದ್ದ ಅವರು, ಸಾರ್ವಜನಿಕ ಜೀವನಕ್ಕೆ ಬಂದಮೇಲೆ ವಸತಿ ಸಚಿವರಾಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಕಾವೇರಿ ವಿಚಾರ ಬಂದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು. ಅಧಿಕಾರ ಅವರನ್ನು ಹುಡುಕಿಕೊಂಡು ಬರುತ್ತಿತ್ತು. ನನಗೆ ಇವತ್ತು ಬಹಳ ಸಂತೋಷವಾಗಿದೆ. ಅಂಬರೀಶ್ ಅವರು ನನ್ನ ಮಿತ್ರರು. ಅವರ ಜೀವನ ತೆರೆದ ಪುಸ್ತಕ. ಹಲವಾರು ಬಾರಿ ಬೇಟಿಯಾಗಬೇಕು ಅಂದಾಗ ಅಲ್ಲೇ ರೇಸ್ ಕೋರ್ಸ್ ನಲ್ಲಿ ಇರುತ್ತೇನೆ ಬಾರಯ್ಯ ಎನ್ನುವವರು. ಅವರ ಹೆಸರನ್ನು ಬಿಟ್ಟು ಬೇರೆ ಯಾರ ಹೆಸರು ಕೂಡ ಈ ರಸ್ತೆಗೆ ಸೂಕ್ತವಲ್ಲ. ಅವರ ಕುಟುಂಸ್ಥರು ಒಪ್ಪಿ ಬಂದಿದ್ದಾರೆ. ಅವರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದ ಸಿಎಂ ಬೊಮ್ಮಾಯಿ‌ ಅಂಬರೀಶ್ ಅವರ  ಸ್ಮಾರಕ ಕೂಡ ಉದ್ಘಾಟನೆ ಮಾಡುತ್ತೇವೆ ಎಂದರು.

Renamed as Rebel Star Dr. MH Ambarish Road