ಚಿಕ್ಕಮಗಳೂರು: ಸ್ವಾರ್ಥ, ಪ್ರತಿಷ್ಠೆಗಳಿಂದ ಸಾಮಾಜಿಕ ಆರೋಗ್ಯ, ವ್ಯಕ್ತಿಗತ ನೆಮ್ಮದಿಗಳನ್ನು ಕಳೆದುಕೊಳ್ಳಬೇಕಾಗಿದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡದೆ ಇದ್ದರೆ ಮೌಲ್ಯಗಳು ಉಳಿಯಲು ಸಾಧ್ಯವಿಲ್ಲ ಎಂದು ಬಸವ ತತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಅವರು ಕಲ್ಯಾಣ ನಗರದ ಬಸವ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಾನುಭವಗೋಷ್ಠಿ ೩೫ ಹಾಗೂ ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಭಿನಂದನೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮೌಲ್ಯಗಳನ್ನು ಸರಿಯಾಗಿ ರಕ್ಷಿಸಿಕೊಳ್ಳದಿದ್ದರೆ ಏನಾಗಬಹುದು ಎಂಬುದಕ್ಕೆ ಇಂದು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ. ಮೌಲ್ಯಗಳಿಗೆ ಮಾದರಿಯಾಗಬೇಕಿದ್ದವರು ಅವುಗಳನ್ನು ಗಾಳಿಗೆ ತೂರಿ ಮೆರೆಯುತ್ತಿದ್ದಾರೆ ಎಂದು ವಿಷಾಧಿಸಿದರು.

ಉನ್ನತ ಸ್ಥಾನಮಾನದಲ್ಲಿ ಇದ್ದವರಿಂದಲೇ ಸಮಾಜಕ್ಕೆ ಅಪಾಯಕಾರಿಯಾಗಿರುವುದು ಇಂದು ನಡೆಯುತ್ತಿರುವ ದುರಂತಕ್ಕೆ ಪ್ರಮುಖ ಕಾರಣ. ಬಹುಪಾಲು ಮೌಲ್ಯಗಳ ಹರಣ ಮಾಡುತ್ತಿದ್ದಾರೆ. ಸ್ವಾರ್ಥ, ಪ್ರತಿಷ್ಠೆಗಳಿಗಿಂತಲೂ ಜೀವನ ಬಹಳ ದೊಡ್ಡದು ಎಂದು ಅರಿತು ಬಾಳಬೇಕಾಗಿದೆ ಎಂದು ಕರೆ ನೀಡಿದರು.

ಮಹಾಭಾರತದಲ್ಲಿ ವಸ್ತ್ರಾಪಹರಣ ನಡೆಯಿತು, ಈಗ ಮಾನಾಪಹರಣ ನಡೆಯುತ್ತಿದೆ, ಅತ್ಯಾಚಾರ, ಅನಾಚಾರಗಳಿಗೆ ಬದಲಾಗಿ ಶರಣರ ಪಂಚಾಚಾರಗಳನ್ನು ಅಳವಡಿಸಿಕೊಳ್ಳಬೇಕು, ಎಲ್ಲಾ ರಂಗಗಳಲ್ಲಿಯೂ ಭ್ರಷ್ಟರೇ ಕುಳಿತರೆ ಮೌಲ್ಯಗಳಿಗೆ ಮಾದರಿಯಾಗುವವರು ಯಾರು ಎಂದು ಪ್ರಶ್ನಿಸಿದರು.

ಕುಟುಂಬದಲ್ಲಿ ಮೌಲ್ಯಗಳ ಜಾಗೃತಿಯಾಗದೆ ಸಮಾಜದಲ್ಲಿ ಅದು ಸಾಧ್ಯವಾಗದು. ತನ್ನ ವೈಯಕ್ತಿಕ ಮೌಲ್ಯದ ರೂಪ ಧಾರಣೆಯಾಗುವುದು ನನ್ನ ಮನಸ್ಸಿನಿಂದ, ನನ್ನಿಂದಲೇ ಎಂಬುದನ್ನು ಬಿಟ್ಟು ಸರ್ಕಾರ ನಿಯಮಗಳನ್ನು ಮಾಡಿದರೆ ಮೌಲ್ಯಗಳನ್ನು ನಾವೇ ರೂಪಿಸಿಕೊಳ್ಳಬೇಕು. ಮನಸ್ಸು ಎಚ್ಚರಿಸದ ಮೌಲ್ಯಗಳು ಮೌಲ್ಯಗಳೇ ಅಲ್ಲ ಎಂದರು.

ಇಂದು ಮಾದರಿಯಾಗಬಲ್ಲ ವ್ಯಕ್ತಿತ್ವಗಳು ಎಲ್ಲಿವೆ ಎಂದು ಪ್ರಶ್ನಿಸಿದ ಶ್ರೀಗಳು ಸರಿದಾರಿಯನ್ನು ದಿಗ್ದರ್ಶಿಸುವವನೇ ನಾಯಕ. ಸತ್ಯ, ನ್ಯಾಯ ಮತ್ತು ಶ್ರಮದ ಮೌಲ್ಯಗಳು ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನಾಲಿಸುತ್ತವೆ. ದುಷ್ಟರಿಂದ ದೇಶ ಕುಲಗೆಡುತ್ತಿಲ್ಲ ಅವರ ವಿರುದ್ಧ ಸತ್ಯ ಹೇಳಲಿಕ್ಕೆ ಆಗದ ಶಿಷ್ಟರಿಂದ ದೇಶ ಹಾಳಾಗುತ್ತಿದೆ ಎಂದು ಪ್ರತಿಪಾಧಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾಡಿನ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದರ ಜೊತೆಗೆ, ಅನೇಕ ವಿಚಾರಗಳ ಮೂಲಕ ಪ್ರಬುದ್ಧತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿ ನಾಡಿಗೆ ಬೆಳಕಾಗುವಂತೆ ಬಸವ ಮಂದಿರ ಶ್ರೀ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಗುರುಮಠಗಳ ಮತ್ತು ಗುರುಗಳ ಆಶೀರ್ವಾದ ಸದಾ ನಮಗೆ ಸಮಾಜಕ್ಕೆ ಬೇಕಾಗುತ್ತದೆ. ಗುರುಗಳು ಸಮಾಜವನ್ನು ತಿದ್ದಿ, ತೀಡಿ ಉತ್ತಮ ಕಾರ್ಯಗಳನ್ನು ಮಾಡುತ್ತಿವೆ. ಶ್ರೀಗಳು ಭಕ್ತರನ್ನು ಸಮಯೋಚಿತವಾಗಿ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಇಂದು ಸಮಾಜದಲ್ಲಿ ಸ್ವಾರ್ಥ-ಪ್ರತಿಷ್ಠೆಯಿಂದಾಗಿ ನೆಮ್ಮದಿಯ ಬದುಕು ಮರೀಚಿಕೆಯಾಗಿದೆ, ಕೃಷಿಯಿಂದ ಸ್ವಾಸ್ಥ್ಯ ಸಮಾಜ ಕಟ್ಟಿ ಬೆಳೆಸಿದ್ದಾರೆ, ನಮ್ಮ ಹಿರಿಯರು ಇಂದು ಮಕ್ಕಳು ಕೃಷಿ ಬದುಕಿನಿಂದ ದೂರ ಉಳಿಯುತ್ತಿರುವುದು ತುಂಬಾ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.

ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಬುದ್ಧಿ ಮುಕ್ಕಾಲು ವಿದ್ಯೆ ಒಕ್ಕಾಲು ಆದರೆ ಎಲ್ಲಿಯೂ ಬದುಕಿ ಬರುತ್ತಾರೆ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಿ ನಿಂತಾಗ ಅಷ್ಟೇ ಗಟ್ಟಿಯಾಗುತ್ತೇವೆ, ಕಷ್ಟವನ್ನು ಎದುರಿಸದಿದ್ದರೆ ಗಟ್ಟಿಗೆ ಅವಕಾಶ ಸಿಗುವುದಿಲ್ಲ ಎಂದು ತಿಳಿಸಿದರು.

ದೇವರು ಒಂದಲ್ಲ ಒಂದು ಅವಕಾಶವನ್ನು ಸೃಷ್ಟಿ ಮಾಡಿರುತ್ತಾನೆ. ಹೀಗಾಗಿ ಒಂದು ಅವಕಾಶ ತಪ್ಪಿತು ಅಂತ ಜೀವನ ಮುಗಿದುಹೋಯಿತು ಎಂದು ಭಾವಿಸಬೇಡಿ, ಹೊಸತನವನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿದ ಎಪಿಜೆ ಅಬ್ದುಲ್ ಕಲಾಂ ಜೀವನವನ್ನು ಸ್ಮರಿಸಿ, ದೇವರು ಹುಟ್ಟು-ಸಾವು ಎರಡನ್ನು ಮಾತ್ರ ಬರೆಯುತ್ತಾನೆ ಎಂದು ಹೇಳಿದರು.

ವಿದ್ಯಾರ್ಥಿಗಳು ಇದು ನಮ್ಮಿಂದ ಸಾಧ್ಯವಿಲ್ಲ ಎಂಬ ಮನೋಭಾವದಿಂದ ಹೊರಬಂದು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿ ಸಾಧನೆ ಮಾಡಿದಾಗ ಮಾತ್ರ ಸಂಬಂಧ ಇಲ್ಲದವರು ನೆನಪಿಟ್ಟುಕೊಳ್ಳುತ್ತಾರೆ ಎಂದರು.

ರಾಷ್ಟ್ರಭಾವ ಮತ್ತು ಸಮಾಜಭಾವ ಇಲ್ಲದಿದ್ದರೆ ನಾವೆಲ್ಲ ಒಂದು ಎಂಬ ಭಾವನೆ ಇಲ್ಲದೆ ಹೋದರೆ ರಾಷ್ಟ್ರವೂ ಸತ್ತು ಮನುಷ್ಯರೂ ಇರಲು ಸಾಧ್ಯವಿಲ್ಲ ಆದ್ದರಿಂದ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗೋಣ ಎಂದು ಕರೆ ನೀಡಿದರು.

ಪತ್ರಕರ್ತ ಡಾ. ವೆಂಕಟೇಶ್ ಸಾಮಾಜಿಕ ಜೀವನ ಮತ್ತು ಮೌಲ್ಯ ಪ್ರಜ್ಞೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಡೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ಓಂಕಾರಪ್ಪ, ಚಿದಾನಂದ, ಚಂದ್ರಶೇಖರ್, ಮಲ್ಲೇಗೌಡ ಮತ್ತಿತರರು ಇದ್ದರು.

A Shivanubhava concert organized at Basava Mandir