ಚಿಕ್ಕಮಗಳೂರು: ಯಾವುದೇ ಫಲಾಪೇಕ್ಷೆಯಿಲ್ಲದೇ ಸೇವೆ ಮಾಡಬೇಕು ಎಂಬ ಮನೋಭಾವ ಇರುವವರಿಗೆ ಲಯನ್ಸ್ ಸಂಸ್ಥೆ ಸೂಕ್ತ ವೇದಿಕೆ ಎಂದು ಲಯನ್ಸ್ ಮಾಜಿ ರಾಜ್ಯಪಾಲ ಹೆಚ್.ಆರ್. ಹರೀಶ್ ಹೇಳಿದ್ದಾರೆ.

ನಗರದ ಲಯನ್ಸ್ ಭವನದಲ್ಲಿ ನಡೆದ ೨೦೨೪-೨೫ನೇ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡುತ್ತಿದ್ದಾರೆ.

ಮೆಲ್ವಿನ್ ಜೋನ್ಸ್ ಎಂಬಾತ ಹುಟ್ಟುಹಾಕಿದ ಲಯನ್ಸ್ ಸಂಸ್ಥೆ ಇಂದು ವಿಶ್ವದೆಲ್ಲೆಡೆ ಹಬ್ಬಿದ್ದು, ಯಾವುದೇ ಫಲಾಪೇಕ್ಷೆ ಇಲ್ಲದೇ ೪೯ ಸಾವಿರ ಲಯನ್ಸ್ ಸೇವಾ ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.

ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಸೇವಾ ಸಂಸ್ಥೆಗಳಲ್ಲಿ ಲಯನ್ಸ್ ಸಂಸ್ಥೆ ಅಗ್ರಸ್ಥಾನದಲ್ಲಿದ್ದು, ಸೇವೆ ಮಾಡುವ ಮನೋಭಾವ ಇರುವವರು ಮಾತ್ರ ಲಯನ್ಸ್ ಸಂಸ್ಥೆಗೆ ಸೇರಬಹುದು. ಇದರಿಂದ ಲಾಭ ಮಾಡಬಹುದು ಎಂಬ ಕಲ್ಪನೆಯಿಂದ ಯಾರೂ ಈ ಸಂಸ್ಥೆಗೆ ಬರಬೇಡಿ ಎಂದು ಕಿವಿಮಾತು ಹೇಳಿದರು.

೫೦ ವರ್ಷಗಳನ್ನು ಪೂರೈಸುತ್ತಿರುವ ಸೇವಾ ಸಂಸ್ಥೆಗಳಲ್ಲಿ ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಕೂಡ ಒಂದಾಗಿದ್ದು, ಈ ವರ್ಷದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಮತ್ತವರ ತಂಡ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದು, ಸುವರ್ಣ ಮಹೋತ್ಸವ ಆಚರಣೆ ಸವಿ ನೆನಪಿಗಾಗಿ ಸುಮಾರು ೪೦ ಲಕ್ಷ ರೂ. ವೆಚ್ಚದಲ್ಲಿ ಲಯನ್ಸ್ ಸಂಸ್ಥೆಯ ಹಿರಿಯರು ಹಾಗೂ ದಾನಿಗಳ ನೆರವಿನಿಂದ ಲಯನ್ಸ್ ಸುವರ್ಣ ಭವನ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಈ ಸಮಿತಿಯ ಅಧ್ಯಕ್ಷರಾದ ಡಾ. ಜೆ.ಪಿ. ಕೃಷ್ಣೇಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಲಯನ್ಸ್ ಸಂಸ್ಥೆಗೆ ಒಂದು ಮಾದರಿಯಾಗಲಿದೆ ಎಂದು ತಿಳಿಸಿದರು.

ಈ ವರ್ಷದಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಮತ್ತವರ ತಂಡ ಕಳೆದ ಒಂದು ವರ್ಷದಲ್ಲಿ ೪೫ ಹೊಸ ಸದಸ್ಯರ ಸೇರ್ಪಡೆ ಲಯನ್ಸ್ ಸಂಸ್ಥೆಯ ಒಂದು ದೊಡ್ಡ ಸಾಧನೆಯಾಗಿದ್ದು, ಇದರ ಜೊತೆಗೆ ಅರಣ್ಯ ಇಲಾಖೆಗೆ ಸೇರಿದ ೫೦ ಎಕರೆ ಭೂ ಪ್ರದೇಶದಲ್ಲಿ ೪೮೦೦ ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ನಿಭಾಯಿಸಿರುವುದು ಸಾಮಾನ್ಯವಾದ ಕೆಲಸವಲ್ಲ ಎಂದು ತಿಳಿಸಿದರು.

ಲಯನ್ಸ್ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ ಚಿಕ್ಕಮಗಳೂರಿನಲ್ಲಿ ಅಸ್ಥಿತ್ವಕ್ಕೆ ಬಂದ ಲಯನ್ಸ್ ಕ್ಲಬ್ ತನ್ನ ೪೯ ವರ್ಷಗಳನ್ನು ಪೂರೈಸಿ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದು, ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಇಲ್ಲಿ ಕೆಲಸ ಮಾಡಿದ ಹಿರಿಯ ಶ್ರಮ ಕಾರಣವೆಂದು ತಿಳಿಸಿ ಇಂತ ಸುವರ್ಣ ಮಹೋತ್ಸವ ವರ್ಷದಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿರುವ ಜಿ. ರಮೇಶ್ ಮತ್ತವರ ತಂಡದ ಕಾರ್ಯ ಶ್ಲಾಘನೀಯ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಮಾತನಾಡಿ ಯಾವುದೇ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡಲು ಮುಂದೆ ಗುರಿ ಹಿಂದೆ ಗುರು ಇರಬೇಕು. ತಮ್ಮ ಅಧಕಾರ ಅವಧಿಯಲ್ಲಿ ಒಂದಿಷ್ಟು ಒಳ್ಳೆಯ ಕೆಲಸ ಮಾಡಲು ಹಿರಿಯರಾದ ಡಾ. ಜೆ.ಪಿ. ಕೃಷ್ಞೇಗೌಡ ಮತ್ತು ಲಯನ್ಸ್ ಮಾಜಿ ರಾಜ್ಯಪಾಲ ಹೆಚ್.ಆರ್. ಹರೀಶ್ ಮತ್ತು ಸಂಸ್ಥೆಯಲ್ಲಿರುವ ಹಿರಿಯರ ಸಲಹೆ, ಸಹಕಾರ ಕಾರಣ ಎಂದರು.

ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಪುಷ್ಪರಾಜ್ ಮಾತನಾಡಿ ತಮ್ಮ ಅಧಿಕಾರ ಅವಧಿಯಲ್ಲಿ ಕ್ಲಬ್‌ನ ಹಿರಿಯ ಸದಸ್ಯರ ಸಲಹೆ ಸಹಕಾರ ಪಡೆದು ಲಯನ್ಸ್ ಸಂಸ್ಥೆಯ ಹಾಗೂ ಈ ಸಂಸ್ಥೆಯಲ್ಲಿ ಕೆಲಸ ಮಾಡಿದ ಹಿರಿಯ ಆಶಯಗಳಿಗೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗೋಪಾಲಗೌಡ, ಲಯನ್ಸ್ ಕ್ಲಬ್‌ನ ವಲಯ ಅಧ್ಯಕ್ಷ ಲಕ್ಷ್ಮಣಗೌಡ, ಲಯನ್ಸ್ ರೀಜಿನಲ್ ಛೇರ್‍ಮನ್ ಮಂಜುನಾಥ್‌ಗೌಡ, ಲಯನ್ಸ್ ಜೋನಲ್ ಅಧ್ಯಕ್ಷ ಬಿ.ಎನ್. ವೆಂಕಟೇಶ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕಾರ್ಯದರ್ಶಿ ಟಿ. ನಾರಾಯಣಸ್ವಾಮಿ ಕ್ಲಬ್‌ನ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಬಾಲಕೃಷ್ಣ ಧ್ವಜವಂದನೆ ಬೋಧಿಸಿದರು. ಲಯನ್ಸ್ ಸಂತೋಷ್ ಸಂತು ಲಯನ್ಸ್ ಕ್ಲಬ್‌ನ ನೀತಿ ಸಂಹಿತೆ ಮಂಡಿಸಿದರು. ಲಯನ್ಸ್ ಕ್ಲಬ್‌ನ ಹಿರಿಯರಾದ ಎಸ್.ಆರ್. ವೈದ್ಯ ನೂತನ ಪದಾಧಿಕಾರಿಗಳ ಪರಿಚಯ ನಡೆಸಿದರು.

ಲಯನ್ಸ್ ಕ್ಲಬ್ ನೂತನ ಕಾರ್ಯದರ್ಶಿ ಗೋಪಿಕೃಷ್ಣ, ಲಯನ್ಸ್ ಕ್ಲಬ್‌ಗೆ ಸದಸ್ಯರಾಗಿ ಸೇರ್ಪಡೆಗೊಂಡ ಸದಸ್ಯರನ್ನು ಪರಿಚಯಿಸಿದರು. ಲಯನ್ಸ್ ನೇತ್ರ ವೆಂಕಟೇಶ್ ಮಾಜಿ ರಾಜ್ಯಪಾಲ ಹೆಚ್.ಆರ್. ಹರೀಶ್‌ರವರನ್ನು ಪರಿಚಯಿಸಿದರು.

ಲಯನ್ಸ್‌ಕ್ಲಬ್ ನೂತನ ಖಜಾಂಚಿ ಎಂ.ಎನ್. ಹರೀಶ್, ಉಪಾಧ್ಯಕ್ಷ ಸಿ.ಎನ್. ಕುಮಾರ್, ಸಹಕಾರ್ಯದರ್ಶಿ ರತ್ನಾಕರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಗತಿಪರ ಕೃಷಿಕ ಪ್ರಶಸ್ತಿ ಪಡೆದ ಲಕ್ಷ್ಮಣಗೌಡ, ಚುಟುಕು ಸಾಹಿತಿ ಗುರುರಾಜ್ ಆಲಮಠ, ಹಿರಿಯ ಪತ್ರಕರ್ತ ಜಿ.ಎಂ. ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಸೇವಾ ಟ್ರಸ್ಟನ ಕಾರ್ಯದರ್ಶಿ ಪ್ರೊ. ಜಗದೀಶಪ್ಪ ಕಾರ್ಯಕ್ರಮ ನಿರೂಪಿಸಿದರು.

Inauguration ceremony of Lions new officers