ತೇಜಸ್ವಿ’ ಯುವ ಮನಸ್ಸುಗಳ ಮೋಡಿ ಮಾಡಿದ; ಚಿಂತಕರಿಗೆ ವೈಚಾರಿಕ ಪ್ರೇರಣೆ ನೀಡಿದ; ವಿಚಾರವಂತರಿಗೆ ಸಾಮರಸ್ಯದ ತಿಳಿವು ಹೆಚ್ಚಿಸಿದ; ಆಡದಯೇ ಮಾಡುತ್ತಾ ‘ರೂಢಿಯೊಳಗುತ್ತಮ’ ಆಗುವುದು ಹೇಗೆಂದು ಬದುಕಿದ ಪರಿಯಿಂದಲೇ ಎಳೆ ಎಳೆಯಾಗಿ ತಿಳಿಸಿದ; ನಿರುತ್ತರದಲ್ಲೇ ಬದುಕಿನ ಉತ್ತರವನ್ನು ನೀಡಿದ; ಎಲ್ಲಾ ಮನೋಭಾವದವರೆಗೂ ಹತ್ತಿರತ್ತಿರವಾಗುತ್ತಲೇ ಎತ್ತರೆತ್ತರ ಬೆಳೆದವರು ನಮ್ಮ ತೇಜಸ್ವಿ. ಭೌತಿಕವಾಗಿ ಮರೆಯಾದರೂ ‘ತಮ್ಮತನ’ದಿಂದ ಕನ್ನಡದ ಜಗತ್ತಿನಲ್ಲಿ ವಿಶಿಷ್ಟ ಸಂಚಲನವನ್ನು ಹೇಗೆಲ್ಲಾ ಮೂಡಿಸುತ್ತಲೇ ಇರಬಹುದು ಎಂಬುದಕ್ಕೆ ಅಪೂರ್ವ ನಿದರ್ಶನ ಆಗಿರುವವರೂ ಇವರು!

ದಾಂಪತ್ಯ ಜೀವನದ ಪರಮಪಾವಿತ್ರ್ಯದ ಕ್ಷಣಗಳೆಂದರೆ, ಸತಿಪತಿಗಳೊಂದಾಗಿ ತಮ್ಮಿಬ್ಬರ ಸಾಂಗತ್ಯದ ಕುಡಿಯನ್ನು ನಿರೀಕ್ಷಿಸುವ ಅಪೂರ್ವ ಸಮಯ. ಜಗತ್ತಿನೆಲ್ಲ ತಂದೆ ತಾಯಿಗಳೂ ಅನುಭವಿಸುವ ಈ ಭಾವ ಸಂಭ್ರಮವನ್ನು ಆ ಎಲ್ಲಾ ಪೋಷಕರ ಎದೆಯಾಳದ ದನಿಯಾಗಿ ಕುವೆಂಪು ತೆರೆದಿಟ್ಟಿದ್ದಾರೆ:

ಬಾಲ್ಯದಿಂದಲೂ ವಿಶೇಷ ಪರಿವೇಷದ ಆವರಣದಲ್ಲಿಯೇ ಬೆಳೆದು ಸ್ವಂತ ಪರಿಶ್ರಮದಿಂದ ಬೆಳೆದು ಅತ್ಯುತ್ತಮ ಕವಿಸಾಹಿತಿಯೆಂದು ಗುರುತಿಸಿಕೊಂಡರೂ ಕುವೆಂಪು ಅವರು ಗೃಹಸ್ಥಾಶ್ರಮ ಸ್ವೀಕರಿಸುವ ಬಗೆಗೆ ತೀವ್ರ ದ್ವಂದ್ವ ಹೊಂದಿದ್ದರು. ಕಡೆಗೆ
‘ಕಬ್ಬಿಗಗೆ ನಿನ್ನೆದೆಯೆ ಕಟ್ಟಕಡೆಯ ಆಶ್ರಮ ಮತ್ತು ಉತ್ತಮ ಆಶ್ರಯ’ ಎಂದು ಪರಿಭಾವಿಸಿ ಪ್ರೇಮಾವತಾರಿಣಿಯಾದ ಹೇಮಾವತಿಯನ್ನು ಸತಿಯೆಂದು ಆರಿಸಿಕೊಂಡರು. ಆ ಗೃಹತಪಸ್ವಿನಿಯನ್ನು ತಮ್ಮಾತ್ಮದ ಜೀವನ ಲಕ್ಷ್ಮಿಯಾಗಿ ಹೃದಯದ ವಾಣಿಯಾಗಿ ಮುದ್ದಿನ ರಾಣಿಯಾಗಿ ಒಲಿದು ಆರಾಧಿಸುವ ವೇಳೆ, ಅವರ ಗರ್ಭದಗುಡಿಯಲ್ಲಿ ದಿವ್ಯಾರ್ಭಕ ಬೆಳೆಯುತ್ತಿರುವ ಸೂಚನೆ ಸಿಕ್ಕಿದಾಗ ಗರ್ಭಿಣಿ ಸತಿ ಕವಿ ಕಣ್ಣಿಗೆ ದೇವಾಲಯವಾಗುತ್ತಾರೆ, ಪೂಜ್ಯೆಯಾಗುತ್ತಾರೆ. ಸೃಷ್ಟಿ ಸಾಮ್ರಾಜ್ಯೆಯಾಗಿ ಕಾಣುತ್ತಾರೆ.

ಆ ಸಮಯದಲ್ಲಿ ಅವರು ತಮಗೆ ಎಂತಹ ಪುತ್ರ ಜನ್ಮಿಸಿದರೆ ಚಂದ ಎನ್ನುವ ಭಾವಕ್ಕೆ ಹೀಗೆ ನುಡಿರೂಪ ಕೊಟ್ಟಿದ್ದಾರೆ:

‘ಕಳುಹಿಸು ಯೋಗ್ಯನನು,
ಹೇ ಗುರುವೇ,
ಕಳುಹಿಸು ಭಾಗ್ಯನನು
ಶ್ರೀ ಗುರುವೇ.

ಕಳುಹಿಸು ಮಂಗಳ ಚೆಲುವನನು
ಲೋಕವನೊಲಿವನನು ;
ಬಾಳಿನ ಬವರವ ಗೆಲುವನನು,
ನಿನ್ನೊಳು ನಿಲುವನನು…..’

ಎಂದು ಮನದುಂಬಿ ಹಾರೈಸುತ್ತಾ ಪವಿತ್ರ ಚರಿತ್ರನನ್ನೂ ಗೌರವ ಪಾತ್ರನನ್ನೂ ಕಾವ್ಯಾಸಕ್ತನನ್ನೂ ಪುತ್ರನಾಗಿ ಬರಲೆಂದು ನಿರೀಕ್ಷಿಸುತ್ತಾರೆ. ಕವಿಗೆ ಕುಮಾರಸಂಭವದ ಸುದ್ದಿ ಕೇಳಿದೊಡನೆ ಆನಂದದ ಓಕುಳಿಯ ಬುಗ್ಗೆ ಚಿಮ್ಮಿತು. ಎದೆಯಲ್ಲಿ ಕಾಮನ ಬಿಲ್ಲು ಕಟ್ಟಿತು. ಕವಿಕಲ್ಪನೆ ಇಂದ್ರನ ಅಮರಾವತಿಗೆ ಲಗ್ಗೆ ಹಾಕಿ, ಐರಾವತದ ಬೆನ್ನಿಗೆ ಏರಿ, ದೇವಗಂಗೆಯಲ್ಲಿ ಮಿಂದು, ಅಮೃತವನ್ನು ಕುಡಿದು ಗುರುದೇವನ ಪಾದಗಳನ್ನು ಮುಟ್ಟಿ ‘ನಿನ್ನ ಕೃಪೆ ನನ್ನ ಸತಿ ಸುತರ ಮೇಲಿರಲಿ ಸರ್ವದಾ, ಶ್ರದ್ಧೆ ಬಳುಕದೆ ನಿತ್ಯವಾಗಿರಲಿ, ಪ್ರೇಮಾಂಗಿನಿಯ ನನ್ನ ಕುವರನಾಗಲಿ ಪೂರ್ಣಚಂದ್ರ ಸಮ ತೇಜಸ್ವಿ’ ಎಂದು ಬೇಡಿಕೊಂಡಿತಂತೆ!

ಈ ಪೂರ್ಣ ಸುಧಾಕರ ತೇಜಸ್ವಿಯನ್ನು ಕವಿ ಸ್ವಾಗತಿಸುವುದು ಹೀಗೆ :

‘ನಮ್ಮಾತ್ಮದ ಅಮೃತತ್ವದ ಬಿಂದುವೆ,
ನಮ್ಮಿಬ್ಬರ ಚಿರಸುಖರಸ ಸಿಂಧುವೆ,
ಆ ಸಿಂಧುವನುಕ್ಕಿದ ಪೂರ್ಣೇಂದುವೆ,
ಸ್ವಾಗತ ನಿನಗೆಲೆ ಕಂದಯ್ಯ!

ನಮ್ಮಾತ್ಮದ ಜನ್ಮಾಂತರದ ಬಂಧುವೆ,
ನಮ್ಮಿಬ್ಬರ ಕಲ್ಪಾಂತರ ಬಂಧವೆ,
ಮಂಗಳ ನಿನಗೋ ಜೀವಾನಂದವೆ,
ನಮ್ಮೆದೆ ಬಾನಿನ ಚಂದಯ್ಯ!’

ಕವಿಯ ಸಂತಸದ ಒಂದು ಹನಿಯಷ್ಟೂ ಕೂಡ ಚಕ್ರಾಧಿಪತಿಗಳಿಗಿರುವುದಿಲ್ಲ ಎಂಬ ಸತ್ಯಸ್ಯಸತ್ಯವನ್ನು ಈ ಮಗುವಿನ ಒಡನಾಟದಲ್ಲಿ ಕಂಡುಕೊಳ್ಳುವ ಕವಿಗೆ ಈ ಮಗುವಿಗೆ ಹರಕೆ ನೀಡಿದಷ್ಟೂ ತಣಿವಾಗುವುದಿಲ್ಲ.

‘ವಿಶ್ವವೆಲ್ಲಾ ಸೇರಿ ವಿಶ್ವಾಸದಲಿ ಕೋರಿ
ಪಡೆದಂದವೀಯೊಡಲ ಚಂದ, ಕಂದಾ.
ವಿಶ್ವಾತ್ಮವನೆ ಸಾರಿ, ವಿಶ್ವದೊಲವನೆ ತೋರಿ,
ವಿಶ್ವದಾನಂದವಾಗೆನ್ನ ಕಂದಾ!’

ಮೈಯ ಭೋಗಕ್ಕೆ ಮನದ ಯೋಗದ ಮುಡಿಪನ್ನಿತ್ತು ಪಡೆದ ಪ್ರಾರ್ಥನೆಯ ಶಿಶು ತನುಜಾತನಷ್ಟೇ ಅಲ್ಲ, ಆತ್ಮಜಾತನೂ ಕೂಡ. ಈ ಮಗುವಿನ ಕಾಯಕಾಂತಿಗೆ ತಾಯಿತಂದೆಯರ ಮೈಯ ತೇಜಸ್ಸಿನಷ್ಟೇ ಆತ್ಮದ ಓಜಸ್ಸೂ ಕಾರಣ ಎಂದು ನಂಬಿದ ಕವಿ ತತ್ವದಿಂದ, ಕಾವ್ಯದಿಂದ, ವಿಜ್ಞಾನದಿಂದ, ಋಷಿಗಳಿಂದ, ಕವಿಗಳಿಂದ, ಆಚಾರ್ಯವರ್ಯರಿದ ಪಡೆದ ಎಲ್ಲಾ ಸುಜ್ಞಾನ ಕೃಪೆಗಳನ್ನೂ ನೆರವಿಟ್ಟು ಈ ಮಗುವಿನ ತೇಜಸ್ವೀ ವ್ಯಕ್ತಿತ್ವವನ್ನು ಪಡೆದುದಾಗಿ ಹೆಮ್ಮೆ ಪಡುತ್ತಾರೆ.

ಮಗುವಿನ ‘ಮಗು’ ತನದೊಡನೇ ಕವಿಯ ‘ತಂದೆ’ ತನವೂ ಹಿಗ್ಗಿ ಬೆಳೆಯತೊಡಗುತ್ತದೆ. ಮಗು ಹುಟ್ಟಿದ ಮೇಲೆಯೇ ‘ತಂದೆ’ ತನವನ್ನು ಪಡೆದ ಕವಿತಂದೆಗೆ ಮಗುವಿನಷ್ಟೇ ವಯಸ್ಸು. ಸುಳ್ಳಲ್ಲ! ದೇವರ ಹರಕೆಯು ಬಾನಿಂದ ಭೂಮಿಗೆ ನೀಡಿದ ಕೈ ಈ ಕಂದನ ಮೈ. ಈ ಮುದ್ದು, ಈ ಸೊಗಸು, ಈ ಪೆಂಪು, ಈ ಇಂಪುಗಳನ್ನು ಬೇರೆಯವರಿಂದ ಮಾಡಲು ಸಾಧ್ಯವೇನು? ಎಂದು ಸುಖಿಸುವ ಕವಿ ಈಗ ತಮ್ಮದೇ ಮಗುವಿನ ಮುಖದಲ್ಲಿ ಬ್ರಹ್ಮಾಂಡವನ್ನೇ ಗುರುತಿಸುವ ಸಿದ್ದಿ ಪಡೆದಿದ್ದಾರೆ.

‘ಸೂರ್ಯ ಚಂದ್ರರಲೆಯುತಿಹರಿಲ್ಲಿ;
ಉರಿದಿವೆ ತಾರಾ ಕೋಟಿಗಳೆಲ್ಲ;
ಹೊಳೆ ತೊರೆ ಹರಿದಿವೆ; ಮುನ್ನೀರ್ ಮೊರೆದಿವೆ;
ಪರ್ವತ, ಕಾನನ ಖಗಮೃಗ ಮೆರೆದಿವೆ;
ಸೃಷ್ಟಿಯೊಳೇನೇನಿಹುದೋ ಎಲ್ಲಾ
ಈ ಮುಖದೊಳೆ ಕವಿ ಕಾಣಲು ಬಲ್ಲಾ’

ಈ ಮಗುವಿನೊಡನೆ ಕವಿತಂದೆ ಹೊರನಡೆದರೆ, ಈ ಯೌವನ ಶಿಶುತನಗಳ ಜೋಡಿಯ ನೆರಳೂ ಎಳೆಬಿಸಿಲೂ ಜತೆಗೂಡಿ ಕುಣಿದಾಡಿದರೆ ಮೂರು ಲೋಕಗಳೂ ತಲ್ಲಣಿಸುತ್ತವಂತೆ. ಗಾಳಿ ನೀರು ಬೆಳಕು ಭೂಮಿ ಗಗನಗಳೆಲ್ಲಾ ತಾವೂ ಹೀಗೇ ತಮ್ಮದೇ ಮಗುವಿನೊಡನೆ ನಲಿಯಬೇಕೆಂದು ಮನ ಮಾಡುತ್ತಾವಂತೆ!

ಕವಿ ಹೇಳುತ್ತಾರೆ;

‘ಸಂಸಾರದ ಸಾಧನೆಗಿದೆ ಸಿದ್ಧಿ :
ಸಕಲೈಶ್ವರ್ಯದ ಸುಖಕಿದೆ ಕಣ್:
ಕಂದನೊಡನೆ ಕುಣಿದಾಡುವ ಬುದ್ಧಿ;
ಕಂದನ ಸಿರಿಮೆಯ್ಗಂಟಿದ ಮಣ್!
ಇನ್ನೆಲ್ಲರಸುವೆ? ಇಲ್ಲಿದೆ, ಕಾಣ್,
ಈಶನ ಕಣ್! ’

ಹೀಗೆ ರಸ‌ಋಷಿಯನ್ನೇ ತಂದೆಯಾಗಿ ಪಡೆದು ಅವರ ವಾತ್ಸಲ್ಯಜೇನಿನ ಸವಿಯನುಂಡು ಅವರ ಮಮತಾಭಾವದ ಸಿರಿರಕ್ಷೆಯಲ್ಲಿ ಬೆಳೆದ ಭಾಗ್ಯವಂತ ಮಗು ತೇಜಸ್ವಿ.

ಮುಂದೆ ಅನೇಕ ರೀತಿಯ ಸಂಕಷ್ಟಗಳು ಸಂಘರ್ಷಗಳು ಎದುರಾದಾಗಲೆಲ್ಲ ಅವುಗಳನ್ನು ಒಂಟಿ ಸಲಗದಂತೆ ತನಗೆ ತಾನೇ ಎದುರಿಸುತ್ತಾ, ತನಗೆ ಖಚಿತ ಅನಿಸಿದ್ದನ್ನು ತನ್ನಿಷ್ಟದಂತೆ ಮಾಡುತ್ತಾ, ತನ್ನ ಆತ್ಮದ ಅಭೀಪ್ಸೆಯಂತೆ ಇಡೀ ಜೀವನವನ್ನು ನಡೆಸುವ ಅಪೂರ್ವ ಸಿದ್ಧಿಯನ್ನು ತೇಜಸ್ವಿ ಪಡೆದುಕೊಂಡಿದ್ದರೆ ಅದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು, ಅವರು ಬಾಲ್ಯದಲ್ಲಿ ಪಡೆದುಕೊಂಡ ಈ ರೀತಿಯ ಅಂತಃಕರಣದ ಅಮೂಲ್ಯ ಪ್ರೀತಿ ವಾತ್ಸಲ್ಯಗಳ ಶ್ರೀರಕ್ಷೆ.

ಬಾಲ್ಯದಲ್ಲಿಯೇ ಪುಸ್ತಕಗಳನ್ನು ಎಡೆಬಿಡದೆ ಓದುವ ಹವ್ಯಾಸ ರೂಡಿಸಿಕೊಂಡಿದ್ದ ತೇಜಸ್ವಿಗೆ ಕುವೆಂಪು ಓದು ಹೇಗಿರಬೇಕು ಎನ್ನುವುದನ್ನು ‘ಕೂಸಿನ ಕನಸು’ ಕವನದ ವಿಶೇಷ ಅರ್ಥಪರಂಪರೆಯನ್ನು, ಧ್ವನಿಪರಂಪರೆಯನ್ನು ವಿವರಿಸಿ ವಿವರಿಸಿ ಹೇಳುತ್ತಾ ತೇಜಸ್ವಿಯ ಅಂತರಾತ್ಮದ ಬಾಗಿಲನ್ನು ತೆರೆದುಕೊಡುತ್ತಾರೆ. ಇದನ್ನು ಮನಸಾ ಅನುಭವಿಸಿದ ತೇಜಸ್ವಿ ಹೇಳುವುದು: ‘ಅಣ್ಣ ನಮಗೆ ಕೊಟ್ಟ ಶಿಕ್ಷಣವೆಲ್ಲ ಹೇಗೆ ಬದುಕಬೇಕು ಎನ್ನುವುದರ ಬಗ್ಗೆಯೇ ಹೊರತು ಹೇಗೆ ಬರೆಯಬೇಕು ಎಂಬುದರ ಬಗ್ಗೆ ಚಕಾರವೆತ್ತಿಲ್ಲ. ಬಹುಶಃ ಬರೆಯುವ ಪ್ರತಿಭೆ ಜನ್ಮಜಾತವಾಗಿ ಇರಬೇಕೇ ಹೊರತು ಅದು ಹೇಳಿಸಿಕೊಂಡು ಬರುವಂಥದಲ್ಲ, ದೊಡ್ಡ ಬದುಕನ್ನು ಬದುಕದೆ ಶ್ರೇಷ್ಠ ಲೇಖಕ ಆಗುವುದು ಅಸಾಧ್ಯ, ಮಕ್ಕಳ ಬಗ್ಗೆ ಹೆಚ್ಚಿನ ಮಹತ್ವಾಕಾಂಕ್ಷೆ ಇಟ್ಟುಕೊಳ್ಳದೆ ಮಕ್ಕಳು ಮಾನ ಮರ್ಯಾದೆಗಳಿಂದ ಬದುಕಿದರೆ ಸಾಕೆಂಬುದು ಕುವೆಂಪು ಅವರ ಧೋರಣೆಯಾಗಿತ್ತು.(ಅಣ್ಣನ ನೆನಪು).

ಆದರೆ ‘ಕೂಸಿನ ಕನಸು’ ಕವನದ ಅರ್ಥ ಕೇಳುಕೇಳುತ್ತಾ ಸುಮಾರು ಹತ್ತು ಹನ್ನೆರಡು ವರ್ಷದ ಹುಡುಗ ತೇಜಸ್ವಿಗೆ ಬ್ರಹ್ಮಾಂಡ ಸೃಷ್ಟಿಯ ಬಗೆಗೆ, ಜೀವವಿಕಾಸದ ಬಗೆಗೆ ಅಸಾಧಾರಣ ಅನುಭವ ದಕ್ಕಿತ್ತು. ವೈಜ್ಞಾನಿಕ ಮಾಹಿತಿಗಳ ಸಮುಚ್ಛಯ ಕಿನ್ನರ ಕಥೆಯಂತೆ, ನಿರ್ಜೀವ ಡಿಕ್ಷನರಿಯೊಂದು ಇದ್ದಕ್ಕಿದ್ದಂತೆ ಸಜೀವ ಕಾದಂಬರಿಯಾದಂತೆ ಭಾಸವಾಯಿತಂತೆ. ವಿಜ್ಞಾನ ವಿಶ್ಲೇಷಿಸಿ ಬಿಡಿಬಿಡಿಯಾಗಿ ಕಳಚಿಟ್ಟಿದುದನ್ನು ಸಾಹಿತ್ಯ ಸಂಶ್ಲೇಷಿಸಿ ಸಜೀವಗೊಳಿಸುತ್ತಾ ಅರ್ಥಮಾಡಿಸುವ ಅಸಾಧಾರಣ ಗ್ರಹಣಶಕ್ತಿಯ ಪರಿಚಯವಾಯಿತು. ತೇಜಸ್ವಿ ಬರವಣಿಗೆಗೆ ಅಪೂರ್ವ ಅಡಿಪಾಯವಾಯಿತು.

ನಂತರದಲ್ಲಿ ತೇಜಸ್ವಿ ಬೆಳೆದರು, ಕನ್ನಡದ ವಿಸ್ಮಯಜಗತ್ತನ್ನು ಅಪರೂಪದ ನೆಲೆಯಲ್ಲಿ ಬೆಳೆಸಿದರು. ಅವರ ಸತ್ವಪೂರ್ಣ ಬರೆವಣಿಗೆ ಕನ್ನಡಕ್ಕೆ ವಿಶೇಷ ಆಯಾಮವನ್ನೇ ತಂದುಕೊಟ್ಟಿತೆಂಬುದರಲ್ಲಿ ಎರಡನೇ ಮಾತಿಲ್ಲ. ಒಬ್ಬ ಪ್ರಖ್ಯಾತ ಕವಿ, ಉಪಕುಲಪತಿಗಳ ಮಗನಾಗಿ ಲೌಕಿಕ ಜಗತ್ತಿನ ಯಾವುದೇ ಹುದ್ದೆಯನ್ನು ಪಡೆಯಬಹುದಾಗಿದ್ದ ತೇಜಸ್ವಿ ಅವನ್ನೆಲ್ಲ ನಿರಾಕರಿಸಿ ಮೂಡಿಗೆರೆಯ ಚಿತ್ರಕೂಟದಲ್ಲಿ ಆನಂತರ ನಿರುತ್ತರದಲ್ಲಿ ಸ್ವಂತ ಸಾಮರ್ಥ್ಯದ ಕೃಷಿ, ತೋಟಗಾರಿಕೆ ಆಸಕ್ತಿಯಲ್ಲಿ ನೆಲೆನಿಂತದ್ದು, ಅತ್ಯುತ್ತಮ ತೋಟಗಳನ್ನು ಕಟ್ಟಿ ಬೆಳೆಸುವುದರ ಜೊತೆಗೆ ಅದ್ಭುತ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದು ಅದ್ಭುತ ವಿಸ್ಮಯ. ಇಲ್ಲಿ ಅವರ ಬಾಳಸಂಗಾತಿಯಾಗಿ ಜೊತೆಗೂಡಿ ಬಂದ ಶ್ರೀಮತಿ ರಾಜೇಶ್ವರಿ ಅವರ ಪಾಲೂ ದೊಡ್ಡದು. ರಾಜೇಶ್ವರಿ ಅವರ ಕಾರಣವಾಗಿ ತೇಜಸ್ವಿ ಮೂಡಿಗೆರೆಗೆ ಬಂದರು. ತೇಜಸ್ವಿ ನೆಲೆನಿಂತ ಕಾರಣದಿಂದ ಮೂಡಿಗೆರೆಯ ದಿನನಿತ್ಯದ ಬದುಕಿಗೆ ವಿಶ್ವ ಮಾನ್ಯತೆಯ ಅವಕಾಶ ಒದಗಿಬಂದಿತು.

ಕಾದಂಬರಿ, ಸಣ್ಣಕಥೆ, ಪಕ್ಷಿಜಗತ್ತು, ವಿಸ್ಮಯಜಗತ್ತು, ಪಾಕಜಗತ್ತು, ಪ್ರವಾಸ, ಅನುವಾದ ಹೀಗೆ ಅನೇಕಾನೇಕ ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿ ಬರೆದ ತೇಜಸ್ವಿ ಅವರ ಜೀವನವೇ ಒಂದು ಸೊಬಗು. ತೇಜಸ್ವಿ ಸಾಹಿತ್ಯವನ್ನು ಮನನ ಮಾಡಿಕೊಂಡಷ್ಟೂ ಅರಿವಿನ ಬೆರಗು!!!

‌‌‌