ವಿಜಯಪುರ: ದಾಖಲೆ ಇಲ್ಲದೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಸಾಗಿಸುತ್ತಿದ್ದ 10 ಲಕ್ಷ ರೂ ನಗದವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಹೊರವಲಯದಲ್ಲಿರುವ ಕೃಷ್ಣಾ ನದಿಯ ನೀಲಮ್ಮನ ಸೇತುವೆ ಹತ್ತಿರದ ಚೆಕ್ ಪೋಸ್ಟ್ ನಲ್ಲಿ ಶುಕ್ರವಾರ ನಡೆದಿದೆ. ಗಜೇಂದ್ರಗಡ ಸಾರಿಗೆ ಘಟಕಕ್ಕೆ ಸೇರಿದ ಗಜೇಂದ್ರಗಡ- ಮುದ್ದೇಬಿಹಾಳ ಬಸ್ ಮುದ್ದೇಬಿಹಾಳದಿಂದ ತಂಗಡಗಿ, ಧನ್ನೂರ, ಹುನಗುಂದ ಮಾರ್ಗವಾಗಿ ಗಜೇಂದ್ರಗಡಕ್ಕೆ ಹೋಗುತ್ತಿತ್ತು. ಚಕ್ ಪೋಸ್ಟ್ ಪೊಲೀಸರು ಎಲ್ಲ ವಾಹನಗಳನ್ನು ತಪಾಸಣೆ ನಡೆಸಿದಂತೆ ಬಸ್ಸಿನಲ್ಲಿರುವ ಪ್ರಯಾಣಿಕರನ್ನೂ ಸಹಿತ ತಪಾಸಣೆ ನಡೆಸಿದ್ದಾರೆ.

ಗುಟ್ಕಾ ಚೀಲದ ಬಟ್ಟೆಯ ಬ್ಯಾಗ್ ನಲ್ಲಿ  500, 200 ಮತ್ತು 50 ಮುಖಬೆಲೆಯ 10 ಲಕ್ಷ ನಗದು ಇದ್ದದ್ದು ಪತ್ತೆ ಆಗಿದೆ.  ಈ ವೇಳೆ ಹಣ ಸಾಗಿಸುತ್ತಿದ್ದ ವ್ಯಕ್ತಿ ಮುದ್ದೇಬಿಹಾಳದ ಸುಂದರ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಬಸಪ್ಪ ನಿಂಗಪ್ಪ ಹಡಗಲಿ ಅವರನ್ನು ವಿಚಾರಣೆ ನಡೆಸಿದಾಗ ಬ್ಯಾಂಕ್ ನಿಂದ್ ಬ್ಯಾಂಕ್ ವರ್ಗಾವಣೆ ಮಾಡಲು ಒಯ್ಯುತ್ತಿರುವುದಾಗಿ ತಿಳಿಸಿದ್ದಾರೆ. ಹಣ ಸಾಗಿಸುತ್ತಿದ್ದ ವ್ಯಕ್ತಿ ಮುದ್ದೇಬಿಹಾಳದಿಂದ ಧನ್ನೂರವರೆಗೆ ಬಸ್ ಟಿಕೆಟ್ ತೆಗೆದುಕೊಂಡಿದ್ದರು. ಆದರೆ ಹಣಕ್ಕೆ ಇವರ ಹತ್ತಿರ ಯಾವುದೇ ದಾಖಲೆ ಇರಲಿಲ್ಲ. ಇದರಿಂದ ಸಂಶಯಗೊಂಡ ಪೊಲೀಸ್ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ದಾಖಲೆ ಇಲ್ಲದೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಮ್ಯಾನೇಜರ್ ಹಡಗಲಿ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸೈ ಆರೀಫ್ ಮುಷಾಪುರಿ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಘಟನೆಯಿಂದ ಜಾಗೃತರಾ ಗಿರುವ ಪೊಲೀಸರು ತಾಲೂಕಿನ ಆಯಕಟ್ಟಿನ ಸ್ಥಳಗಳಲ್ಲಿ ಹಾಕಿರುವ ಚಕ್ ಪೋಸ್ಟ್  ಸಿಬ್ಬಂದಿ ಜಾಗೃತರಾಗಿ ಪ್ರತಿಯೊಂದು ವಾಹನ, ಬಸ್ ಪರಿಶೀಲಿಸಲು ತೊಡಗಿದ್ದಾರೆ. ತಾಲೂಕಿನಲ್ಲಿ ಈ ರೀತಿ ನಗದು ಸಿಕ್ಕ ಮೊದಲ ಪ್ರಕರಣ ಇದಾಗಿದೆ.

10 lakh for undocumented possession in Muddebihal