ಚಿಕ್ಕಮಗಳೂರು:  ಎಸ್‌ಎಸ್‌ಎಲ್‌ಸಿ ೨೦೨೩-೨೪ನೇ ಸಾಲಿನ ಪರೀಕ್ಷೆಯಲ್ಲಿ ನಗರದ ಜೆವಿಎಸ್ ಶಾಲೆಗೆ ಶೇ೧೦೦ ಫಲಿತಾಂಶ ಬಂದಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ತಿಳಿಸಿದರು.

ಅವರು ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಜೆವಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೆವಿಎಸ್ ಶಾಲೆಯ ಉದ್ದೇಶ ಸೇವಾ ಮನೋಭಾವನೆಯಿಂದ ವಿದ್ಯಾಧಾನ ಮಾಡುವ ಮೂಲಕ ದೇಶದಲ್ಲಿ ಮುಂದಿನ ಒಳ್ಳೆಯ ಪ್ರಜೆಗಳಾಗಿ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು.

ಡೊನೇಷನ್ ಆಸೆ ಆಮಿಷಗಳನ್ನು ವಿದ್ಯಾರ್ಥಿ ಪೋಷಕರಿಗೆ ನೀಡದೆ ಸರ್ಕಾರಿ ನಿಯಮದಂತೆ ಶುಲ್ಕ ಪಡೆದು ನಡೆಸುತ್ತಿರುವುದು ಜೆವಿಎಸ್ ಶಾಲೆಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲೂ ಸೇವಾ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಆಶಾಕಿರಣ ಅಂಧ ಮಕ್ಕಳ ಪಾಠಶಾಲೆ ವಿದ್ಯಾರ್ಥಿಗಳ ಪರೀಕ್ಷೆಯನ್ನು ಜೆವಿಎಸ್ ಶಾಲೆ ವಿದ್ಯಾರ್ಥಿಗಳು ಬರೆದು ಬರುತ್ತಿರುವುದರಿಂದ ಅಲ್ಲಿಯೂ ಶೇ೧೦೦ ಫಲಿತಾಂಶ ಬರುತ್ತಿದೆ ಅದಕ್ಕಾಗಿ ಈ ಶಾಲೆ ಶಿಕ್ಷಕರಿಗೂ ಶುಭಾಶಯ ತಿಳಿಸುತ್ತೇನೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಜೆವಿಎಸ್ ಶಾಲೆ ಜಿಲ್ಲೆಯ ಯುವಕ ಯುವತಿಯರ ಭವಿಷ್ಯ ರೂಪಿಸಲು ಪೋಷಕರಿಗೆ ಹಣದ ಹೊರೆ ಹಾಕದೆ ಅತಿ ಕಡಿಮೆ ಶುಲ್ಕ ಪಡೆದು ಶಾಲೆ ನಡೆಸುತ್ತಿರುವುದಾಗಿ ತಿಳಿಸಿದರು.

ಒಟ್ಟು ೪೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೧೨ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೧೯ ಪ್ರಥಮ ಶ್ರೇಣಿ, ೮ ದ್ವಿತೀಯ ಮತ್ತು ೨ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಿ.ಎಂ ಉತ್ಸವಿ ೫೯೯ ಪ್ರಥಮ, ಅಲಿಮತುಲ್ ಸಮ್ರೀನ ೫೮೨ ದ್ವಿತೀಯ ಸ್ಥಾನ, ಶಿವಾಂಶು ಕೆ. ನಂದ, ೫೮೧ ಅಂಕಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗೌ. ಕಾರ್ಯದರ್ಶಿ ಎಂ.ಸಿ ಪ್ರಕಾಶ್ ಮಾತನಾಡಿ ಆಧುನಿಕ ಕಾಲಕ್ಕೆ ತಕ್ಕಂತೆ ಶಾಲೆಯಲ್ಲಿ ಗಣಕೀಕೃತ ಮತ್ತು ಸ್ಮಾರ್ಟ್ ಬೋರ್ಡ್ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ, ನಮ್ಮ ಶಾಲೆಯಲ್ಲಿ ನುರಿತ ಶಿಕ್ಷಕರು ಇರುವುದರಿಂದ ಪ್ರತಿ ವರ್ಷ ೧೦೦ ಕ್ಕೆ ೧೦೦% ರಷ್ಟು ಫಲಿತಾಂಶ ಬರುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಹಕಾರ್ಯದರ್ಶಿ ಕೆ.ಕೆ ಮನುಕುಮಾರ್, ಮುಖ್ಯ ಶಿಕ್ಷಕರುಗಳಾದ ವಿಜಿತ್, ಸಿಇಓ ಕುಳ್ಳೇಗೌಡ, ಪ್ರ್ರಮೀಳಾ, ವ್ಯವಸ್ಥಾಪಕರಾದ ತೇಜಸ್ ಸೇರಿದಂತೆ ಎಲ್ಲಾ ಶಿಕ್ಷಕರು ಪಾಲ್ಗೊಂಡಿದ್ದರು.

100% Result for SSLC-JVS School