ಥಾಣೆ: ಮಹಾರಾಷ್ಟ್ರದ ಥಾಣೆಯ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್‌ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಕೇವಲ 24 ಗಂಟೆಗಳ ಅವಧಿಯಲ್ಲಿ 18 ರೋಗಿಗಳು ಸಾವನ್ನಪ್ಪಿರುವ ಕಳವಳ ಘಟನೆ ನಡೆದಿದೆ. ದಿನಕ್ಕೆ ಸರಾಸರಿ 6 ರಿಂದ 7 ಜನ ಸಾವನ್ನಪ್ಪುತ್ತಿದ್ದ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ರೋಗಿಗಳ ಸಾವಿನ ಪ್ರಮಾಣ ಭಾರೀ ಏರಿಕೆಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಈ ನಡುವೆ ಆಸ್ಪತ್ರೆಗಳಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ. ಇದರ ಬೆನ್ನಲ್ಲೇ ಸಾವಿನ ಕಾರಣದ ತನಿಖೆಗೆ ಸಮಿತಿಯನ್ನು ಸರ್ಕಾರ ರಚಿಸಿದ್ದು, ವರದಿ ನೀಡುವಂತೆ ಸೂಚಿಸಿದೆ.

ರೋಗಿಗಳ ಚಿಂತಾಜನಕ ಸ್ಥಿತಿ, ಇನ್ನೊಂದು ಆಸ್ಪತ್ರೆ ಕಾರಾರ‍ಯಚರಣೆ ಸ್ಥಗಿತಗೊಳಿಸಿದ್ದರಿಂದ ಈ ಆಸ್ಪತ್ರೆಯಲ್ಲಿ ಮಿತಿಗಿಂತ ಹೆಚ್ಚು ರೋಗಿಗಳ ಜಮಾವಣೆ, ವೈದ್ಯರ ಕೊರತೆ ಸೇರಿ ಅನೇಕ ಕಾರಣಗಳು ಇದರ ಹಿಂದೆ ಇರಬಹುದು ಎಂದು ಮೂಲಗಳು ಹೇಳಿವೆ.

ಘಟನೆ ಬಗ್ಗೆ ಮಾತನಾಡಿದ ನಗರಾಡಳಿತ ಆಯುಕ್ತರಾದ ಅಭಿಜಿತ್‌ ಬಂಗಾರ್‌ ‘ಮೃತರಲ್ಲಿ 12 ಮಂದಿ 50 ವರ್ಷ ಮೇಲ್ಪಟ್ಟವರು. ಘಟನೆ ಬಗ್ಗೆ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮಾಹಿತಿ ಕೇಳಿದ್ದಾರೆ. ಅಲ್ಲದೇ ಈ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿಗಳು ಮತ್ತು ಪ್ರಮುಖ ಆರೋಗ್ಯ ಅಧಿಕಾರಿಗಳ ಸಮಿತಿ ರಚಿಸಲು ಸೂಚಿಸಿದ್ದಾರೆ. ಇನ್ನು ಮೃತರೋಗಿಗಳು ಮೂತ್ರಪಿಂಡದ ಕಲ್ಲುಗಳು, ಆಲ್ಸರ್‌, ನ್ಯೂಮಿನಿಯಾ ಸೇರಿದಂತೆ ಅನೇಕ ಖಾಯಿಲೆಗಳಿಂದ ಬಳಲುತ್ತಿದ್ದರು. ಅವರಿಗೆ ನೀಡಲಾದ ಚಿಕಿತ್ಸೆ ಪರಿಶೀಲಿಸಲಾಗುತ್ತದೆ ಹಾಗೂ ಮೃತರ ಸಂಬಂಧಿಕರ ಹೇಳಿಕೆ ದಾಖಲಿಸಲಾಗುತ್ತದೆ. ಕೆಲವರು ವೈದ್ಯರ ನಿರ್ಲಕ್ಷ್ಯದ ಆರೋಪ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ’ ಎಂದಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಥಾಣೆ ಮೇಯರ್‌ ನರೇಶ್‌ ಅವರು ‘ಆಸ್ಪತ್ರೆಯು ಓವರ್‌ ಲೋಡ್‌ ಆಗಿದೆ. ಇಲ್ಲಿನ ಸಿವಿಲ್‌ ಆಸ್ಪತ್ರೆ ನವೀಕರಣ ಕಾರ್ಯ ನಡೆಯುತ್ತಿದ್ದರಿಂದ ಅಲ್ಲಿನ ರೋಗಿಗಳನ್ನು ಇದೇ ಆಸ್ಪತ್ರೆಗೆ ರವಾನಿಸಲಾಗಿದೆ. 500 ರೋಗಿಗಳ ಸಾಮರ್ಥ್ಯದ ಆಸ್ಪತ್ರೆಯಲ್ಲಿ 650 ರೋಗಿಗಳಿಗೆ ಚಕಿತ್ಸೆ ನೀಡಲಾಗುತ್ತಿದೆ’ ಎಂದಿದ್ದಾರೆ.

ಈ ಆಸ್ಪತ್ರೆಯ ಕೆಲ ವೈದ್ಯರು ಡೇಂಘಿ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಚಿಕಿತ್ಸೆ ನೀಡಬಲ್ಲ ವೈದ್ಯರ ಕೊರತೆಯೂ ಘಟನೆಗೆ ಪ್ರಮುಖ ಕಾರಣವಾಗಿದೆ ಎಂದು ಅಸ್ಪತ್ರೆ ಮೂಲಗಳು ತಿಳಿಸಿವೆ.

18 patients died in just 24 hours in Thane Maharashtra