ಬೆಂಗಳೂರು: ಹತ್ತು ಎಚ್ಪಿ ಪಂಪ್ಸೆಟ್ವರೆಗಿನ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಈ ವಿಷಯ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ‘ಹತ್ತು ಎಚ್ಪಿ ಪಂಪ್ಸೆಟ್ವರೆಗೆ ಸೀಮಿತವಾಗಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲು ನಮಗೆ ತಕರಾರು ಇಲ್ಲ. ಇದರಿಂದ ದುರುಪಯೋಗ ಆಗಬಾರದು. ಆದ್ದರಿಂದ ಕೆಲವು ನಿಬಂಧನೆಗಳನ್ನು ವಿಧಿಸಲಾಗುವುದು. ಅದನ್ನು ಒಪ್ಪಿಕೊಳ್ಳಬೇಕು’ ಎಂದು ಅವರು ತಿಳಿಸಿದರು.
ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಸರ್ಕಾರದ ಮೇಲೆ ₹14 ಸಾವಿರ ಕೋಟಿಯಷ್ಟು ಹೊರೆ ಇದೆ. ಬಡ ರೈತರಿಗೆಂದು 2008ರಲ್ಲಿ ಸಬ್ಸಿಡಿ ಯೋಜನೆ ಘೋಷಣೆ ಮಾಡಲಾಗಿತ್ತು. ಕಾಫಿ ಬೆಳೆಯುವವರು ಸ್ಥಿತಿವಂತರಿರುತ್ತಾರೆ ಎಂಬ ಕಾರಣಕ್ಕೆ ಆಗ ಸೇರಿಸಿರಲಿಲ್ಲ ಎಂದರು.
ಶಾಸಕರಾದ ಎ.ಟಿ.ರಾಮಸ್ವಾಮಿ, ಸಿ.ಟಿ.ರವಿ. ಎಚ್.ಕೆ.ಕುಮಾರಸ್ವಾಮಿ. ಎಂ.ಪಿ. ಕುಮಾರಸ್ವಾಮಿ, ಕೆ.ಜೆ.ಬೋಪಯ್ಯ ಅವರೂ ವಿದ್ಯುತ್ ಸಬ್ಸಿಡಿಗಾಗಿ ಒತ್ತಾಯಿಸಿದರು.