ಚಿಕ್ಕಮಗಳೂರು: ಬೈಕಿಗೆ ನೇತುಹಾಕಿದ್ದ ಬ್ಯಾಗಿನಲ್ಲಿ ಹುಲಿ ತಲೆಬುರುಡೆ, ಹಲ್ಲು, ಉಗುರು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.

ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಕುಂಡ್ರ ಗ್ರಾಮದ ಸತೀಶ್ ಮತ್ತು ಸುಧೀರ್ ಬಂಧಿತರು. ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ, ಪ್ರಕರಣವೊಂದರಲ್ಲಿ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದ ಸತೀಶ್ ನನ್ನು ಖಚಿತ ಮಾಹಿತಿ ಮೇರೆಗೆ ಮೂಡಿಗೆರೆ ಅರಣ್ಯ ಸಿಬ್ಬಂದಿ ತಡೆದು ಬೈಕ್‌ಗೆ ನೇತುಹಾಕಿದ್ದ ಬ್ಯಾಗ್ ಪರೀಶೀಲನೆ ನಡೆಸಿದ್ದಾರೆ.

ಅದರಲ್ಲಿ ಹುಲಿ ತಲೆಬುರುಡೆ, ಮೂರು ಹುಲಿ ಹಲ್ಲು, ಮೂರು ಹುಲಿ ಉಗುರು, ಒಂದು ಮೂಳೆ ಇರುವುದು ಪತ್ತೆಯಾಗಿದೆ. ತಕ್ಷಣ ಸತೀಶ್ ಮತ್ತು ಆತನ ಜೊತೆಗಿದ್ದ ಸುಧೀರ್ ಇವರುಗಳನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಚಿಕ್ಕಮಗಳೂರು ಡಿ.ಎಫ್.ಓ. ರಮೇಶ್ ಬಾಬು ಬಂಧಿತರ ವಿರುದ್ಧ ವನ್ಯಜೀವಿ ಕಾಯ್ದೆ ೧೯೭೨ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಬಂಧಿತರಿಂದ ಒಂದು ಹುಲಿ ತಲೆಬುರುಡೆ, ಮೂರು ಹಲ್ಲು, ಮೂರು ಉಗುರು, ಒಂದು ಮೂಳೆ, ನಾಲ್ಕು ಮೊಬೈಲ್, ಒಂದು ಬೈಕ್ ವಶಪಡಿಸಿ ಕೊಳ್ಳಲಾಗಿದೆ ಎಂದು ಹೇಳಿದ್ದಾರೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಹಿಂದೆ ಯಾರೇ ಇದ್ದರು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಡಿ.ಎಫ್.ಓ. ರಮೇಶ್ ಬಾಬು, ಮೂಡಿಗೆರೆ ಎ.ಸಿ.ಎಫ್. ರಘು, ಮೂಡಿಗೆರೆ ಆರ್. ಎಫ್.ಓ. ಚರಣ್ ಕುಮಾರ್ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸತೀಶ್ ಕೆಲ ದಿನಗಳ ಹಿಂದೆ ಹುಲಿ ಉಗುರು ಧರಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ. ಇದೀಗ ಹುಲಿ ತಲೆಬುರುಡೆಯನ್ನೇ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ.

ಈ ಪ್ರಕರಣದಲ್ಲಿ ಸ್ಥಳೀಯರು ಹಲವಾರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಇದರ ಹಿಂದೆ ಷಡ್ಯಂತ್ರ ಇರುವ ಬಗ್ಗೆಯೂ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

A tiger skull-tooth-nail was found in the bag on the bike