ತುಮಕೂರು :   ನಗರದ ವಿವಿಧ ಸ್ಲಂಗಳಲ್ಲಿ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯಕಾರ್ಡ್‌ ಎಪಿಎಲ್‌, ಬಿಪಿಎಲ್‌ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ತಲಾ 5 ಲಕ್ಷದವರೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಸರ್ಕಾರ ಕೈಗೊಂಡಿರುವ ಆಯುಷ್ಮಾನ್‌ ಭಾರತ್‌ಕಾರ್ಡ್‌ ಬಗ್ಗೆ ಜಾಗೃತಿ ಮೂಡಿಸಿ ಅಭಿಯಾನವನ್ನು ಕೈಗೊಂಡಿರುವ ಸ್ಲಂಜನಾಂದೋಲನ ಕರ್ನಾಟಕ ಸಂಘಟನೆ ಸ್ತುತ್ಯಾರ್ಹ ಕೆಲಸ ಮಾಡಿದೆ. ಸಾರ್ವಜನಿಕರು ಸರ್ಕಾರಿ ಯೋಜನೆಗಳನ್ನು ಬಳಸಿಕೊಳ್ಳಲು ಮುಂದಾಗಬೇಕು. ಎಲ್ಲರೂ ಕಡ್ಡಾಯವಾಗಿ ಆಭಾ ಕಾರ್ಡ್‌ ನೊಂದಣಿ ಮಾಡಿಕೊಳ್ಳಬೇಕು ಎಂದು ಪಾಲಿಕೆ ಸದಸ್ಯ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಶ್ರೀನಿವಾಸ್‌ ಹೇಳಿದರು.

ನಗರದ ಕೊಳಗೇರಿಗಳಲ್ಲಿ ಸ್ಲಂಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯಿಂದ ಪ್ರಧಾನಮಂತ್ರಿ ಆರೋಗ್ಯ ಯೋಜನೆಯಡಿ ಉಚಿತ ಆಯುಷ್ಮಾನ್‌ ಭಾರತ್‌ ಕಾರ್ಡ್‌ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಕಳೆದ 3 ತಿಂಗಳಿಂದ ಆರೋಗ್ಯಕಾರ್ಡ್‌ ನೊಂದಣಿ ನಡೆಯುತ್ತಿದ್ದು, ಸ್ಲಂಗಳಲ್ಲಿ ಮಾಹಿತಿ ಕೊರತೆಯಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಹಿಂದೆ ಸರಿಯುತ್ತಿದ್ದು ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನಿಗೆ ಏನಾದರು ಒಂದು ಅನಾರೋಗ್ಯ ಸಮಸ್ಯೆಗಳಿಂದ ನಿಧನರಾಗುತ್ತಿರುವುದನ್ನು ನೋಡಿದರೆ ನಮ್ಮ ಜೀವರಕ್ಷಣೆ ಬಹಳ ಕಷ್ಟಸಾಧ್ಯವೆನ್ನಿಸುತ್ತಿದೆ ಎಂದರು.

ಸಾಮಾನ್ಯ ಕಾಯಿಲೆ ಬಂದರೆ ದುಪ್ಪಟ್ಟು ಬೆಲೆಗಳ ಆತಂಕ ಬಡವರನ್ನು ಮತ್ತಷ್ಟುಕುಗ್ಗಿಸುವಂತಿದೆ. ಕ್ಲಿಷ್ಟಕರ ಕಾಯಿಲೆಗಳು ಬಂದರೆ ಶ್ರೀಮಂತರು ಹೇಗೋ ಪಾರಾಗಬಹುದು. ಆದರೆ ಮಧ್ಯಮ ಹಾಗೂ ತಳ ಸಮುದಾಯಗಳಿಗೆ ಬಂದರೆ ದುಬಾರಿ ಬೆಲೆಗಳ ಆತಂಕದಲ್ಲಿಯೇ ಬದುಕುವ ಪರಿಸ್ಥಿತಿ ನಮ್ಮ ದೇಶದ್ದಾಗಿದೆ. ಹಾಗಾಗಿ ಸ್ಲಂಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವಿವಿಧ ಸ್ಲಂಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆರೋಗ್ಯ (ಆಭಾ) ಕಾರ್ಡ್‌ ಅನುಕೂಲತೆಗಳ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕಾಗಿದೆ.

ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ಉಚಿತ ನೋಂದಣಿ ಶಿಬಿರಗಳನ್ನು ತಾಲೂಕು ಆರೋಗ್ಯ ಇಲಾಖೆ ಸಹಕಾರದಲ್ಲಿ ಮಾಡುತ್ತ ಬರುತ್ತಿದೆ. ಈ ಹಿಂದೆ ನೀಡಿರುವ ಎಲ್ಲಾ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಡ್‌ಗಳನ್ನು ಕ್ರೂಢೀಕರಿಸಿ ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯಡಿ ಕುಟುಂಬದ ಎಲ್ಲಾ ಸದಸ್ಯರಿಗೂ ತಲಾ 5 ಲಕ್ಷದವರೆಗಿನ ಉಚಿತ ಆರೋಗ್ಯ ಚಿಕಿತ್ಸೆಗೆ ಕಾರ್ಡ್‌ ಬಳಸಬಹುದಾಗಿದೆ ಎಂದರು.

ಈ ಅಭಿಯಾನದಲ್ಲಿ 3ನೇ ಪಾಲಿಕೆ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ಸಿಬ್ಬಂದಿ ಸಿದ್ದೇಶ್‌ಕುಮಾರ್‌, ಹರೀಶ್‌, ಶ್ರೇಯಸ್‌, ರಾಕೇಶ್‌, ಎನ್‌.ಆರ್‌ ಕಾಲೋನಿ ಮುಖಂಡರಾದ ದೇವರಾಜು ಹಾಗೂ ತುಮಕೂರು ಸ್ಲಂ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅರುಣ್‌, ಪದಾಧಿಕಾರಿಗಳಾದ ಶಂಕ್ರಯ್ಯ, ರಂಗನಾಥ್‌, ಕಣ್ಣನ್‌, ರಂಗನಾಥ್‌, ಮೋಹನ್‌, ಗಣೇಶ್‌ ನರಸಿಂಹಯ್ಯ, ಮನೋಜ್‌ ಮುಂತಾದವರು ಪಾಲ್ಗೊಂಡಿದ್ದರು.

Ayushman Bharat Card Card