ಹುಬ್ಬಳ್ಳಿ:  ನಮ್ಮ ಕ್ಲಿನಿಕ್‌ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಮಹಿಳೆಯರಿಗಾಗಿಯೇ ‘ಆಯುಷ್ಮತಿ’ ಹೆಸರಿನ ಪ್ರತ್ಯೇಕ ಕ್ಲಿನಿಕ್‌ ತೆರೆಯಲು ಸರ್ಕಾರ ನಿರ್ಧರಿಸಿದೆ. ಈ ಕ್ಲಿನಿಕ್‌ನಲ್ಲಿ ವೈದ್ಯರು, ನರ್ಸಿಂಗ್‌ ಸಿಬ್ಬಂದಿ ಸೇರಿ ಎಲ್ಲ ಸಿಬ್ಬಂದಿ ಮಹಿಳೆಯರೇ ಇರಲಿದ್ದಾರೆ. ತಾಯಂದಿರು ಮತ್ತು ಶಿಶು ಮರಣ ತಪ್ಪಿಸಲು ‘ಆಯುಷ್ಮತಿ’ ಹೆಚ್ಚು ಸಹಕಾರಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಜನವರಿಯಲ್ಲಿ ಈ ಕ್ಲಿನಿಕ್‌ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ‘ನಮ್ಮ ಕ್ಲಿನಿಕ್‌’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕ್ಲಿನಿಕ್‌ ಮಾದರಿಯಲ್ಲೇ ಆಯುಷ್ಮತಿ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗುವುದು ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಸಾಧನೆ: ರಾಜ್ಯದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಹಿಂದಿನ ಯಾವ ಸರ್ಕಾರಗಳೂ ಮಾಡದಷ್ಟುಸಾಧನೆ ಬಿಜೆಪಿ ಸರ್ಕಾರ ಮಾಡಿದೆ. ಬಡವರು, ದುರ್ಬಲರು ಸೇರಿ ಯಾರಿಗೂ ಆರೋಗ್ಯದ ವಿಚಾರದಲ್ಲಿ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ನಮ್ಮ ಕ್ಲಿನಿಕ್‌ ಕೂಡ ಇದರ ಒಂದು ಭಾಗ. ರಾಜ್ಯದಲ್ಲಿ ಮೊದಲ ಹಂತವಾಗಿ 438 ನಮ್ಮ ಕ್ಲಿನಿಕ್‌ ತೆರೆಯಲಾಗುತ್ತಿದೆ. ಅದರಲ್ಲಿ 114 ಕ್ಲಿನಿಕ್‌ಗಳನ್ನು ಈಗ ಚಾಲನೆ ನೀಡಲಾಗಿದೆ. ಉಳಿದ ಕ್ಲಿನಿಕ್‌ಗಳನ್ನು ಜನವರಿ ಅಂತ್ಯದೊಳಗೆ ಹಂತ-ಹಂತವಾಗಿ ಲೋಕಾರ್ಪಣೆಗೊಳಿಸಲಾಗುವುದು. ಇಲ್ಲಿ ವೈದ್ಯರು, ನರ್ಸಿಂಗ್‌, ಲ್ಯಾಬ್‌ ಟೆಕ್ನೀಷಿಯನ್‌, ಡಿ ಗ್ರೂಪ್‌ ನೌಕರ ಕೆಲಸ ಮಾಡುತ್ತಿರುತ್ತಾರೆ ಎಂದರು.

ಜನವರಿಯಲ್ಲಿ ಮೋದಿ ಕಾರ್ಡ್‌ ವಿತರಣೆ: ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದು, ಈವರೆಗೆ 1.20 ಕೋಟಿ ಆಯುಷ್ಮಾನ್‌ ಭಾರತ್‌ ನಗರ ಆರೋಗ್ಯ ಕಾರ್ಡ್‌ ಸಿದ್ಧಪಡಿಸಲಾಗಿದೆ. ಜನವರಿಯಲ್ಲಿ ಪ್ರಧಾನಿ ಮೋದಿ ಈ ಕಾರ್ಡ್‌ಗಳ ವಿತರಣೆಗೆ ಚಾಲನೆ ನೀಡಲಿದ್ದಾರೆ ಎಂದು ಇದೇ ವೇಳೆ ಸುಧಾಕರ್‌ ತಿಳಿಸಿದರು. ಆಯುಷ್ಮಾನ್‌ ಭಾರತ್‌ ಅಡಿ ಪ್ರತಿವರ್ಷ ಪ್ರತಿ ಬಡ ಕುಟುಂಬಕ್ಕೆ .5 ಲಕ್ಷದವರೆಗೆ ಆರೋಗ್ಯ ಚಿಕಿತ್ಸೆಗೆ ಸರ್ಕಾರದಿಂದ ವೆಚ್ಚ ಮಾಡಲಾಗುತ್ತಿದೆ. ಎಪಿಎಲ್‌ ಕಾರ್ಡ್‌ದಾರರಿಗೂ ಆರೋಗ್ಯ ಸೇವೆಯಲ್ಲಿ ಶೇ.30ರಷ್ಟು ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುತ್ತಿದೆ. ಇಲ್ಲಿವರೆಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ .5 ಸಾವಿರ ಕೋಟಿ ವೆಚ್ಚ ಮಾಡಲಾಗಿದ್ದು, ಇದರಲ್ಲಿ ಶೇ.70ರಷ್ಟುಜನ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಇದು ಸರ್ಕಾರಿ ಆಸ್ಪತ್ರೆ ಮೇಲೆ ಜನರ ವಿಶ್ವಾಸವನ್ನು ತೋರಿಸುತ್ತದೆ. ಜತೆಗೆ ಸರ್ಕಾರಿ ಆಸ್ಪತ್ರೆಗಳನ್ನು ಟೀಕಿಸುವವರಿಗೆ ಉತ್ತರವನ್ನೂ ನೀಡಿದಂತಾಗಿದೆ ಎಂದರು. ಬಿಪಿ, ಶುಗರ್‌ ಕಾಯಿಲೆಗಳಿಗಾಗಿ ರಾಜ್ಯದಲ್ಲಿ ಶೇ. 60ರಷ್ಟು ಜನರ ತಪಾಸಣೆಯನ್ನು ಪ್ರತಿವರ್ಷ ಮಾಡಲಾಗುತ್ತಿದೆ. ಶೇ. 100ರಷ್ಟುಜನರ ತಪಾಸಣೆ ನಡೆಸಬೇಕೆಂಬುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ಜನವರಿಯಿಂದ ಎನ್‌ಸಿಡಿ ಕ್ಲಿನಿಕ್‌ಗಳ ಮೂಲಕ ಬಿಪಿ, ಶುಗರ್‌ ಕುರಿತು ಹೆಚ್ಚು ತಪಾಸಣೆ ನಡೆಸಲು ಶಿಬಿರ ಆಯೋಜಿಸಲಾಗುವುದು ಎಂದರು. 30 ವರ್ಷ ದಾಟಿದ ಪ್ರತಿಯೊಬ್ಬರು ಪ್ರತಿವರ್ಷ ಒಂದು ಸಲ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಆರೋಗ್ಯ ಕಾಪಾಡಲು ಅನುಕೂಲವಾಗುತ್ತದೆ ಎಂದು ನುಡಿದರು.

Ayushmati Clinic: