ಬೆಂಗಳೂರು: ಮೂರು ದಶಕಗಳ ನಂತರ ದಾಖಲೆಯ ಪ್ರಮಾಣದ ಸೀಟುಗಳನ್ನು ಗೆದ್ದು ರಾಜ್ಯದ ಇತಿಹಾಸದಲ್ಲೇ ಎರಡನೇ ಬಾರಿ ಬಹುಮತದ ಸರ್ಕಾರ ರಚನೆಗೆ ಕಾಂಗ್ರೆಸ್‌ ಮುಂದಾಗಿದೆ. ಈ ಸಾಧನೆಯ ಹಿಂದೆ ಮೂರು ವರ್ಷಗಳಿಂದ ನಡೆಸಿದ ಅವಿರತ ಸಂಘಟಿತ ಪ್ರಯತ್ನ, ನೀಡಿದ ಗ್ಯಾರಂಟಿಗಳು, ತರ್ಕಬದ್ಧ ಪ್ರಣಾಳಿಕೆ, ಅಹಿಂದ ಜತೆಗೆ ಒಕ್ಕಲಿಗ, ಲಿಂಗಾಯತ, ಮುಸ್ಲಿಂ ಮತಗಳ ಕ್ರೋಢೀಕರಣ ಮತ್ತು ಬಿಜೆಪಿ ಆಡಳಿತ ವಿರೋಧಿ ಅಲೆಯು ಪ್ರಮುಖವಾಗಿ ಕೆಲಸ ಮಾಡಿದೆ.

ರಾಜ್ಯ ಬಿಜೆಪಿ ಸರ್ಕಾರದ ಆಡಳಿತದ ಲೋಪದೋಷಗಳನ್ನು ಅತ್ಯಂತ ಸಮರ್ಥವಾಗಿ ಜನರ ಮುಂದೆ ತೆರೆದಿಡುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ರೂಪಿಸಲು ಕಾಂಗ್ರೆಸ್‌ ನಾಯಕತ್ವ ಅವಿರತ ಪ್ರಯತ್ನ ನಡೆಸಿತ್ತು. ಗುತ್ತಿಗೆದಾರರ ಸಂಘ ನೀಡಿದ ದೂರನ್ನು ಆಧರಿಸಿ 40 ಪರ್ಸೆಂಟ್‌ ಸರ್ಕಾರ ಎಂಬ ಹಣೆಪಟ್ಟಿಯನ್ನು ಬಿಜೆಪಿ ಸರ್ಕಾರಕ್ಕೆ ಕಟ್ಟುವಲ್ಲಿ ಹಾಗೂ ಅದನ್ನು ಜನಮಾನಸಕ್ಕೆ ಮುಟ್ಟಿಸುವಲ್ಲಿ ಕಾಂಗ್ರೆಸ್‌ ಚುನಾವಣಾ ತಂತ್ರಜ್ಞ ಪಡೆ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿತು.

ಇದಕ್ಕೆ ಬೆನ್ನೆಲುಬಾಗಿ ನಿಂತ ರಾಜಕೀಯ ತಂತ್ರಗಾರಿಕೆ ಪಡೆಯ ಮುಖ್ಯಸ್ಥ ಸುನೀಲ್‌ ಕುನಕೋಲು ತಂಡ ಬಿಜೆಪಿ ಆಡಳಿತದ ವಿರುದ್ಧ ಹಂತ ಹಂತವಾಗಿ ಜನಾಭಿಪ್ರಾಯ ಮೂಡಿಸುವ ಪ್ರಯತ್ನ ನಡೆಸಿತು, ಇದರಲ್ಲಿ ಅತ್ಯಂತ ಯಶಸ್ವಿಯಾಗಿದ್ದು ‘ಪೇಸಿಎಂ’ ಆಂದೋಲನ. ತನ್ಮೂಲಕ ರಾಜ್ಯ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಸರ್ಕಾರ ಎಂಬ ಹಣೆಪಟ್ಟಿಯನ್ನು ಯಶಸ್ವಿಯಾಗಿ ಕಟ್ಟಲಾಯಿತು.

ಚುನಾವಣೆಗೂ ಆರು ತಿಂಗಳ ಪೂರ್ವದಿಂದಲೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಏನು ಮಾಡಲಿದೆ ಎಂಬುದನ್ನು ಹಂತ ಹಂತವಾಗಿ ಜನರಿಗೆ ತಲುಪಿಸಲು ಗ್ಯಾರಂಟಿಗಳ ಘೋಷಣೆ ಆರಂಭಿಸಿತು. ಮಹಿಳೆಯರು, ನಿರುದ್ಯೋಗಿ ಯುವ ಸಮೂಹವನ್ನು ದೃಷ್ಟಿಯಾಗಿಟ್ಟುಕೊಂಡು ನೀಡಿದ ಐದು ಗ್ಯಾರಂಟಿಗಳು ವಾಸ್ತವವಾಗಿ ಕೆಲಸ ಮಾಡಿವೆ ಎಂಬುದನ್ನು ಫಲಿತಾಂಶ ಹೇಳುತ್ತಿದೆ. ವಿಶೇಷವಾಗಿ ಗ್ಯಾಸ್‌ ದರ ಏರಿಕೆಯ ಬಿಸಿ ಅನುಭವಿಸುವ ಕುಟುಂಬದ ಹಿರಿಯ ಮಹಿಳೆಗೆ 2 ಎರಡು ಸಾವಿರ ರು. ನೀಡುವುದು ಹಾಗೂ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ರಾಜ್ಯದ ಮಹಿಳಾ ಸಮೂಹವನ್ನು ಕಾಂಗ್ರೆಸ್‌ ಕಡೆಗೆ ಸೆಳೆಯಿತು. ಈ ಮಾತನ್ನು ಈ ಬಾರಿ ಮಹಿಳೆಯರ ಮತದಾನ ಪ್ರಮಾಣವು ಪುಷ್ಟೀಕರಿಸುತ್ತದೆ.

ಇದಲ್ಲದೇ, 10 ಕೆ.ಜಿ. ಅಕ್ಕಿ, 200 ಯೂನಿಟ್‌ ಉಚಿತ ವಿದ್ಯುತ್‌ ಗ್ಯಾರಂಟಿಗಳು ಸೇರಿದಂತೆ ಪಕ್ಷದ 576 ಆಶ್ವಾಸನೆಗಳ ಗುಚ್ಛವಾದ ಕಾಂಗ್ರೆಸ್‌ ಪ್ರಣಾಳಿಕೆ ಕೂಡ ಜನರಿಗೆ ಕಾಂಗ್ರೆಸ್‌ ಪರ ಒಲವು ಮೂಡುವಂತೆ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪದ ನಡುವೆಯೂ ಈ ಇಬ್ಬರು ನಾಯಕರು ತಮ್ಮ ಒಳಗಿನ ವೈರುಧ್ಯಗಳನ್ನು ಮುಚ್ಚಿಟ್ಟುಕೊಂಡು ಬಹಿರಂಗವಾಗಿ ಒಗ್ಗಟ್ಟು ಪ್ರದರ್ಶಿಸಿದ್ದು ಹಾಗೂ ಪ್ರಜಾಧ್ವನಿ ಯಾತ್ರೆಯ ಮೂಲಕ ರಾಜ್ಯದ ಎರಡು ಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಚಾರ ನಡೆಸಿದ್ದು ಕೆಲಸ ಮಾಡಿದೆ. ಇದೇ ವೇಳೆ ಜೆಡಿಎಸ್‌ನ ಭದ್ರಕೋಟೆಯಾದ ಒಕ್ಕಲಿಗ ಬೆಲ್ಟ್‌ನಲ್ಲಿ ಡಿ.ಕೆ.ಶಿವಕುಮಾರ್‌ ಅವರು ನಡೆಸಿದ ಯಾತ್ರೆ ಹಾಗೂ ತಮಗೆ ಒಂದು ಅವಕಾಶ ಕೊಡಿ, ಒಕ್ಕಲಿಗ ನಾಯಕನನ್ನಾಗಿ ನನ್ನನ್ನು ಪರಿಗಣಿಸಿ ಎಂದು ಮಾಡಿದ ಭಾವನಾತ್ಮಕ ಭಾಷಣಗಳು ಯಶ ನೀಡಿವೆ. ಇದರ ಪರಿಣಾಮವಾಗಿಯೇ ಒಕ್ಕಲಿಗ ಬೆಲ್ಟ್‌ನ ಸುಮಾರು 58 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 40ಕ್ಕೂ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿದೆ.

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ವಿಚಾರ ಪ್ರಸ್ತಾಪಿಸಿದ್ದನ್ನು ಬಿಜೆಪಿ ಪ್ರಚಾರದ ವಿಷಯ ಮಾಡಿಕೊಂಡಿತ್ತು. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಚಾರ ಭಾಷಣಗಳಲ್ಲಿ ಜೈ ಬಜರಂಗಿ ಘೋಷಣೆಗಳ ಮೂಲಕ ಕಾಂಗ್ರೆಸ್‌ಗೆ ಹಿನ್ನಡೆ ತರಲು ವಿಶೇಷ ಪ್ರಯತ್ನ ಮಾಡಿದ್ದರು. ಇದರಿಂದಾಗಿ ಕಾಂಗ್ರೆಸ್‌ ಕರಾವಳಿ ಜಿಲ್ಲೆಗಳಲ್ಲಿ ತುಸು ಹಿನ್ನಡೆ ಅನುಭವಿಸಿದರೂ ಉಳಿದಂತೆ ರಾಜ್ಯಾದ್ಯಂತ ಮುಸ್ಲಿಂ ಮತಗಳ ಕ್ರೋಢೀಕರಣಕ್ಕೆ ಈ ಘೋಷಣೆ ದೊಡ್ಡ ಕೊಡುಗೆ ನೀಡಿದೆ.

ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿ ಎಸಗಿದ ತಪ್ಪುಗಳು ಸಹ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದವು. ವಿಶೇಷವಾಗಿ ಪಕ್ಷ ತನ್ನ ಲಿಂಗಾಯತ ನಾಯಕರನ್ನು ನಡೆಸಿಕೊಂಡ ರೀತಿ ಹಾಗೂ ಇದರ ವಿರುದ್ಧ ಪ್ರಮುಖ ಲಿಂಗಾಯತ ನಾಯಕರು ಸಿಡಿದೆದ್ದಿದ್ದು ಲಿಂಗಾಯತ ಮತಗಳಲ್ಲಿ ಕೆಲವು ಅಂಶ ಕಾಂಗ್ರೆಸ್‌ನೆಡೆಗೆ ತಿರುಗುವಂತೆ ಮಾಡಿದೆ. ಹೊಸ ಪ್ರಯೋಗದ ನೆಪದಲ್ಲಿ ಲಿಂಗಾಯತ ನಾಯಕರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಹಾಗೂ ಲಿಂಗಾಯತ ಸಮುದಾಯದ ಬೆಂಬಲವಿಲ್ಲದೆಯೂ ಹಿಂದುತ್ವದ ಹೆಸರಿನಲ್ಲಿ ಪಕ್ಷ ಅಧಿಕಾರ ಹಿಡಿಯಲಿದೆ ಎಂಬ ಸಂದೇಶವನ್ನು ಬಿಜೆಪಿ ನಾಯಕತ್ವ ರವಾನೆ ಮಾಡಿದ್ದು ಬಿಜೆಪಿಗೆ ಸಮುದಾಯದ ಅಖಂಡ ಬೆಂಬಲದಲ್ಲಿ ಬಿರುಕು ಮೂಡಿಸಲು ಕಾರಣವಾಯಿತು. ಇದರ ಪರಿಣಾಮವಾಗಿ ಕಾಂಗ್ರೆಸ್‌ ಪಕ್ಷ ಲಿಂಗಾಯತ ಬೆಲ್ಟ್‌ ಎನ್ನಲಾಗುವ ಉತ್ತರ ಕರ್ನಾಟಕದಲ್ಲಿ ಉತ್ತಮ ಸಾಧನೆ ಮೆರೆದಿದೆ.

ಇದಲ್ಲದೆ, ಚುನಾವಣೆ ಸಮೀಪಿಸಿದಾಗ ತೋರಿಕೆಗಾಗಿ ಮಾಡಿದ ಮೀಸಲಾತಿ ಹಾಗೂ ಒಳ ಮೀಸಲಾತಿ ನಿರ್ಧಾರಗಳು ಬಿಜೆಪಿಗೆ ಮುಳುವಾಗಿದ್ದು, ಬಿಜೆಪಿ ಪರ ನಿಲ್ಲುತ್ತಿದ್ದ ಪರಿಶಿಷ್ಟಸಮುದಾಯದ ನಿರ್ದಿಷ್ಟಜಾತಿಗಳು ಕಾಂಗ್ರೆಸ್‌ ಪರ ಒಲಿಯುವಂತೆ ಮಾಡಿತು.

Congress is a corrupt party for BJP