ಬೆಂಗಳೂರು: ದೇಶದಲ್ಲಿ ನಿಧಾನಗತಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸೂಚನೆ ಮೇರೆಗೆ ರಾಜ್ಯದ ಎಲ್ಲ ಕೊರೋನಾ ನಿಗದಿತ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ಸಿದ್ಧತೆಗಳ ಕುರಿತು ಅಣಕು ಕಸರತ್ತು (ಮಾಕ್‌ ಡ್ರಿಲ್‌) ಸೋಮವಾರ ನಡೆಸಲಾಯಿತು.

ಮೂರು ತಿಂಗಳ ಹಿಂದೆ ಕೇಂದ್ರದ ಸೂಚನೆ ಮೇರೆಗೆ ರಾಜ್ಯದಲ್ಲಿ ಮಾಕ್‌ ಡ್ರಿಲ್‌ ನಡೆಸಲಾಗಿತ್ತು. ಇದೀಗ ಕೇಂದ್ರ ಆರೋಗ್ಯ ಇಲಾಖೆ(Central Health Department) ಇತ್ತೀಚೆಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಏ.10 ಹಾಗೂ ಏ.11ರಂದು ಎರಡು ದಿನಗಳ ಕಾಲ ಕೊರೋನಾ(Corona virus) ಚಿಕಿತ್ಸೆಯ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲು ಅಣಕು ಕಸರತ್ತು (ಮಾಕ್‌ ಡ್ರಿಲ್‌) ನಡೆಸುವಂತೆ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಯಿಂದ ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆ, ಬೌರಿಂಗ್‌ ಆಸ್ಪತ್ರೆ, ಸಿ.ವಿ. ರಾಮನ್‌, ಜಯನಗರ ಸಾರ್ವಜನಿಕ ಆಸ್ಪತ್ರೆ, ರಾಜಾಜಿನಗರ ಇಎಸ್‌ಐ ಆಸ್ಪತ್ರೆಗಳಲ್ಲಿ ಮಾಕ್‌ ಡ್ರಿಲ್‌ ನಡೆಸಲಾಯಿತು. ಈ ವೇಳೆ ಆಸ್ಪತ್ರೆಯಲ್ಲಿನ ಸಿಬ್ಬಂದಿ, ಔಷಧಗಳು, ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಪರಿಶೀಲಿಸಲಾಯಿತು. ಆಕ್ಸಿಜನ್‌ ಘಟಕಗಳನ್ನು ಡ್ರೈರನ್‌ ಮಾಡುವ ಮೂಲಕ ಸಿದ್ಧತೆ ಪರಿಶೀಲಿಸಲಾಯಿತು.

ಅಣಕು ಕಸರತ್ತಿನಿಂದ ಕೊರೋನಾ ಪ್ರಕರಣಗಳು ಏಕಾಏಕಿ ಏರಿಕೆಯಾದರೆ ಲಭ್ಯವಿರುವ ವ್ಯವಸ್ಥೆ ಹಾಗೂ ಅಗತ್ಯ ಬೀಳಬಹುದಾದ ಹೆಚ್ಚುವರಿ ವ್ಯವಸ್ಥೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗದಂತೆ ಕ್ರಮವಹಿಸಲು ನೆರವಾಗಲಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದರು.

ವಿವಿಧ ಆಸ್ಪತ್ರೆಗಳಲ್ಲಿ ಏ.11 ರಂದು ಸಹ ಅಣಕು ಕಸರತ್ತು ನಡೆಯಲಿದೆ. ಸಿದ್ಧತೆಯ ವರದಿಗಳನ್ನು ಕೇಂದ್ರ ಸೂಚಿಸಿರುವ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು ಎಂದು ಕೆ.ಸಿ. ಜನರಲ್‌ ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿದರು.

ಬೆಂಗಳೂರು:  ರಾಜ್ಯದಲ್ಲಿ ಭಾನುವಾರ 197 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 110 ಮಂದಿ ಗುಣಮುಖ ಹೊಂದಿದ್ದಾರೆ.

ಕಳೆದ 24 ಗಂಟೆಗಳಲ್ಲಿ 6,729 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಿದ್ದು, ಶೇ.2.92ರಷ್ಟುಪಾಸಿಟಿವಿಟಿ ದರದೊಂದಿಗೆ 197 ಮಂದಿಗೆ ಸೋಂಕು ವರದಿಯಾಗಿದೆ. ಇದೇ ವೇಳೆ 110 ಮಂದಿ ಗುಣಮುಖರಾಗಿದ್ದು, 1,830 ಸಕ್ರಿಯ ಸೋಂಕಿತರು ಮನೆ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತರ ಪೈಕಿ ಬೆಂಗಳೂರು ನಗರ 71, ಶಿವಮೊಗ್ಗ 29, ಬಾಗಲಕೋಟೆ, ಬೆಳಗಾವಿಯಲ್ಲಿ ತಲಾ 14, ದಾವಣಗೆರೆ 13, ಮೈಸೂರು 10, ರಾಯಚೂರು, ಬಳ್ಳಾರಿ ತಲಾ 7, ಬೆಂಗಳೂರು ಗ್ರಾಮಾಂತರ 5, ಬೀದರ್‌, ಹಾವೇರಿ, ಕಲಬುರಗಿಯಲ್ಲಿ ತಲಾ 4, ಉತ್ತರ ಕನ್ನಡ 3, ತುಮಕೂರು, ಮಂಡ್ಯ, ಚಾಮರಾಜನಗರ ತಲಾ 2, ವಿಜಯಪುರ, ವಿಜಯನಗರ, ಕೊಪ್ಪಳ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.

Corona virus