ಬೆಂಗಳೂರು: ಸಂಚಾರ ದಟ್ಟಣೆಯಿಂದ ಜನರಿಗಾಗುವ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಎಂದಿರುವ ಹೈಕೋರ್ಟ್, ಮೇ ದಿನದಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನ ಮತ್ತು ಟೌನ್ ಹಾಲ್ ನಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಟ್ರೇಡ್ ಯೂನಿಯನ್ ಗಳು ನಡೆಸಲು ಉದ್ದೇಶಿಸಿದ್ದ ಮೆರವಣಿಗೆಗೆ ಅನುಮತಿಯನ್ನು ಗುರುವಾರ ನಿರಾಕರಿಸಿದೆ.

ಮೇ 1 ರಂದು ರ‍್ಯಾಲಿ ನಡೆಸಲು ಅನುಮತಿ ನೀಡಬೇಕೆಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಮತ್ತಿತರ ಸಂಘಟನೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆಯಲ್ಲಿ ನ್ಯಾಯಮೂರ್ತಿಗಳಾದ ಆರ್ ದೇವದಾಸ್ ಮತ್ತು ಕೆಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಆದೇಶವನ್ನು ನೀಡಿತು.

ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಸ್ವಾತಂತ್ರ ಉದ್ಯಾನವನ ಹೊರತುಪಡಿಸಿ ನಗರದ ಉಳಿದೆಡೆ ಮೆರವಣಿಗೆ, ಪ್ರತಿಭಟನೆಗೆ ಅವಕಾಶ ನೀಡದಂತೆ ಮಾರ್ಚ್ 3, 2022 ರಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದಾಗ್ಯೂ, ಸಂಚಾರ ದಟ್ಟಣೆಗೆ ಕಾರಣವಾಗದಂತೆ ಕರಗ ಮಹೋತ್ಸವ ಆಚರಿಸುವಂತೆ ಹಿಂದಿನ ಆದೇಶವನ್ನು ಹೈಕೋರ್ಟ್ ಮಾರ್ಪಡಿಸಿತ್ತು.

ಮಾರ್ಪಡಿಸಿದ ಆದೇಶ ಉಲ್ಲೇಖಿಸಿದ ಅರ್ಜಿದಾರರ ಪರ ವಕೀಲರು, ಯೂನಿಯನ್ ಪರ ಸದಸ್ಯರು ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತ ಮೆರಣಿಗೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ, ಈ ಮೆರವಣೆಗೆಯನ್ನು ಕರಗದೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅರ್ಜಿದಾರರ ಪರ ಸದಸ್ಯರು ಫುಟ್ ಪಾತ್ ನಲ್ಲಿ ನಡೆದು ಹೋದರೆ ಅನುಮತಿಯ ಅಗತ್ಯವೇ ಇಲ್ಲ ಆದರೆ, ಮೆರವಣಿಗೆ ನಡೆಸಬಾರದು ಎಂದು ಹೈಕೋರ್ಟ್ ಹೇಳಿತು.

HC refuses to grant permission for May Day rally