ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ವಿಚಕ್ಷಣಾ ದಳ ವಿಧಿಸಿದ್ದ 68,526 ರು. ದಂಡವನ್ನು ಪಾವತಿ ಮಾಡಿದ್ದೇನೆ. ಇನ್ನು ಮುಂದೆ ಕರೆಂಟ್ ಕಳ್ಳ ಎನ್ನುವುದನ್ನು ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇದೇ ವೇಳೆ ಬೆಸ್ಕಾಂ ವಿಧಿಸಿರುವ ದಂಡದ ಮೊತ್ತ ಲೋಪದಿಂದ ಕೂಡಿದ್ದು, ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದೂ ಒತ್ತಾಯ ಮಾಡಿದ್ದಾರೆ.
ನಾನು ಬಳಕೆ ಮಾಡಿರುವುದು 71 ಯೂನಿಟ್. ಅದಕ್ಕೆ ಮೂರು ಪಟ್ಟು ದಂಡವೆಂದರೂ 2,526 ರು. ಆಗುತ್ತದೆ. ಆದರೆ ಬೆಸ್ಕಾಂನವರು ನನ್ನ ಮನೆಗೆ ಅನುಮತಿ ಪಡೆದಿರೋ 33 ಕಿಲೋವ್ಯಾಟ್ಗೂ (ಕೆವಿ) 66 ಸಾವಿರ ರು. ಬಿಲ್ ಹಾಕಿ, ಒಟ್ಟು 68,526 ರು.ಗಳ ಬಿಲ್ ಹಾಕಿದೆ. ನಿಯಮದ ಪ್ರಕಾರ ಬಿಲ್ ಹಾಕದೇ ಹೆಚ್ಚುವರಿ ಬಿಲ್ ಹಾಕಿದೆ. ಮಾಜಿ ಮುಖ್ಯಮಂತ್ರಿಗೇ ಹೀಗಾದರೆ ಸಾಮಾನ್ಯ ಜನರ ಕಥೆ ಏನು ಎಂದು ವಾಗ್ದಾಳಿ ನಡೆಸಿದರು. ದಂಡ ವಿಧಿಸಿರುವ ಬಗ್ಗೆ ಬೆಸ್ಕಾಂ ನವರಿಗೆ ಮರು ಪರಿಶೀಲನಾ ಪತ್ರ ಬರೆದಿದ್ದೇನೆ ಮತ್ತು ದಂಡವನ್ನೂ ಕಟ್ಟಿದ್ದೇನೆ.