ಚಿಕ್ಕಮಗಳೂರು:  ಜೆವಿಎಸ್ ಶಾಲೆಗೆ ಈ ಭಾರಿಯೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ೧೦೦ ಫಲಿತಾಂಶ ಬಂದಿರುವುದಕ್ಕೆ ಶಿಕ್ಷಕರ ಪರಿಶ್ರಮ, ಸಹಕಾರಕ್ಕೆ ತುಂಬು ಹೃದಯದ ಧನ್ಯವಾದ ಹೇಳಲು ಬಯಸುವುದಾಗಿ ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.

ಅವರು ಇಂದು ಜೆವಿಎಸ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲೆ ಆರಂಭಕ್ಕೂ ಮುನ್ನ ಶಾಲೆಯ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸಕ್ತ ಶೈಕ್ಷಣಿಕ ವರ್ಷದ ೨೦೨೪-೨೫ನೇ ಸಾಲಿನಲ್ಲಿಯೂ ಇದೇ ರೀತಿ ಶಾಲೆ ಜಿಲ್ಲಾ ಮಟ್ಟದಲ್ಲಿ ಹೆಸರು ಮಾಡಲು ಪರಿಶ್ರಮ ಹಾಕಿ ಸಹಕರಿಸಬೇಕೆಂದು ವಿನಂತಿಸಿದರು.

ಮುಂದೆ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ತಮ್ಮ ಬೋಧನೆಯನ್ನು ಉನ್ನತ ಮಟ್ಟದಲ್ಲಿ ಮಾಡುವುದರ ಜೊತೆಗೆ ಬರುವ ಎಲ್ಲಾ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕೆಂದು ಕಿವಿಮಾತು ಹೇಳಿದರು.

ಕಲಿಕೆ ಎನ್ನುವುದು ನಿರಂತರವಾಗಿರಬೇಕು ಹಿರಿಯ ಶಿಕ್ಷಕರ ಮಾರ್ಗದರ್ಶನ ಪಡೆದು ಉತ್ತಮ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ಮೂಡಿಸಬೇಕು ಇದರಿಂದ ಪೋಷಕರು ಸಂತೋಷ ಪಡಲು ಸಹಕಾರಿಯಾಗುತ್ತದೆ ಜೊತೆಗೆ ಶಾಲೆಗೆ ಕೀರ್ತಿ ಬರುತ್ತದೆ ಎಂದರು.

ತರಬೇತುದಾರ ಉದಯ್ ಮಾತನಾಡಿ ೨೪ ಸೆಂಚುರಿ ಶಿಕ್ಷಣದ ಆಯಾಮ ಎಂಬ ಬಗ್ಗೆ ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ಶಿಕ್ಷಕರು ಕೇವಲ ಬೋಧನೆ ಮಾತ್ರವಲ್ಲ ಯಾವುದೇ ವಿಷಯದಲ್ಲಿ ಪರಿಣಿತಿ ಹೊಂದಬೇಕೆಂದು ಆ ನಿಟ್ಟಿನಲ್ಲಿ ಹೊಸ ಹೊಸ ಶಿಕ್ಷಣ ತಂತ್ರಗಳನ್ನು ಪರಿಚಯಿಸಲಾಗುತ್ತಿದೆ.

ಕಳೆದ ೧೫ ವರ್ಷಗಳ ಹಿಂದಿನ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಪ್ರಸ್ತುತ ವಿದ್ಯಾರ್ಥಿಗಳ ಜ್ಞಾನಕ್ಕೆ ತಕ್ಕಂತೆ ಬೋಧನೆ ಮಾಡಬೇಕಾದ ಅಗತ್ಯ ಇದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ವಿಜಿತ್, ಸಿಇಓ ಕುಳ್ಳೇಗೌಡ, ಇತರೆ ಶಿಕ್ಷಕರು ಉಪಸ್ಥಿತರಿದ್ದರು.

Heartfelt thanks to the teachers for their hard work and cooperation