ವಿಜಯಪುರ: ಲಿಂಗಾಯತರನ್ನ ಬಿಜೆಪಿ ನಿರ್ಲಕ್ಷ್ಯ ಮಾಡುತ್ತಿದೆ ಎನ್ನುವ ಕಾಂಗ್ರೆಸ್‌ನ ಆರೋಪಕ್ಕೆ ಬಿಜೆಪಿ ಒಂದೇ ಪ್ರಶ್ನೆಯ ಮೂಲಕ ಉತ್ತರ ನೀಡಿತ್ತು. ‘ಕಾಂಗ್ರೆಸ್‌ ಮುಂದಿನ ಚುನಾವಣೆಯಲ್ಲಿ ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಘೋಷಿಸಲಿದೆಯೇ?’ ಎಂದು ಪ್ರಶ್ನೆ ಮಾಡಿತ್ತು. ಆದರೆ, ಈಗ ಕಾಂಗ್ರೆಸ್ನ ಹಿರಿಯ ಲಿಂಗಾಯತ ನಾಯಕ ಎಂಬಿ ಪಾಟೀಲ್‌, ಸಿಎಂ ಸ್ಥಾನಕ್ಕೆ ನಾನೂ ಸರ್ಮಥ ಎಂದು ಹೇಳುವ ಮೂಲಕ ಸಿಎಂ ಸ್ಥಾನದ ಫೈಟ್‌ಗೆ ಇಳಿದಿದ್ದಾರೆ. ಅದರೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಏರಿದಲ್ಲಿ ಸಿಎಂ ಯಾರಾಗ್ತಾರೆ ಅನ್ನೂ ಕುತೂಹಲವೇ ಹೆಚ್ಚಾಗಿದೆ.

ಶನಿವಾರ ವಿಜಯಪುರದಲ್ಲಿ ಮಾತನಾಡಿದ ಅವರು, ‘ಶಾಸಕರ ಒಮ್ಮತದ ಅಭಿಪ್ರಾಯ ಬಂದ್ರೆ, ಹೈಕಮಾಂಡ್ ಅಸ್ತು ಎಂದ್ರೆ ಯಾರು ಬೇಕಾದ್ರೂ ಸಿಎಂ ಆಗಬಹುದು. ಸಮರ್ಥರು ಬಹಳಷ್ಟು ಜನರು ಇದ್ದೇವೆ.ಶಾಸಕರ ಅಭಿಪ್ರಾಯ ಬಂದರೆ ಖಂಡಿತಾ ಆಗಲಿದೆ. ನಾನು ನೀರಾವರಿ ಸಚಿವನಾಗಿ ಸಮರ್ಥವಾಗಿ ನಿಭಾಯಿಸಿದ್ದೇನೆ. ನಾನು ಸಿಎಂ ಆಗಲು ಸಮರ್ಥನಿದ್ದೇನೆ. ಅವಕಾಶ ಇದ್ರೆ ಅದು ಆಗಲಿದೆ ಎನ್ನುವ ಮೂಲಕ ಸಿಎಂ ಸ್ಥಾನಕ್ಕೆ ಎಂಬಿ ಪಾಟೀಲ್‌ ಟವಲ್‌ ಹಾಕಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಯಸಿದರೆ,  ಖರ್ಗೆ ಅವರು ಪ್ರಧಾನ ಮಂತ್ರಿಯನ್ನೇ ಮಾಡಬಹುದು ಎಂದು ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್‌, ‘ಸಿದ್ದರಾಮಯ್ಯ ಇದ್ದಾರೆ, ಡಿಕೆಶಿ ಇದ್ದಾರೆ, ನಾನಿದ್ದೀನಿ, ಡಾ ಪರಮೇಶ್ವರ ಇದ್ದಾರೆ, ಕೃಷ್ಣ ಭೈರೇಗೌಡ, ಆರ್ ವಿ ದೇಶಪಾಂಡೆ ಹೀಗೆ ಸಿಎಂ ಆಗಲು ಸಮರ್ಥರು ಸಾಕಷ್ಟು ಜನ ಇದ್ದೇವೆ. ಆದರೆ ಶಾಸಕರ ಅಭಿಪ್ರಾಯ ಬರಬೇಕು, ಅದರ ಜೊತೆಗೆ ಪಕ್ಷ ನಿರ್ಧಾರ ಮಾಡಬೇಕು. ನಾನು ಕೂಡಾ ಸಿಎಂ ಆಗಲು ಸಮರ್ಥನಿದ್ದೇನೆ. ಗೃಹ ಸಚಿವನಾಗಿ ಕೆಲಸಮಾಡಿರುವ ಅನುಭವ ಇದೆ. ಪಕ್ಷ ಹೈ ಕಮಾಂಡ್ ಬಯಸಿದರೆ ಸಿಎಂ ಆಗುವೆ ಅಥವಾ ಇನ್ಯಾರೋ‌ ಆಗಬಹುದು ಎಂದು ಹೇಳಿದ್ದಾರೆ.

ವಿಜಯಪುರದಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದ ಅವರು, ನಾಳೆ ಬಸವಣ್ಣನವರ ಜಯಂತಿ ಆಚರಣೆ ಮಾಡಲಾಗುತ್ತಿದೆ. ನಾಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡಲ ಸಂಗಮಕ್ಕೆ ಆಗಮಿಸುತ್ತಿದ್ದಾರೆ. ಇದು ಪಕ್ಷದ ಕಾರ್ಯಕ್ರಮ ಅಲ್ಲ, ಬಸವ ಭಕ್ತರ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ರಾಹುಲ್ ಗಾಂಧಿಯವರು ಐಕ್ಯ ಮಂಟಪಕ್ಕೆ ಭೇಟಿ ನೀಡಿ ಬಳಿಕ ಬಸವ ಭವನದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಾಡಿನ ವಿವಿಧ ಮಠಾಧಿಶರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಳಿಗ್ಗೆ 11 .30ಕ್ಕೆ ಕೂಡಲ ಸಂಗಮಕ್ಕೆ ಆಗಮಿಸುತ್ತಾರೆ. 12 ರಿಂದ 1.30 ರಿಂದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಧ್ಯಾಹ್ನ ದಾಸೋಹ ನಿಲಯದಲ್ಲಿ ಊಟ ಮಾಡಿ ವಿಜಯಪುರಕ್ಕೆ ಆಗಮಿಸುತ್ತಾರೆ. ಸಂಜೆ ವಿಜಯಪುರ ನಗರದಲ್ಲಿ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ವಿಜಯಪುರದ ಶಿವಾಜಿ ವೃತ್ತದಿಂದ ಕನಕದಾಸರ ವೃತ್ತದ ವರೆಗೆ ರೋಡ್ ಶೋ ಮಾಡಲಿದ್ದಾರೆ ಎಂದರು. ಆ ಬಳಿಕ ರಾತ್ರಿ ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಿದರು.

ಲಿಂಗಾಯತ ಮತಗಳು ಸೆಳೆಯುವ ಉದ್ದೇಶದಿಂದ ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆಗೆ, ಬಸವಣ್ಣನವರು ಕೇವಲ ಲಿಂಗಾಯತ ಸಮುದಾಯಕ್ಕೆ ಸೀಮಿತ ಇಲ್ಲ. ಅನ್ಯಾಯಕ್ಕೊಳಗಾದ, ನೊಂದವರ ಧ್ವನಿ ಬಸವಣ್ಣ ಎಂದು ಎಂಬಿಪಾ ಹೇಳಿದ್ದಾರೆ. ಸವದಿ, ಶೆಟ್ಟರ್ ಸೇರಿದಂತೆ ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿದೆ. ಬಿಜೆಪಿ ಏನೇ ಟೀಕೆ ಮಾಡಿದ್ರೂ ನಿಜ ಜನರಿಗೆ ಗೊತ್ತಿದೆ. ವೀರೇಂದ್ರ ಪಾಟೀಲರು ಅನಾರೋಗ್ಯದಿಂದ ಬಳಲುವಾಗ ಆಡಳಿತ ಸರಿ ಆಗೋದಿಲ್ಲ ಎಂದು ಇಳಿಸಲಾಗಿತ್ತು. ಆದರೆ, ಬಿ ಎಸ್ ವೈ ಅವರನ್ನು ಉಪಯೋಗಿಸಿಕೊಂಡು ಆಪರೇಷನ್ ಕಮಲ‌ ಮಾಡಿ ಅವರನ್ನು ತೆಗೆದು ಹಾಕಿದರು.

ಒಬ್ಬ ಲಿಂಗಾಯತರನ್ನು(ಬಿ ಎಸ್ ವೈ) ತೆಗೆದು ಮತ್ತೊಬ್ಬ ಲಿಂಗಾಯತರನ್ನು (ಬೊಮ್ಮಾಯಿ) ಸಿಎಂ ಮಾಡೋದು ಅವರ ಉದ್ದೇಶ ಇರಲಿಲ್ಲ. ಅದನ್ನು ಈಗಾಗಲೇ ಕುಮಾರಸ್ವಾಮಿ ಅವರು ಹೇಳಿದ್ದಾರೆ ಅದರ ಕುರಿತು ಹೋರಾಟ ಶುರುವಾದಾಗ ಹೆದರಿ ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು. ಬೊಮ್ಮಾಯಿ ಎಕ್ಸಿಡೆಂಟಲ್ ಮುಖ್ಯಮಂತ್ರಿ ಕಾಂಗ್ರೆಸ್ ಶಾಸಕರ ಸಭೆ ನಡೆಸಿ, ಎಐಸಿಸಿ ಅಧ್ಯಕ್ಷರು ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿ ಸಿಎಂ ಆಯ್ಕೆ ಮಾಡಲಾಗುತ್ತದೆ. ಕಾಂಗ್ರೆಸ್ ಪದ್ದತಿ ಏನಿದೆ ಎಂಬುದು ಅವರಿಗೆ ಗೊತ್ತಿದೆ ಎಂದರು.

I am capable of being CM: MB Patil