ನವದೆಹಲಿ: ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಗಣಿಗಳಿಂದ ಹೊರತೆಗೆಯಲಾದ ಕಬ್ಬಿಣದ ಅದಿರಿನ ರಫ್ತಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ಅದಿರು ರಫ್ತಿಗೆ ಅವಕಾಶ‌ ಕೋರಿ ಗಣಿ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ‌ ನೇತೃತ್ವದ ಪೀಠವು, ಅದಿರು ರಫ್ತಿಗೆ 11 ವರ್ಷಗಳ ನಂತರ ಹಸಿರು ನಿಶಾನೆ‌ ನೀಡಿದೆ.

ಅಲ್ಲದೆ, ಇ- ಹರಾಜಿನ ಮೂಲಕ ರಾಜ್ಯದಲ್ಲಿ ಅದಿರು ಮಾರಾಟಕ್ಕೆ ಇದ್ದ ಕೆಲವು ಕಠಿಣ ನಿಯಮಗಳನ್ನು ಸಡಿಲಗೊಳಿಸಿ ನ್ಯಾಯ ಪೀಠ ಆದೇಶ ಹೊರಡಿಸಿದೆ.

ಇದರಿಂದಾಗಿ ಉಕ್ಕು ಉತ್ಪಾದನಾ ಘಟಕಗಳು ಸ್ಥಳೀಯವಾಗಿ ಅದಿರು ಖರೀದಿಸಲು ನಿಯಮಗಳಲ್ಲಿ ರಿಯಾಯಿತಿ ದೊರೆತಂತಾಗಿದೆ.

ರಾಜ್ಯದ ಗಣಿಗಳಿಂದ ಹೊರ ತೆಗೆಯಲಾದ ಕಬ್ಬಿಣದ ಅದಿರನ್ನು ರಫ್ತು ಮಾಡುವ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ಸೂಚಿಸಿತ್ತು.

ಇದಕ್ಕೆ‌ ಕಳೆದ ತಿಂಗಳು ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಸರ್ಕಾರ, ಅದಿರು ರಫ್ತಿನ ವಿರುದ್ಧ ತನ್ನ ನಿಲುವು ಸ್ಪಷ್ಟಪಡಿಸಿತ್ತು.

ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ಜಿಲ್ಲೆಗಳಲ್ಲಿನ ಗಣಿಗಳಿಂದ ಅದಿರು ರಫ್ರು ಮಾಡುವುದಕ್ಕೆ ಸುಪ್ರೀಂ ಕೋರ್ಟ್ 2011ರಿಂದ ನಿಷೇಧ ಹೇರಿತ್ತು.

ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಅದಿರು ರಫ್ತು ನಿಷೇಧಿಸಬೇಕು, ಅದಿರು ಮಾರಾಟದ ಮೇಲೂ ಕಠಿಣ ಕ್ರಮ ಜರುಗಿಸಿ ನಿಯಮಾವಳಿ ರೂಪಿಸಬೇಕು ಎಂದು ಕೋರಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ‌ ಸುಪ್ರೀಂ ಕೋರ್ಟ್ ಗೆ‌ ಮೇಲ್ಮನವಿ ಸಲ್ಲಿಸಿತ್ತು.

 

Iron Ore Export from Karnataka