ಚಿಕ್ಕಮಗಳೂರು: ನಮ್ಮ ಮೀಸಲಾತಿ ನಮಗೆ ವಾಪಸ್‌ ಕೊಡದಿದ್ದರೆ ಸಿಎಂ ಬೊಮ್ಮಾಯಿ ಚಡ್ಡಿ ಬಿಚ್ಚಿಸ್ತೀವಿ ಎಂದಿದ್ದ ಚಿತ್ರದುರ್ಗದ ಎಸ್‌ಡಿಪಿಐ ಮುಖಂಡ ಜಾಕೀರ್‌ ಹುಸೇನ್‌ ತಿರುಗೇಟು ನೀಡದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನಮ್ಮದು, ‘ಬಾಂಬ್ ಹಾಕುವವರಿಗೆ ತಲೆ ಮೇಲೆ ಬಾಂಬ್ ಹಾಕುವುದು ಹೇಗೆಂದು ಗೊತ್ತಿರುವ ಸರ್ಕಾರ’ ಎಂದು ಎಚ್ಚರಿಕೆ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಎಸ್‌ಡಿಪಿಐ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವ ವಹಿಸಿದ್ದ ಜಾಕೀರ್‌ ಹುಸೇನ್‌, ಕರ್ನಾಟಕದಲ್ಲಿ ಸಂವಿಧಾನ ಬಾಹಿರ ಮೀಸಲಾತಿ ಯಾರಿಗೂ ಕೊಡಲ್ಲ. ಅದೇನು ತಲೆ ಹೋಗುತ್ತೋ, ತಲೆ ತೆಗಿತಿಯೋ, ಅದೇನು ತಾಕತ್ತನ್ನು ನೀನು ತೋರಿಸು ಆಗ ಅದಕ್ಕೇನು ಉತ್ತರ ಕೊಡಬೇಕು ಅದನ್ನು ನಾವು ಕೊಡುತ್ತೇವೆ. ನಮ್ಮ ಮೀಸಲಾತಿ ನಮಗೆ ವಾಪಸ್‌ ಕೊಡದಿದ್ದರೆ ಸಿಎಂ ಬೊಮ್ಮಾಯಿ ಚಡ್ಡಿ ಬಿಚ್ಚಿಸ್ತೀವಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದರು.

ಬಿರಿಯಾನಿ ಕೊಟ್ಟು ಸಾಕುವ ಭಾರತ ಈಗಿಲ್ಲ: ಜಾಕೀರ್‌ ಹುಸೇನ್‌ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ ಅವರು, ಇದು 1947ರ ಭಾರತವಲ್ಲ. ನೀವು ಮಾಡಿದ್ದೆಲ್ಲ ಸಹಿಸಿಕೊಂಡು, ಬಿರಿಯಾನಿ ಕೊಟ್ಟು ಸಾಕುವ ಭಾರತವೂ ಅಲ್ಲ. ನಿಮ್ಮ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆದು ನೀವು ಮೆರೆಯಲು ಅವಕಾಶ ಕೊಡುವ ಸರ್ಕಾರವೂ ಈಗಿಲ್ಲ. ಬಳಹ ಜಾಸ್ತಿ ಬಾಲ ಉದ್ದ ಮಾಡಿದರೆ ಅದನ್ನು ಕಟ್ ಮಾಡುವುದು ಹೇಗೆಂದು ಗೊತ್ತಿರುವ ಸರ್ಕಾರ ಇದು. ಬಾಂಬ್ ಹಾಕುವವರಿಗೆ ತಲೆ ಮೇಲೆ ಬಾಂಬ್ ಹಾಕುವುದು ಹೇಗೆಂದು ಗೊತ್ತಿರುವ ಸರ್ಕಾರ. ಭಯೋತ್ಪಾದನೆ ಮಾಡುವವರಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಇನ್ನೆಂದು ತಲೆ ಎತ್ತಬಾರದು ಎನ್ನುವ ತಾಕತ್ತು ತೋರಿಸುವ ಸರ್ಕಾರವಿದೆ ಎಂದು ಎಚ್ಚರಿಕೆ ನೀಡಿದರು.

ಎಸ್‌ಡಿಪಿಐ ಹುಟ್ಟಿದ ಕೇರಳದಲ್ಲೇ ಮುಸ್ಲಿಮರಿಗೆ ಮೀಸಲಾತಿ ಇಲ್ಲ: ಸಂವಿಧಾನ ಬಾಹಿರವಾಗಿ ಮೀಸಲಾತಿ ಕೇಳುವವರ ಪರ ಅದ್ಯಾರು ನಿಲ್ಲುತ್ತಾರೋ ನಿಂತುಕೊಳ್ಳಲಿ ಎಂದೂ ಸವಾಲು ಹಾಕಿದ ಅವರು ಧಮ್ಕಿ ಹಾಕುವ ರೀತಿ ತಾಲಿಬಾನ್ ಮಾದರಿ ಭಾರತದಲ್ಲಿ ನಡೆಯುವುದಿಲ್ಲ. ಎಸ್‌ಡಿಪಿಐನವನು ಏನಾದರೂ ತಾಲೀಬಾನ್ ಆಡಳಿತ ಇದೆ ಎಂದು ಭಾವಿಸಿದ್ದರೆ ಅದು ತಪ್ಪು. ಇಷ್ಟಕ್ಕೂ ಅವರಿಗೆ ಇಡಬ್ಲ್ಯೂಎಸ್‌ನಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಪಡೆಯಲು ಅವಕಾಶ ಕೊಟ್ಟಿದ್ದಾರೆ. ಇದರ ಮೇಲೆ ಬೆದರಿಕೆ ಹಾಕಿದರೆ ಹೇಗೆ ಎದುರಿಸಬೇಕು ಎಂದು ಸರ್ಕಾರಕ್ಕೂ ಗೊತ್ತು, ಪಕ್ಷಕ್ಕೂ ಗೊತ್ತು. ಎಸ್‌ಡಿಪಿಐ ಹುಟ್ಟಿದ್ದೇ ಕೇರಳದಲ್ಲಿಯೇ ಕೋಮು ಆಧಾರಿತ ಮತ ಆಧಾರಿತ ಮೀಸಲಾತಿ ಇಲ್ಲ. ಆಂಧ್ರದಲ್ಲಿ ಕೊಟ್ಟಿದ್ದರೂ ಸುಪ್ರೀಂ ಕೋರ್ಟ್‌ನ 7 ಜನ ನ್ಯಾಯಾಧೀಶರ ಪೀಠ ಇದು ಸಂವಿಧಾನ ಬಾಹಿರ ಎಂದು ವಜಾಗೊಳಿಸಿತ್ತು ಎಂದರು.

ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ: ಸಂವಿಧಾನ, ಕಾನೂನು, ನ್ಯಾಯಾಲಯಕ್ಕಿಂತ ಎತ್ತರದಲ್ಲಿರುವವರು ಎಂದು ಭಾವಿಸುತ್ತದೆ. ನಾವು ಹಾಗೆ ಭಾವಿಸುವುದಿಲ್ಲ ಕಾನೂನಿ ದೃಷ್ಠಿಯಲ್ಲಿ ಎಲ್ಲರೂ ಸಮಾನರು ಅದರ ಕೆಲಸವನ್ನು ಅದು ಮಾಡುತ್ತದೆ. ಕಾಂಗ್ರೆಸ್ ಮಾತ್ರ ಕಾನೂನಿಗಿಂತ ಮಿಗಿಲು ಎಂದು ಭಾವಿಸಿದೆ. ಆದರೆ ಕಾನೂನು ಎಲ್ಲರಿಗೂ ಒಂದೇ ತನಿಖೆ ಹಂತದಲ್ಲಿ ನಾವ್ಯಾರು ಮಧ್ಯಪ್ರವೇಶ ಮಾಡುವ ಪ್ರಶ್ನೆ ಇಲ್ಲ ಎಂದು ಮಾಡಾಳ್ ವಿರೂಪಾಕ್ಷಪ್ಪ ಬಂಧನದ ಮೂಲಕ ಇದನ್ನು ತೋರಿಸಿದ್ದೇವೆ ಎಂದು ಹೇಳಿದರು.

ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡಲ್ಲ: ನಮ್ಮ ನಾಯಕರಾದ ಅಮಿತ್ ಶಾ ಅವರೇ ನಮ್ಮ ಮೊದಲ ರಾಜಕೀಯ ವಿರೋಧಿ ಜೆಡಿಎಸ್ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಕಳೆದ ಬಾರಿಯೂ ಯಾವುದೇ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಈ ಬಾರಿಯೂ ಅದು ಸಾಧ್ಯವಿಲ್ಲ. ಸಿ.ಪಿ.ಯೋಗೇಶ್ವರ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಹೊಂದಾಣಿಕೆ ಮಾಡಿದ್ದರೆ ಅವರಿಬ್ಬರು ಸ್ಪರ್ಧೆ ಮಾಡುವ ಪ್ರಶ್ನೆಯೇ ಇರುತ್ತಿರಲಿಲ್ಲ.

ಚಿಕ್ಕಮಗಳೂರಿನಲ್ಲಿ ನನ್ನ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ 32 ಸಾವಿರ ಮತಗಳನ್ನು ಗಳಿಸಿದರು. ಹೊಂದಾಣಿಕೆ ಮಾಡಿಕೊಂಡಿದ್ದರೆ ಅಷ್ಟು ಮತಗಳನ್ನು ಗಳಿಸಲು ಹೇಗೆ ಸಾಧ್ಯವಾಗುತ್ತಿತ್ತು. ಎಂದಿಗೂ ಹೊಂದಾಣಿಕೆ ಮಾತಿಲ್ಲ. ಬಿಜೆಪಿ ಸ್ವತಂತ್ರ್ಯವಾಗಿ ಸ್ಪರ್ಧೆ ಮಾಡುತ್ತದೆ. ನಮ್ಮದು ವೈಚಾರಿಕ ರಾಜಕೀಯ ಪಕ್ಷ. ಅದನ್ನು ಬೆಳೆಸುವುದಷ್ಟೇ ನಮ್ಮ ಕೆಲಸ. ಹಾಗೆಂದು ನಕಾರಾತ್ಮಕ ರಾಜಕಾರಣ ಮಾಡುವುದಿಲ್ಲ. ನಮ್ಮದೇನಿದ್ದರೂ ಸಕಾರಾತ್ಮಕ ರಾಜಕಾರಣ ಎಂದರು.

National General Secretary C.T. Ravi alert