ರಾಯಬಾಗ: ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಜನಧನ್‌ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ರೈತರ ಬೆನ್ನಲುಬಾಗಿ ನಿಂತಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಭಾನುವಾರ, ಬಿಜೆಪಿ ಹಮ್ಮಿಕೊಂಡಿದ್ದ ರೈತ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರಸ್ತುತ ಬಜೆಟ್‌ನಲ್ಲಿ 1 ಲಕ್ಷ 25 ಸಾವಿರ ಕೋಟಿ ರೂ. ಮೊತ್ತವನ್ನು ರೈತರ ಅಭಿವೃದ್ಧಿಗಾಗಿ ಮಿಸಲಿರಿಸಿದ್ದಾರೆ. ರೈತರು ಬೆಳೆದ ಧಾನ್ಯ, ತರಕಾರಿ, ಹಣ್ಣುಗಳ ಸಂರಕ್ಷಣೆಗೆ ಯೋಜನೆ ರೂಪಿಸಲು 1 ಲಕ್ಷ ರೂ. ಕೋಟಿ ಹಣ ಮೀಸಲಿರಿಸಿದ್ದಾರೆ.

ಅಲ್ಲದೇ ರೈತರು ಬೆಳೆದ ಬೆಳೆಗಳು ವಿದೇಶಗಳಿಗೆ ರಫ್ತು ಮಾಡುವುದರ ಮೂಲಕ ರೈತರ ಆದಾಯ ದ್ವಿಗುಣಗೊಳಿಸಲು ಯೋಜನೆ ಹಾಕಿದ್ದಾರೆ ಎಂದರು. ರೈತರಿಗಾಗಿ ಮೊಟ್ಟಮೊದಲು ಬಜೆಟ್‌ ಮಂಡಿಸಿದವರು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ. ಯಡಿಯೂರಪ್ಪನವರು ಯಾವುದೇ ಜಾತಿ, ಧರ್ಮ ನೋಡದೆ ಎಲ್ಲ ವರ್ಗದ ಜನರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ, ಕಾಂಗ್ರೆಸ್‌ ಪಕ್ಷ 70 ವರ್ಷಗಳ ಆಡಳಿತ ನಡೆಸಿದರೂ, ರೈತರ ಏಳ್ಗೆಗಾಗಿ ಯಾವುದೇ ಅಭಿವೃದ್ಧಿ ಯೋಜನೆ ತರಲಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್‌, ಚುನಾವಣೆ ಬಂದಾಗ ರೈತರ ಮತ್ತು ಬಡವರ ಹೆಸರಿನಲ್ಲಿ ಸುಳ್ಳು ಪ್ರಚಾರ ಮಾಡಿ ಮೊಸಳೆ ಕಣ್ಣೀರು ಸುರಿಸುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಯೋಜನೆ ಜಾರಿಗೆ ತಂದು ಸಮಾಜದಲ್ಲಿ ಒಡಕು ಉಂಟು ಮಾಡಿದ್ದಾರೆ ಎಂದರು. ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಕಾಂಗ್ರೆಸ್‌ ಅವಧಿಯಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದ್ದವು. ಆದರೆ, ಆತ್ಮನಿರ್ಭರ ಮೂಲಕ ಪ್ರಧಾನಿ ಮೋದಿ ದೇಶ ಕಟ್ಟುತ್ತಿದ್ದಾರೆ. ಇಂದು ರೈತರಿಗೆ ಜನಧನ್‌ ಮೂಲಕ ನೇರವಾಗಿ ರೈತರ ಖಾತೆಗೆ ಜಮೆ ಆಗುತ್ತಿದೆ. ಕೃಷಿಯಲ್ಲಿ ಹೊಸ ತಂತ್ರಜ್ಞಾನ ತಂದು ಸುಧಾರಣೆ ಕೈಗೊಳ್ಳಲಾಗುತ್ತಿದೆ ಎಂದರು.

ಕುಡಚಿ ಶಾಸಕ ಪಿ.ರಾಜೀವ ಮಾತನಾಡಿ, ರಾಜಸ್ಥಾನದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌, ಈಗ ಅಲ್ಲಿನ ರೈತರು ಸಾಲ ತೀರಿಸಲು ಭೂಮಿ ಮಾರಾಟ ಮಾಡುವ ಹಂತಕ್ಕೆ ತಲುಪಿದೆ ಎಂದು ವ್ಯಂಗ್ಯವಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಿ.ಎಂ.ಐಹೊಳೆ, ನನ್ನ ಅಧಿಕಾರವಧಿಯಲ್ಲಿ ಕರಗಾಂವ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದು, ಇನ್ನುಳಿದ ಭೆಂಡವಾಡ ಮತ್ತು ಹನುಮಾನ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಇನ್ನುಳಿದ ಎಲ್ಲ ಮೂಲಭೂತ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಭೆಂಡವಾಡೆ, ಜಿಲ್ಲಾಧ್ಯಕ್ಷ ಸತ್ಯಪ್ಪ ನಾಯಿಕ, ಸಂಜಯ ಪಾಟೀಲ, ಬಸವರಾಜ ಡೊಣವಾಡೆ, ಮನೋಜಕುಮಾರ ಮನಗುಳಿ, ಮಹೇಶ ಭಾತೆ, ಭರತೇಶ ಬನವಣೆ, ಸತೀಶ ಅಪ್ಪಾಜಿಗೋಳ, ತಾತ್ಯಾಸಾಬ ಕಾಟೆ, ಎಲ್‌.ಬಿ.ಚೌಗುಲೆ, ರಾಜಶೇಖರ ಖನದಾಳೆ, ಅರುಣ ಐಹೊಳೆ, ಸುರೇಶ ಬೆಲ್ಲದ, ಅಪ್ಪಾಸಾಬ ಬ್ಯಾಕೂಡೆ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ವಿ.ಎಸ್‌.ಪೂಜಾರಿ ಸೇರಿದಂತೆ ರೈತ ಮೋರ್ಚಾ ಪದಾಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಇದ್ದರು. ಪಟ್ಟಣದ ಝೇಂಡಾ ಕಟ್ಟೆಯಿಂದ ಮಹಾವೀರ ಭವನದವರೆಗೆ ಚಕ್ಕಡಿ ಗಾಡಿಯಲ್ಲಿ ಮೆರವಣಿಗೆ ಮೂಲಕ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬರಮಾಡಿಕೊಳ್ಳಲಾಯಿತು.

Prime Minister Modi stands as the backbone of farmers