ಚಿಕ್ಕಮಗಳೂರು: ಕಳೆದ ೮ ತಿಂಗಳಿನಿಂದ ಹಾಲಿಗೆ ಪ್ರೋತ್ಸಾಹ ಧನ ನೀಡದೆ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಆರ್. ಆನಂದಪ್ಪ ಅವರ ನೇತೃತ್ವದಲ್ಲಿ ಹಸು ಮತ್ತು ಹಾಲಿನ ಕ್ಯಾನ್ನೊಂದಿಗೆ ಪಕ್ಷದ ಕಚೇರಿಯಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆಜಾದ್ ಪಾರ್ಕ್ ಸರ್ಕಲ್ನಲ್ಲಿ ನಡೆದ ಪ್ರತಿಭಟನೆ ವೇಳೆ ಆನಂದಪ್ಪ ಮಾತನಾಡಿ, ಆನಂದಪ್ಪ ಮಾತನಾಡಿ, ಹೈನುಗಾರಿಕೆ ಪ್ರೋತ್ಸಾಧನಕ್ಕೆಂದು ಬಿಜೆಪಿ ನೇತೃತ್ವದ ಯಡಿಯೂರಪ್ಪ ಸರ್ಕಾರ ೫ ರೂ. ನೀಡುತ್ತಿತ್ತು. ಆದರೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆ ಸಂದರ್ಭದಲ್ಲಿ ೫ ರೂ. ಜೊತೆಗೆ ೨ ರೂ. ಸೇರಿಸಿ ೭ ರೂ. ನೀಡುತ್ತೇವೆ ಎಂದು ಹೇಳಿತ್ತು. ಆದರೆ ೭೧೫ ಕೋಟಿ ರೂ. ಹಣವನ್ನು ೮ ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ. ರೈತರಿಗೆ ಅನ್ಯಾಯ ಮಾಡುತ್ತಿದೆ. ಜನರಿಗಷ್ಟೇ ಅಲ್ಲ, ಜಾನುವಾರುಗಳಿಗೂ ಅನ್ಯಾಯ ಮಾಡುತ್ತಿದೆ. ಜಾನುವಾರುಗಳ ಮೇವಿನ ಬೆಲೆಯನ್ನೂ ಹೆಚ್ಚಿಸಿದೆ ಎಂದು ದೂರಿದರು.
ಹಿಂದಿನ ಬಿಜೆಪಿ ಸರ್ಕಾರ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರೈತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿತ್ತು. ರೈತ ಕಿಸಾನ್ ಸಮ್ಮಾನ್, ವಿದ್ಯಾನಿಧಿ ಯಂತಹ ಅನೇಕ ಉಪಯುಕ್ತ ಯೋಜನೆಗಳನ್ನು ಬಿಜೆಪಿ ನೀಡಿತ್ತು ಅದೆಲ್ಲವನ್ನೂ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು.
ಇಂದು ಸಾಂಕೇತಿಕವಾಗಿ ಹೋರಾಟವನ್ನು ಮಾಡುತ್ತಿದ್ದೇವೆ. ಪ್ರೋತ್ಸಾಹ ಧನವನ್ನು ಸರ್ಕಾರ ಬಿಡುಗಡೆ ಮಾಡದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಹೋದಲ್ಲೆಲ್ಲಾ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಈ ದೇಶದ ಬೆನ್ನೆಲುಬಾದ ರೈತನಿಗೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತನ್ನು ಮರೆತಿದ್ದಾರೆ ಎಂದರು.
ಹಾಲಿಗೆ ಬಿಜೆಪಿ ಸರ್ಕಾರ ೫ ರೂ. ಪ್ರೋತ್ಸಾಹ ಧನ ನೀಡುತ್ತಿದೆ. ನಾವು ೨ ರೂ ಸೇರಿಸಿ ೭ ರೂ. ಕೊಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ವರ್ಗಾಣೆ ದಂಧೆ, ಕಮಿಷನ್ ದಂಧೆ ಮಧ್ಯೆ ರೈತರಿಗೆ ಕೊಡಬೇಕಾದ ೭೧೫ ಕೋಟಿ ರೂ. ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡಿದೆ ಎಂದು ದೂರಿದರು.
೭ ರೂ. ಪ್ರೋತ್ಸಾಹ ಧನ ಕೊಡುವುದಿರಲಿ, ಹಿಂದೆ ಬಿಜೆಪಿ ಸರ್ಕಾರ ಕೊಡುತ್ತಿದ್ದ ೫ ತೂ. ಪ್ರೋತ್ಸಾಹಧನವನ್ನೂ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ. ತಕ್ಷಣ ರೈತರಿಗೆ ಕೊಟ್ಟ ಮಾತಿನಿಂತೆ ೭ ರೂ. ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು. ಮತ್ತು ಬಾಕಿ ಉಳಿಸಿಕೊಂಡಿರುವ ೭೧೫ ಕೊಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿಗಳ ಹೆಸರಲ್ಲಿ ರಾಜ್ಯದ ಬೊಕ್ಕಸವನ್ನು ನುಂಗಿ ನೀರು ಕುಡಿದಿದ್ದಾರೆ. ಬಡವರು, ದೀನ ದಲಿತರು, ರೈತರ ಸರ್ಕಾರ ಎಂದು ಹೇಳುತ್ತಾರೆ. ರೈತರಿಗೆ ನೀಡಿದ ಒಂದು ಭರವಸೆಯ್ನೂ ಈಡೇರಿಸಲು ಸಾಧ್ಯವಾಗಿಲ್ಲ. ಜನರು ಕಾಂಗ್ರೆಸ್ ಸರ್ಕಾರದ ವಿರುದ್ಧ ರೊಚ್ಚಿಗೇಳುವ ದಿನ ದೂರವಿಲ್ಲ. ಕಾಂಗ್ರೆಸ್ಗೆ ಮತ ಹಾಕಿ ತಪ್ಪು ಮಾಡಿದೆವು ಎಂದು ಜನ ಮಾತನಾಡುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಟಿ.ರಾಜಶೇಖರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮುಖಂಡರುಗಳಾದ ಬಿ.ರಾಜಪ್ಪ, ಮಂಜುನಾಥ್, ನಾರಾಯಣಗೌಡ, ಹಂಪಯ್ಯ, ಪುಷ್ಪರಾಜ್ ಇತರರು ಭಾಗವಹಿಸಿದ್ದರು.
Protest against state government by BJP Raita Morcha