ಮೈಸೂರು :  ಜನನವಾದ ಮೇಲೆ ಮರಣ ನಿಶ್ಚಿತ. ಮರಣಿಸಿದ ನಂತರವೂ ಜನರ ಮನಸ್ಸಿನಲ್ಲಿ ಜೀವಂತವಾಗಿರುವಂತೆ ಬದುಕಬೇಕು. ಅಂತಹ ಬದುಕು ಪುನೀತ್‌ ರಾಜ್‌ಕುಮಾರ್‌ ಅವರದ್ದಾಗಿತ್ತು ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಬಣ್ಣಿಸಿದರು.

ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥ ಅಂಗವಾಗಿ ನರೇಂದ್ರ ಮೋದಿ ಸೇವಾಟ್ರಸ್ಟ್‌, ಸಮಾಜ ಸೇವಾ ಟ್ರಸ್ಟ್‌, ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ), ಸೇವಾ ಭಾರತಿ, ಲಯನ್ಸ್‌ ಜೀವಧಾರ ರಕ್ತನಿಧಿ ಕೇಂದ್ರ ಸಹಯೋಗದೊಂದಿಗೆ ಸಿದ್ಧಾರ್ಥನಗರದಲ್ಲಿರುವ ಡಾ.ಪಿ.ಎಚ್‌. ರಾಘವೇಂದ್ರ ಶೆಟ್ಟಿನಾಗಮಣಿ ಸಭಾಂಗಣದಲ್ಲಿ ಶನಿವಾರ ನಡೆದ ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಶ್ರೀಮಂತಿಕೆ, ಜೀವಿತಾವಧಿ ಮುಖ್ಯವಲ್ಲ. ಹೇಗೆ ಬದುಕಿದ್ದರು ಎಂಬುದೇ ಮುಖ್ಯ. ಸಂತ ಕಬೀರರು ಹೇಳಿದಂತೆ ನಾವು ಮರಣಿಸಿದಾಗ ಜನರಿಗೆ ದುಃಖವಾದರೆ ಅದು ಸಾರ್ಥಕ ಬದುಕಾಗುತ್ತದೆ. ಕೇವಲ 46 ವರ್ಷ ಬದುಕಿದರೂ ಪುನೀತ್‌ ಸಾವಿರಾರು ಜನರಿಗೆ ಆಸರೆಯಾಗಿದ್ದರು. ಅನೇಕ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಧನ ಸಹಾಯ ಮಾಡಿದ್ದರು. ಪ್ರಚಾರ ಬಯಸದೇ ಕರ್ಣನ ರೀತಿಯಲ್ಲಿ ಕೊಡುಗೈ ದಾನಿಯಾಗಿದ್ದರು ಎಂದು ಅವರು ಸ್ಮರಿಸಿದರು.

ಸಂಬಂಧ ಇಲ್ಲದವರು ಕೂಡ ಪುನೀತ್‌ ಅವರ ಸಾವಿಗೆ ದುಃಖಪಟ್ಟಿದ್ದಾರೆ. ಶಾರೀರಿಕವಾಗಿ ನಮ್ಮನ್ನಗಲಿದರೂ ಅವರಿಗೆ ಸಾವಿಲ್ಲ, ಅವರು ಅಜರಾಮರ ಎಂದರು.

ನ್ಯೂ ಸಯ್ಯಾಜಿರಾವ್‌ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ 200 ಹೆಚ್ಚು ಮಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ಹಾಗೆಯೇ 50 ಹೆಚ್ಚು ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ, 100 ಕೆ.ಜಿ ಬಾತು ಮತ್ತು 25 ಕೆ.ಜಿ ಕೇಸರಿ ಬಾತ್‌ ಸಾರ್ವಜನಿಕರಿಗೆ ವಿತರಿಸಲಾಯಿತು.

ಆ ನÜಂತರ ಲೋಹಿತ್‌ ಸಂಗೀತ ವಾದ್ಯ ಸಂಸ್ಥೆಯವರು ಪುನೀತ್‌ ರಾಜ್‌ಕುಮಾರ್‌ ಅವರ ಹಾಡುಗಳನ್ನು ಹಾಡುವ ಮೂಲಕ ಪುನೀತ್‌ ನಮನ ಸಲ್ಲಿಸಿದರು.

ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್‌, ಸಮಾಜ ಸೇವಕ ಮಹೇಂದ್ರ ಸಿಂಗ್‌ ಕಾಳಪ್ಪ, ಎಂಡಿಎ ಸದಸ್ಯೆ ಲಕ್ಷ್ಮೀದೇವಿ, ಸವಿತಾ ಘಾಟ್ಕೆ, ವಿಜಿ, ಸದಾಶಿವ, ಚಂದ್ರು, ವಿದ್ಯಾ, ಬ್ಲಡ್‌ ಆನ್‌ ಕಾಲ್‌ ಕ್ಲಬ್‌ನ ದೇವೇಂದ್ರ ಪರಿಹಾರಿಯ, ಆನಂದ್‌ ಮಂಡೂತ್‌, ಕೆ.ಆರ್‌. ಬ್ಯಾಂಕ್‌ ಉಪಾಧ್ಯಕ್ಷ ಬಸವರಾಜ್‌, ನಟರಾಜ್‌ ಮೊದಲಾದವರು ಇದ್ದರು.