ಮಂಡ್ಯ: ಟಿಪ್ಪು ಸುಲ್ತಾನ್ ಗೌರವಾರ್ಥ ಕರ್ನಾಟಕದ ಖ್ಯಾತ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇಗುಲದಲ್ಲಿ ನಿರ್ವಹಿಸಲಾಗುತ್ತಿದ್ದ  ‘ಸಲಾಂ ಆರತಿ’ಗೆ ತಡೆ ನೀಡಲಾಗಿದ್ದು, ಸಂಧ್ಯಾರತಿಗೆ ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಮೂಲಗಳ ಪ್ರಕಾರ, ಮಂಡ್ಯದಲ್ಲಿರುವ ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯು ಪೂಜೆ ಹೆಸರನ್ನ ಬದಲಿಸುವಂತೆ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವಥಿಗೆ ದೇವಸ್ಥಾನ ಮಂಡಳಿ ಪತ್ರ ಬರೆದಿತ್ತು. ಪ್ರತೀ ದಿನ ದೇಗುಲದಲ್ಲಿ ಟಿಪ್ಪು ಸುಲ್ತಾನ್ ಸಲಾಂ ಆರತಿ ನಡೆಯುತಿತ್ತು. ಸಲಾಂ ಆರತಿಯನ್ನ ವಿರೋಧಿಸಿ ಕೆಲ ಹಿಂದೂ ಸಂಘಟನೆಗಳು ಆಕ್ಷೇಪ ಎತ್ತಿವೆ.

ಹಾಗಾಗಿ ಪೂಜೆ ಹೆಸರನ್ನ ಬದಲಿಸುವಂತೆ ದೇಗುಲ ಮಂಡಳಿ ಪತ್ರ ಬರೆದಿತ್ತು. ಮಂಡ್ಯ ಡಿಸಿ (Mandya deputy commissioner) ಮೂಲಕ ಮುಜರಾಯಿ ಇಲಾಖೆ (Muzrai Department) ಆಯುಕ್ತರಿಗೆ ಪತ್ರ ರವಾನೆಯಾಗಿತ್ತು. ಸಲಾಂ ಆರತಿ ಹೆಸರನ್ನ ಬದಲಿಸಬಹುದು ಎಂದು ಡಿಸಿ ಪತ್ರದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಹಾಗಾಗಿ, ಈ ಸಂಬಂಧ ಮುಜರಾಯಿ ಇಲಾಖೆ ಆಯುಕ್ತರಿಂದ ಅಧಿಕೃತವಾಗಿ ಒಪ್ಪಿಗೆಯ ಆದೇಶ ಹೊರಬೀಳಬೇಕಿದೆ.

ಮೇಲುಕೋಟೆಯಲ್ಲಿ ಇನ್ನು ಮುಂದೆ ದೀವಟಿಗೆ ಸಲಾಂ ಬದಲಿಗೆ ಸಂಧ್ಯಾರತಿ ಎಂದು ಮರುನಾಮಕರಣಕ್ಕೆ ಮಂಡ್ಯ ಡಿಸಿ ಶಿಫಾರಸ್ಸು ಮಾಡಿದ್ದಾರೆ. ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ದೀವಟಿಗೆ ಸಲಾಂ ಆರತಿ ನಡೆಯುತ್ತಿದೆ. ದೀವಟಿಗೆ ಸಲಾಂ ಆರತಿ ಹೆಸರು ಬದಲಿಸುವಂತೆ ಧಾರ್ಮಿಕ ಪರಿಷತ್ತು ಸದಸ್ಯ ನವೀನ್ ಎಂಬುವವರು ಮಂಡ್ಯ ಡಿಸಿಗೆ ಮನವಿ ಸಲ್ಲಿಸಿದ್ದರು. ಬಳಿಕ ವರದಿ ನೀಡುವಂತೆ ದೇವಾಲಯ EO ಮತ್ತು ಪಾಂಡವಪುರ ACಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು.

ದೇವಾಲಯದ ಅರ್ಚಕರು, ಸ್ಥಾನಿಕರು, ಪರಿಚಾರಕರ ಸಮ್ಮುಖದಲ್ಲಿ ಈ ಕುರಿತು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸಲಾಂ ಹೆಸರು ಬದಲಾಯಿಸಿ, ಸಂಧ್ಯಾರತಿ ಎಂದು ಕರೆಯುವಂತೆ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿತ್ತು. ಅಧಿಕಾರಿಗಳ ಮುಂದೆ ದೇವಾಲಯ ಸ್ಥಾನಿಕರು ಹಾಗೂ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಸಂಧ್ಯಾರತಿ ಎಂದು ಬದಲಿಸುವಂತೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಮುಜರಾಯಿ ಆಯುಕ್ತರಿಗೆ ಇದೀಗ ಡಿಸಿ ಪತ್ರ ಬರೆದಿದ್ದಾರೆ.

‘Salaam Aarti’ gets a break