ಕೊಲಂಬೊ: ದೇಶದಲ್ಲಿ ತೀವ್ರಗೊಂಡಿರುವ ಆಂತರಿಕ ಕಲಹದ ನಡುವೆಯೇ ಅಧ್ಯಕ್ಷ ಗೋಟಾಬಯ ರಾಜಪಕ್ಸೆಗೆ ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜಿನಾಮೆ ನೀಡಿದ ಬೆನ್ನಲ್ಲೇ ಅವರ ಕುರುನೇಗಾಲದ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

ಮಹಿಂದಾ ರಾಜಪಕ್ಸೆ ರಾಜಿನಾಮೆ ನೀಡಿದ ಕೆಲವೇ ಗಂಟೆಗಳ ನಂತರ ವಾಯುವ್ಯ ಪ್ರಾಂತ್ಯದ ಕುರುನೇಗಾಲ ನಗರದಲ್ಲಿ ಅವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ. ಇಂದು ಮುಂಜಾನೆ, ಸರ್ಕಾರದ ವಿರೋಧಿ ಪ್ರತಿಭಟನಾಕಾರರು ಶ್ರೀಲಂಕಾದ ಮೊರಟುವಾ ಮೇಯರ್ ಸಮನ್ ಲಾಲ್ ಫರ್ನಾಂಡೋ ಮತ್ತು ಸಂಸದರಾದ ಸನತ್ ನಿಶಾಂತ, ರಮೇಶ್ ಪತಿರಾನ, ಮಹಿಪಾಲ ಹೆರಾತ್, ಥಿಸ್ಸಾ ಕುಟ್ಟಿಯಾರಾಚಿ ಮತ್ತು ನಿಮಲ್ ಲಾಂಜಾ ಅವರ ಅಧಿಕೃತ ನಿವಾಸಗಳಿಗೆ ಬೆಂಕಿ ಹಚ್ಚಿದರು.

ಇಂಟರ್-ಯೂನಿವರ್ಸಿಟಿ ಸ್ಟೂಡೆಂಟ್ಸ್ ಫೆಡರೇಶನ್(IUSF) ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಬೀದಿಗಿಳಿದು ಶ್ರೀಲಂಕಾ ಪೊದುಜನ ಪೆರಮುನಾ ಸಂಸದರ ಮೇಲೆ ಹಲ್ಲೆ ನಡೆಸಿದರು. ಕೆಲವು ಶ್ರೀಲಂಕಾ ಪೊದುಜನ ಪೆರಮುನ(SLPP) ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಡೈಲಿ ಮಿರರ್ ವರದಿ ಮಾಡಿದೆ.

ವೀರಕೇಟಿಯ ಪ್ರಾಂತೀಯ ಸಭೆಯ ಅಧ್ಯಕ್ಷರ ನಿವಾಸದಲ್ಲಿ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಸರ್ವಪಕ್ಷಗಳ ಮಧ್ಯಂತರ ಸರ್ಕಾರವನ್ನು ರಚಿಸಲು ಪ್ರಧಾನಿಯವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ ನಂತರವೂ ಬೆಳವಣಿಗೆಗಳು ಬಂದಿವೆ.

ದ್ವೀಪ ರಾಷ್ಟ್ರದಲ್ಲಿ ಕರ್ಫ್ಯೂ ಇದ್ದರೂ ಶಾಂತತೆಯನ್ನು ಕಾಪಾಡಿಕೊಳ್ಳಲು ಸೇನೆಯನ್ನು ರಸ್ತೆಗಳಲ್ಲಿ ನಿಯೋಜಿಸಲಾಗಿದೆ ಎಂದು ಡೈಲಿ ಮಿರರ್ ವರದಿ ಮಾಡಿದೆ. ಕಳೆದ ಕೆಲವು ದಿನಗಳಿಂದ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಪ್ರತಿಭಟನಾ ಸ್ಥಳಗಳಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳೊಂದಿಗೆ ಘರ್ಷಣೆಯ ಘಟನೆಗಳು ಹೆಚ್ಚಾಗುತ್ತಿವೆ.

Sri Lankan PM Mahinda Rajapaksa’s residence set on fire