ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ (Congress Party) ಟಿಕೆಟ್ ಬೇಕಾದವರು ಅರ್ಜಿ ಸಲ್ಲಿಸಬಹುದು, ಪಕ್ಷಕ್ಕೆ ಬರುವವರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮುಕ್ತ ಆಹ್ವಾನ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ (Congress) ನಿಂದ ವಲಸೆ ಹೋದವರಿಗೂ ಮುಕ್ತ ಆಹ್ವಾನ ಇದೆ. ನಾನು ಇದನ್ನು ಪಕ್ಷದ ಅಧ್ಯಕ್ಷನಾಗಿ ಮಾತನಾಡ್ತಿದ್ದೇನೆ. ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು, ಅರ್ಜಿ ಹಾಕುವವರಿಗೆ ಮುಕ್ತ ಅವಕಾಶವಿದೆ. ಯಾರು ಬೇಕಾದ್ರೂ ಬರಲಿ ನೋ ಪ್ರಾಬ್ಲಂ. ಮೊದಲು ಅವರು ಅರ್ಜಿ ಹಾಕಲಿ, ಆಮೇಲೆ ನಮ್ಮ ಕಮಿಟಿ ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ

ಶೀಘ್ರವೇ ಆನ್‌ಲೈನ್ ಸದಸ್ಯತ್ವ ಆರಂಭ: ಕಾಂಗ್ರೆಸ್ (Congress) ಸದಸ್ಯತ್ವ ಪ್ರಾರಂಭಕ್ಕೆ ಒತ್ತಾಯ ಬರುತ್ತಿದ್ದು, ಶೀಘ್ರವೇ ಆನ್‌ಲೈನ್ ಸದಸ್ಯತ್ವ ನೋಂದಣಿ ಪ್ರಾರಂಭಿಸಲಾಗುವುದು. ಕೆಲವು ನಾಯಕರು ಸೇರ್ಪಡೆಗೆ ಬಂದಿದ್ದಾರೆ, ಅವರ ಹೆಸರನ್ನು ಈಗಲೇ ನಾನು ಬಹಿರಂಗಪಡಿಸುವುದಿಲ್ಲ. ಒಟ್ಟಿನಲ್ಲಿ ಖರ್ಗೆ (Mallikarjun Kharge) ನಾಯಕತ್ವದಲ್ಲಿ ಯಾರು ಬೇಕಾದರು ಬರಬಹುದು. ಎಲ್ಲರಿಗೂ ಪಕ್ಷಕ್ಕೆ ಸ್ವಾಗತವಿದೆ ಎಂದು ಹೇಳಿದ್ದಾರೆ.

ಈ ಬಾರಿಯ ಎಲೆಕ್ಷನ್ (Election) ಗೆಲ್ಲಲೇಬೇಕೆಂದು ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದೆ. ಇತರೆ ಪಕ್ಷಗಳ ನಾಯಕರಿಗೆ ಕೆಂಪು ಹಾಸು ಹಾಸಿದೆ. ಅಂದ ಹಾಗೇ, ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ (BJP) ಸೇರಿದ್ದವರನ್ನು ಮತ್ತೆಂದು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಹಿಂದೆ ಗುಡುಗಿದ್ರು. ಆದ್ರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಇಂದಿನ ಮಾತು ಇದಕ್ಕೆ ವ್ಯತಿರಕ್ತವಾಗಿದೆ. ಈಗ ಸಿದ್ದರಾಮಯ್ಯ (Siddaramaiah) ಏನಂತಾರೋ ಕಾದುನೋಡಬೇಕಿದೆ.

There is also an open invitation to those who have migrated.