ಕನಕಪುರ: ಕಾಂಗ್ರೆಸ್‌ ಪಕ್ಷದ ಅಗ್ರಗಣ್ಯ ನಾಯಕರ ಕ್ಷೇತ್ರಗಳಾದ ರಾಯಬರೇಲಿ, ಅಮೇಥಿಯನ್ನೇ ಬಿಟ್ಟಿಲ್ಲ. ಇನ್ನೂ ಕನಕಪುರ ಕ್ಷೇತ್ರವನ್ನು ಬಿಡಲು ಸಾಧ್ಯವೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುದ್ದಿಗಾರರ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು.

ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ್‌ ಪರ ಚುನಾವಣಾ ಪ್ರಚಾರದ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತನಾಡಿದ ಅವರು, ಕನಕಪುರ ಕ್ಷೇತ್ರಕ್ಕೆ ತಡವಾಗಿ ಬಂದಿದ್ದರೂ ಕ್ಷೇತ್ರದ ಜನ ನೀಡುತ್ತಿರುವ ಅಭೂತಪೂರ್ವ ಸ್ವಾಗತ ನಮ್ಮ ಆತ್ಮ ವಿಶ್ವಾಸ ಹೆಚ್ಚಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಜನರ ವಿಶ್ವಾಸ ಗಳಿಸಿ ಗೆಲುವನ್ನು ಸಾಧಿಸಬೇಕೇ ಹೊರತು ಮತದಾರ ರಲ್ಲಿ ಭಯ ಹುಟ್ಟಿಸಿ ಗೆಲುವು ಸಾಧಿಸುವುದು ಗೆಲುವಲ್ಲ ಎಂದು ಡಿಕೆ ಸಹೋ​ದ​ರರ ವಿರುದ್ಧ ಅವರು ಪರೋ​ಕ್ಷ​ವಾಗಿ ವಾಗ್ದಾಳಿ ನಡೆ​ಸಿ​ದ​ರು. ಪ್ರಜಾಪ್ರಭುತ್ವದಲ್ಲಿ ಒಂದು ಪಕ್ಷ ಅಥವಾ ವ್ಯಕ್ತಿಯ ಭದ್ರಕೋಟೆ ಎಂಬುದು ಇರುವು​ದಿಲ್ಲ. ಜನರನ್ನು ಭಯದಲ್ಲಿಟ್ಟು ಚುನಾವಣೆಯಲ್ಲಿ ಗೆಲುವು ಸಾ​ಧಿಸುವುದು ಭದ್ರಕೋಟೆಯಾ ಗಲಾರದು ಎಂದರು.

ಯೋಗ್ಯರಿಗೆ ನಿಮ್ಮ ಮತ ನೀಡಿ: ಕೃಷಿ ಚಟುವಟಿಕೆಗೆ ರೈತರ ಬ್ಯಾಂಕ್‌ ಖಾತೆಗೆ ವರ್ಷಕ್ಕೆ 10 ಸಾವಿರ ರು. ಮತ್ತು ಹೈನುಗಾರಿಕೆಗೆ ಉತ್ತೇಜನ ನೀಡಲು ರೈತರು ಉತ್ಪಾದಿಸುವ ಹಾಲಿಗೆ ಪ್ರೋತ್ಸಾಹದ ಹಣ ನೀಡುತ್ತಿರುವುದು ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಾಲೂಕಿನ ದೊಡ್ಡಬಾಲ ಗ್ರಾಪಂ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸುಧಾ ಶಿವರಾಮೇಗೌಡ ಪರ ನಡೆಸಿದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ವರಿಷ್ಠ ದೊಡ್ಡಗೌಡರು ಪ್ರಧಾನಿಯಾಗಿದ್ದು ನಮ್ಮ ನಾಡಿನ ಹೆಮ್ಮೆ.

ಅವರೊಬ್ಬ ರೈತ ಮತ್ತು ಮಣ್ಣಿನ ಮಗನೂ ಹೌದು. ಆದರೆ, ದೇಶದ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಬರಬೇಕಾಯಿತು ಎಂದು ಪರೋಕ್ಷವಾಗಿ ಎಚ್ಡಿಡಿ ಅವರನ್ನು ಕುಟುಕಿದರು. ಕೋವಿಡ್‌ ವೇಳೆ ಅಮೆರಿಕಾದಂತಹ ದೇಶವೇ ಲಸಿಕೆಗೆ ಹಣ ಪಡೆದು ಲಸಿಕೆ ನೀಡಿದರೆ, ನಮ್ಮ ದೇಶದಲ್ಲಿ ಉಚಿತವಾಗಿ ಲಸಿಕೆ ಹಾಕಲಾಗಿದೆ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ನಾವು ಬದುಕಿದ್ದೇವೆಂದರೆ ಪುಣ್ಯಾತ್ಮ ನರೇಂದ್ರ ಮೋದಿಯ ಶ್ರಮದಿಂದ. ಬಿಜೆಪಿ ಸರ್ಕಾರದಿಂದ ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಕೆಲಸ ಮಾಡಲಾಗಿದ್ದು, ದಲಿತರಿಗೆ ಉಚಿತವಾಗಿ ವಿದ್ಯುತ್‌ ನೀಡಲಾಗುತ್ತಿದೆ ಎಂದರು.

ಒಂದು ಬಾರಿ ತಿನ್ನುವ ಹಣ್ಣನ್ನೆ ಅಳೆದು ತೂಗಿ ಒಳ್ಳೆಯ ಹಣ್ಣನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆಂದರೆ ಇನ್ನು 5 ವರ್ಷ ನಮ್ಮನ್ನು ಹಾಗೂ ನಮ್ಮ ತಾಲೂಕನ್ನು ಮುನ್ನಡೆಸುವ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುವ ಅಭ್ಯರ್ಥಿಯನ್ನು ಅಳೆದು ತೂಗಿ ಯಾರೂ ಯೋಗ್ಯರು ಎಂಬುದನ್ನು ಅವಲೋಕಿಸಿ ಆಯ್ಕೆ ಮಾಡಿ ಮತನೀಡಬೇಕಿದೆ ಎಂದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳನ್ನು ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿಯ ಜೊತೆ ತಕ್ಕಡಿಗೆ ಹಾಕಿ ತೂಗಿ ನೋಡಿದರೆ ಯಾರು ಉತ್ತಮರೆಂದು ನಿಮಗೆ ತಿಳಿಯುತ್ತದೆ. ನಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಸುಧಾ ಶಿವರಾಮೇಗೌಡಗೆ ಮತ ಕೊಟ್ಟು ಶಾಸಕರನ್ನಾಗಿ ಆಯ್ಕೆ ಮಾಡಿ ಎಂದು ಮನವಿಮಾಡಿದರು.

ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಮೂಡಲಬಾಗಿಲ ಆಂಜನೇಯಸ್ವಾಮಿ ದೇವಾಲಯವನ್ನು ಜಾಮೀಯ ಮಸೀದಿಯನ್ನಾಗಿಸಿ ಟಿಪ್ಪು ಸುಲ್ತಾನ್‌ ಪರಿವರ್ತನೆಗೊಳಿಸಿದ್ದಾನೆ. ಆ ದೇವಾಲಯವನ್ನು ಮತ್ತೆ ಪುನರ್ನಿರ್ಮಿಸಲು ಹಾಗೂ ಹನುಮನಿಗೆ ನ್ಯಾಯ ಕೊಡಿಸಲು ಜಿಲ್ಲೆಯ 7 ಕ್ಷೇತ್ರಗಳಲ್ಲಿಯೂ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದರು. ಹಿಂದುತ್ವಕ್ಕಾಗಿ ಬಿಜೆಪಿ ರಾಜಕಾರಣ ಮಾಡುತ್ತಿದೆಯೇ ಹೊರತು ಕುಟುಂಬವನ್ನು ಉದ್ಧಾರ ಮಾಡುವುದಕ್ಕಲ್ಲ. ಕನಕದಾಸರು, ಬಸವಣ್ಣ, ಕೆಂಪೇಗೌಡರು, ನಾಲ್ವಡಿ ಕೃಷ್ಣರಾಜ ಒಡೆಯರ್‌, ಕುವೆಂಪು ಹಾಗೂ ವಿಶ್ವೇಶ್ವರಯ್ಯರನ್ನು ಬಿಟ್ಟು ಹಿಂದುತ್ವವಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯವಾಗಿದೆ ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ರಾಮನಿಗೆ ನ್ಯಾಯ ಕೊಟ್ಟಿದ್ದೇವೆ. ಅಂತೆಯೇ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮಮಂದಿರ ನಿರ್ಮಿಸಿ ಹನುಮನಿಗೂ ನ್ಯಾಯ ಕೊಡಿಸಬೇಕಿದೆ. ಅದಕ್ಕೆ ಪೂರಕವಾಗಿ ಜಿಲ್ಲೆಯ ಜನರು ಬಿಜೆಪಿ ಪಕ್ಷಕ್ಕೆ ಮತನೀಡುವ ಮೂಲಕ ಹೆಚ್ಚು ಶಕ್ತಿ ಕೊಡಬೇಕು ಎಂದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

CT Ravi’s rant against DK brothers