ಚಿಕ್ಕಮಗಳೂರು: ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹೋರಾಟ ರೂಪಿಸಬೇಕೆಂದು ದಸಂಸ ರಾಜ್ಯ ಸಮಿತಿ ಸದಸ್ಯ ಕೆ.ಸಿ ವಸಂತ ಕುಮಾರ್ ಕರೆ ನೀಡಿದರು.

ಅವರು ಇಂದು ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ಪುನರ್ ರಚಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ನಿವೇಶನ ರಹಿತರು, ಗುಡಿಸಿಲಿನಲ್ಲಿ ವಾಸ ಮಾಡುವಂತಹ ಜನರ ಬಗ್ಗೆ ಸರ್ಕಾರದ ಕಣ್ಣು ತೆರೆಸಲು ಹೋರಾಟ ಅನಿವಾರ್ಯವಾಗಿದೆ. ಒಂದು ವರ್ಷವಾದರೂ ಪೌತಿ ಖಾತಿ ಮಾಡಿಲ್ಲ, ವಿಳಂಭ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಶೀಘ್ರ ಖಾತೆ ಬದಲಾವಣೆ ಮಾಡಿಕೊಡುವಂತೆ ಒತ್ತಾಯಿಸಿದರು.

ರಾಜ್ಯದಲ್ಲಿ ಕಾಂತರಾಜ್ ವರದಿ, ಒಳ ಮೀಸಲಾತಿ ಜಾರಿ ಮಾಡಲು ಆಗ್ರಹಿಸಿ ಹತ್ತಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಇದು ಜಾರಿಯಾಗಿಲ್ಲ. ಈಗ ಬೇರೆ ಬೇರೆ ಜನಾಂಗದವರಿಂದ ಅಪಸ್ವರ ಎದ್ದಿದೆ ಎಂದರು.

ಎಸ್.ಸಿ, ಎಸ್‌ಟಿ ಜನರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗನುಗುಣವಾಗಿ ಸರ್ಕಾರ ಕೂಡಲೇ ಕಾಂತರಾಜು ವರದಿಯನ್ನು ಜಾರಿ ಮಾಡಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ತಾಲೂಕು ಸಂಚಾಲಕರಾಗಿ ವನೀತ್ ಅವರನ್ನು ಆಯ್ಕೆಮಾಡಲಾಗಿದೆ, ಸಂಘಟನಾ ಸಂಚಾಲಕರಾಗಿ ಸುರೇಶ್ ಸಾದರಹಳ್ಳಿ, ರಂಗಯ್ಯ ಕೋಡಿಹಳ್ಳಿ, ಉಮೇಶ್ ಕೆಂಪನಹಳ್ಳಿ, ಅಣ್ಣಯ್ಯ ಬಸವನಹಳ್ಳಿ, ಸೋಮಶೇಖರ ಚಿತ್ತವಳ್ಳಿ, ಕಾಂತರಾಜ್ ಅಲ್ಲಂಪುರ, ಯೋಗೀಶ್ ಮಲ್ಲೇದೇವರಹಳ್ಳಿ, ಹಾಲಪ್ಪ ಆರದವಳ್ಳಿ ಇವರುಗಳನ್ನು ಆಯ್ಕೆಮಾಡಲಾಗಿದೆ ಎಂದರು.

ಖಜಾಂಚಿಯಾಗಿ ರಾಹುಲ್ ಕಲ್ದೊಡ್ಡಿ, ತಾಲೂಕು ಸಮಿತಿ ಸದಸ್ಯರುಗಳಾಗಿ ದಿನೇಶ್ ಕರ್ಕಿಪೇಟೆ, ಜವರಯ್ಯ, ಮುಳ್ಳಯ್ಯ, ಭದ್ರಯ್ಯ ಕೆಂಪನಳ್ಳಿ ಇವರುಗಳನ್ನು ಆಯ್ಕೆಮಾಡಲಾಗಿದೆ ಎಂದರು.

ಜಿಲ್ಲಾ ಸಂಚಾಲಕ ಬಿ.ಎನ್ ಚೌಡಪ್ಪ ಮಾತನಾಡಿ ಜಿಲ್ಲೆಯಲ್ಲಿ ನಿವೇಶನ ರಹಿತರನ್ನು ಗುರ್ತಿಸಿ ನಿವೇಶನ ಒದಗಿಸಬೇಕು ಹಾಗೂ ಫಾರಂ ನಂ ೫೦, ೫೨, ೫೭ ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಕೂಡಲೇ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಚೌಡಪ್ಪ, ಜಯರಾಮಯ್ಯ, ಕೆಂಚಪ್ಪ, ಶಂಕರ್, ಇಲಿಯಾಜ್ ಅಹಮದ್, ರಂಗಮ್ಮ ಇದ್ದರು.

Dasamsa demands to address the problems of scheduled castes