ಚಿಕ್ಕಮಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಸರ್ವರೂ ಒಪ್ಪುವ, ಯಾವುದೇ ಕಳಂಕ ಇಲ್ಲದ ಸಜ್ಜನರು. ಅವರ ಗೆಲುವಿಗೆ ಎಲ್ಲರೂ ಸ್ವಯಂಪ್ರೇರಿತವಾಗಿ ಶ್ರಮಿಸಬೇಕು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಎಂದು ಕರೆ ನೀಡಿದರು.

ಗುರುವಾರ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಣಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಇಡೀ ದೇಶದ ೧೪೦ ಕೋಟಿ ಜನರು ನನ್ನ ಪರಿವಾರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೊಂಡಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸರಳ, ಸಜ್ಜನರಾದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಕಳಿಸಬೇಕು ಎಂದು ಕರೆ ನೀಡಿದರು.

ಮುಂದಿನ ಪ್ರಧಾನಿ ಯಾರು ಎನ್ನುವುದೇ ಗೊತ್ತಿಲ್ಲದ ಸ್ಥಿತಿ ಕಾಂಗ್ರೆಸ್‌ನದ್ದು, ಆದರೆ ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎನ್ನುವುದು ಹಾಗೂ ನಮ್ಮ ಕ್ಷೇತ್ರದ ಅಭ್ಯರ್ಥಿ ಸಜ್ಜನರು ಎನ್ನುವುದು ಎರಡೂ ಸ್ಪಷ್ಟತೆ ಇದೆ ಎಂದರು.

ಎಲ್ಲಾ ರೀತಿಯಲ್ಲಿ ಸಕಾರಾತ್ಮಕ ಅಂಶಗಳನ್ನುಹೊಂದಿದ್ದೇವೆ. ಇದೆಲ್ಲವನ್ನೂ ಬೂತ್ ಮಟ್ಟಕ್ಕೆ ಕೊಂಡೊಯ್ಯಬೇಕಿದೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಬೂತ್‌ನಲ್ಲಿ ಮುನ್ನಡೆ ನೀಡಿದರೆ ನಾವೇ ನಾಯಕರು ಎನ್ನುವುದನ್ನು ಅರಿತು ಕೆಲಸ ಮಾಡಬೇಕು ಎಂದು ತಿಳಿಸಿದರು.

ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ ಇದು ದೇಶದ ಚುನಾವಣೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ತಂಡವಾಗಿ ಎಲ್ಲರೂ ಕೆಲಸ ಮಾಡಬೇಕು. ನಮ್ಮ ಪ್ರಧಾನಿ ಯಾವುದೇ ಕುಟುಂಬ ರಾಜಕಾರಣದ ಹಿನ್ನೆಲೆ ಇಲ್ಲದೆ ಸಾಮಾನ್ಯ ಕುಟುಂಬದಿಂದ ಬಂದವರು ಅವರನ್ನು ನೋಡಿದ ಮೇಲೆ ನಮಗೂ ಆತ್ಮ ವಿಶ್ವಾಸ ಬರಲೇ ಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಓರ್ವ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ ಸರಳ, ಸಜ್ಜನ. ಅವರನ್ನು ಪಕ್ಷ ಎಂಎಲ್‌ಸಿ ಮಾಡಿ ಮೂರು ಬಾರಿ ಸಚಿವರನ್ನಾಗಿ ಮಾಡಿ, ಎರಡು ಬಾರಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದೆ. ಸಿ.ಟಿ.ರವಿ ಅವರು ಸಹ ಇದೇ ರೀತಿ ಎರಡು ಬಾರಿ ಸಚಿವರಾಗಿ ರಾಷ್ಟ್ರಮಟ್ಟಕ್ಕೆ ಬೆಳೆದವರು. ಬೇರೆ ಯಾವುದಾದರೂ ಪಕ್ಷದಲ್ಲಿ ಇದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.

ಜಯಪ್ರಕಾಶ್ ಹೆಗ್ಡೆ ಅವರು ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ ವ್ಯಕ್ತಿ. ಜೆಡಿಎಸ್‌ನಲ್ಲಿ ಮಂತ್ರಿ ಆದರು ಪಕ್ಷ ಬಿಟ್ಟು ಹೋದರು. ಕಾಂಗ್ರೆಸ್‌ನಲ್ಲಿ ಲೋಕಸಭೆ ಸದಸ್ಯರಾಗಿ ಆ ಪಕ್ಷವನ್ನೂ ತೊರೆದರು. ಬಿಜೆಪಿ ಸಹ ಅವರನ್ನು ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನ ನೀಡಿ ಆಯೋಗದ ಅಧ್ಯಕ್ಷರನ್ನಾಗಿ ಮಾಡಿತ್ತು. ಅದನ್ನೂ ಸಹ ಸ್ವಾರ್ಥಕ್ಕಾಗಿ ತೊರೆದು ಹೋಗಿದ್ದಾರೆ. ಇದನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ನಮ್ಮ ಮುಂದೆ ದೊಡ್ಡ ಗುರಿ ಇದೆ. ಇನ್ನು ೩೫ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಆದ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿ ನಮ್ಮ ಅಭ್ಯರ್ಥಿಯನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಬಿಜೆಪಿ ಕಾರ್ಯಕರ್ತರು ಕೇವಲ ಲೆಟರ್ ಪ್ಯಾಡ್, ವಿಸಿಂಟಿಂಗ್ ಕಾರ್ಡ್‌ಗಾಗಿ ಪಕ್ಷದಲ್ಲಿ ಗುರುತಿಸಿಕೊಂಡವರಲ್ಲ. ಭಾರತ ನಂಬರ್ ಒನ್ ಆಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವಲ್ಲಿ ಎಲ್ಲರೂ ಶ್ರಮಿಸುತ್ತಾರೆ ಎಂದರು.

ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರೂ, ಜಿಲ್ಲಾ ಉಸ್ತುವಾರಿ ಆಗಿರುವ ಅಶ್ವಿತ್ ಮಾತನಾಡಿ, ಜಿಲ್ಲೆಯ ಯುವ ಮೋರ್ಚಾ ಕಾರ್ಯಕರ್ತರು ಸಮಯ ಪಾಲನೆ, ಶಿಸ್ತಿಗೆ ಹೆಸರಾದವರು. ಈ ಪರಂಪರೆ ಮುಂದುವರಿಯಬೇಕು. ಇಲ್ಲಿನ ಸಂಘಟನಾ ಶಕ್ತಿಯನ್ನು ನೋಡಿದರೆ ಇತರೆ ಜಿಲ್ಲೆಯವರಿಗೂ ಸ್ಪೂರ್ತಿ ಬರುತ್ತದೆ ಎಂದರು.

ಸಭೆಯಲ್ಲಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಸಚಿನ್‌ಗೌಡ, ಶರತ್ ನಿಲುವಾಗಿಲು ಇತರರು ಇದ್ದರು.

District Yuva Morcha function held at district BJP office Panchajanya