ಚಿಕ್ಕಮಗಳೂರು: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ನಮ್ಮ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ಮೂಡಿಸಿದೆ, ಫಲಿತಾಂಶದಿಂದ ಮೈಮರೆಯುವಂತಿಲ್ಲ. ಪ್ರತಿ ಚುನಾವಣೆಯನ್ನೂ ರಾಜಕೀಯ ಕಾರ್ಯಕರ್ತರು ಯುದ್ಧದ ರೀತಿಯೇ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಬಿಜೆಪಿ ಮುಖಂಡ ಸಿ.ಟಿ.ರವಿ ತಿಳಿಸಿದರು.

ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ನರೇಂದ್ರ ಮೋದಿ ಅವರು ತುಂಬಾ ಎತ್ತರದ, ಜಗತ್ತು ಗೌರವಿಸುವ ನಾಯಕರು. ಅವರ ಪ್ರಭಾವ ಎಲ್ಲಾ ಚುನಾವಣೆಯಲ್ಲೂ ಮತದಾರರ ಮೇಲೆ ಇದ್ದೇ ಇದೆ. ಈ ಬಾರಿಯೂ ಬೂತ್ ಮಟ್ಟದ ಎಲ್ಲಾ ಕಾರ್ಯಕರ್ತರ ಪರಿಶ್ರಮ ಮತ್ತು ಮೋದಿ ಅವರ ಪ್ರಭಾವ ಎರಡೂ ಗೆಲುವಿಗೆ ಕಾರಣವಾಗಿದೆ ಎಂದರು.

ತೆಲಂಗಾಣದಲ್ಲಿ ಗೆದ್ದಿರುವುದು ಕಾಂಗ್ರೆಸ್‌ಗೂ ಒಂದು ಸಂಜೀವಿನಿ. ಆದರೆ ಅಲ್ಲಿ ನಿಜವಾದ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದು ಬಿಜೆಪಿ. ಹೈದರಾಬಾದ್ ಕಾರ್ಪೊರೇಷನ್ ಚುನಾವಣೆ ಗೆಲುವಿನ ನಂತರ ಉಪ ಚುನಾವಣೆಗಳಲ್ಲಿ ಸತತವಾಗಿ ಬಿಜೆಪಿ ಗೆಲುವು ಸಾಧಿಸಿತ್ತು. ಆಗೆಲ್ಲ ಕಾಂಗ್ರೆಸ್ ಠೇವಣಿ ಕಳೆದುಕೊಂಡಿತ್ತು. ಆದರೆ ಏಕಾಏಕಿ ವಿಧಾನ ಸಭೆ ಚುನವಣೆಯಲ್ಲಿ ಗೆಲುವು ಸಿಕ್ಕಿತು. ಅಲ್ಲಿ ನಮ್ಮ ರಾಜ್ಯಾಧ್ಯಕ್ಷರನ್ನು ಬದಲಿಸಿದ್ದು, ಹಾಗೂ ಕರ್ನಾಟಕದ ಎಟಿಎಂ ತೆಲಂಗಾಣದಲ್ಲಿ ಕೆಲಸ ಮಾಡಿದ್ದು ಎಲ್ಲವೂ ಸೇರಿ ಕಾಂಗ್ರೆಸ್‌ಗೆ ಅನುಕೂಲವಾಯಿತು ಎಂದರು.

ಬಿಆರ್‌ಎಸ್‌ನ ಆಡಳಿತ ವಿರೋಧಿ ಅಲೆಯ ಮತಗಳನ್ನು ಸೆಳೆಯುವಲ್ಲಿ ನಾವು ವಿಫಲವಾದೆವು. ಆಂದ್ರದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದು ವೈಎಸ್‌ಆರ್ ಪಕ್ಷ. ಆದರೆ ಅದರ ಪ್ರಭಾವ ತೆಲಂಗಾಣದಲ್ಲಿ ಕೆಲಸ ಮಾಡಿದ ಪರಿಣಾಮ ಟಿಡಿಪಿ ಪೂರ್ತಿ ಕಾಂಗ್ರೆಸ್‌ಗೆ ಬೆಂಬಲವಾಗಿ ನಿಂತಿತು. ಅದರಲ ಲಾಭ ಕಾಂಗ್ರೆಸ್‌ಗೆ ಆಗಿದೆ ಎಂದು ವಿಶ್ಲೇಷಿಸಿದರು.

ಮಧ್ಯ ಪ್ರದೇಶದಲ್ಲಿ ೪೮ ವಿಧಾನ ಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಾನು ಚುನಾವಣಾ ಕೆಲಸ ಮಾಡಿದ್ದೆ. ಅಲ್ಲಿ ೩೧ ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಒಳ್ಳೆಯ ಫಲಿತಾಂಶ ಬಂದಿದೆ ಎಂದರು. ಪ್ರತಿ ಚುನಾವಣೆಗೂ ಭಿನ್ನ ವಿಚಾರಗಳು ಪ್ರಭಾವ ಬೀರುತ್ತವೆ. ಲೋಕಸಭೆ ಮತ್ತು ವಿಧಾನ ಸಭೆಗೆ ಹೀಗೆ ಆಗುತ್ತದೆ ಎಂದು ಹೇಳಲಾಗದು.

ಈ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ೨೦೧೮ ರ ವಿಧಾನ ಸಭೆ ಚುನಾವಣೆಯಲ್ಲಿ ಈ ಎಲ್ಲಾ ರಾಜ್ಯಗಳಲ್ಲಿ ನಾವು ಅಧಿಕಾರ ಕಳೆದುಕೊಂಡಿದ್ದೆವು. ಆದರೆ ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಆ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆದ್ದಿತ್ತು ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಘೋಷಣೆ ಮಾಡಿ ಮನೆ ಮನೆಗೆ ಕಾರ್ಡ್‌ಗಳನ್ನು ಕೊಟ್ಟಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕಿತ್ತು. ಒಳ ಮೀಸಲಾತಿ ಕೊಟ್ಟಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ಸೋತೆವು. ಅದರಿಂದ ೩೨ ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಪರಿಣಾಮ ಆಯಿತು ಎಂದು ಹೇಳಿದರು.

Former minister BJP leader CT Ravi