ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದಿದ್ದರೆ ಗ್ಯಾರಂಟಿ ಯೋಜನೆಗಳಿಗೆ ಕುತ್ತು ಬರಬಹುದಾಗಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಬೆಂಬಲಿಸಿ ಮತ ನೀಡುವಂತೆ ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ ಮೊಸಸ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಹೆಚ್. ಡಿ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಸಿ.ಟಿ ರವಿ ಅವರುಗಳು ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದು ಇದರಲ್ಲಿ ಯಾವುದೋ ಕುತಂತ್ರ ಇರಬಹುದು. ಈ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಸ್ಥಿರವಾಗಿ ಇರಬೇಕಾದರೆ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವ ಮುಖಾಂತರ ತಮ್ಮ ಗ್ಯಾರಂಟಿ ಯೋಜನೆಗಳನ್ನು ಉಳಿಸಿಕೊಳ್ಳಬೇಕೆಂದು ತಿಳಿಸಿದರು.

ಡಿ.ಕೆ ಶಿವಕುಮಾರ್ ಅವರ ಬಗ್ಗೆ ಟೀಕೆ ಮಾಡಿರುವ ಸಿ.ಟಿ ರವಿ ಅವರು ದತ್ತ ಜಯಂತಿ ಹೆಸರಿನಲ್ಲಿ ಸೀರೆ ಹಂಚಿದ್ದನ್ನು ಮರೆತಿದ್ದೀರೆಂದು ಟೀಕಿಸಿದ ರೂಬಿನ್ ಮೊಸಸ್ ಅವರು ಬಿಜೆಪಿ ಪ್ರಾಣಿಗಳ ಪಕ್ಷವೆಂದು ಅವರೇ ಒಪ್ಪಿಕೊಂಡಿದ್ದಾರೆ ಕಾಂಗ್ರೆಸ್‌ನವರು ಎಲ್ಲರನ್ನು ಮನುಷ್ಯರಂತೆ ಕಾಣುತ್ತಾರೆ ಮೋದಿಯವರು ನಕಲಿ ಸಿಂಹ ಎಂದು ವ್ಯಂಗ್ಯವಾಡಿದರು.

ಅಜಾದ್ ಪಾರ್ಕ್ ಬಳಿ ಇದ್ದ ಮೇಡಿನ್ ಇಂಡಿಯಾ ಲಾಂಛನ ಮತ್ತು ಬಸವನಹಳ್ಳಿ ಕೆರೆ ನಡುಗಡ್ಡೆಯಲ್ಲಿ ನಿರ್ಮಿಸಿದ್ದ ವಿವೇಕಾನಂದರ ಪ್ರತಿಮೆ ಕಾಣೆಯಾಗಿ ಕಳಪೆ ಕಾಮಗಾರಿ ಬಗ್ಗೆ ಮಾತನಾಡಿರುವ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡರ ಮೇಲೆ ಆರೋಪ ಮಾಡಿರುವುದು ಸರಿಯಲ್ಲ ಗಾಯಿತ್ರಿ ಶಾಂತೇಗೌಡರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಪಕ್ಷಬೇಧ ಮರೆತು ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳ ಕುರಿತಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಪಕ್ಷ ಖಂಡಿಸಿದ್ದು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ತಿಳಿಸಿದ ಅವರು ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾರಕವಲ್ಲ ಬಿಜೆಪಿಗೆ ಮಾರಕವಾಗಿದ್ದು ಅದನ್ನು ಸಹಿಸಿಕೊಳ್ಳಲಾಗದೆ ಗ್ಯಾರಂಟಿ ಯೋಜನೆಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಟೀಕಿಸಿದರು.

ಶಾಸಕ ಹೆಚ್.ಡಿ ತಮ್ಮಯ್ಯ ಅವರು ಆಯ್ಕೆಯಾದ ೧೦ ತಿಂಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಚುನಾವಣೆ ನಂತರ ಅಂಕಿ ಅಂಶಗಳ ಮೂಲಕ ಉತ್ತರ ನೀಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ತನೂಜ್‌ನಾಯ್ಡು, ಜಯಣ್ಣ, ಪ್ರಸಾದ್, ಅಮೀನ್, ಗುಣವತಿ, ಪ್ರಕಾಶ್ ರೈ, ರಾಜು ಉಪಸ್ಥಿತರಿದ್ದರು

If you don’t vote for the Congress party you will get guaranteed schemes