ಬೆಂಗಳೂರು:  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೆಹಲಿಯಿಂದ ಹಿಂತಿರುಗಿದ ಬೆನ್ನಲ್ಲೇ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ದಂಡೇ ಅವರನ್ನು ಭೇಟಿಯಾಗಿ ತಮಗೆ ಟಿಕೆಟ್‌ ನೀಡುವಂತೆ ಖುದ್ದು ಹಾಗೂ ತಮ್ಮ ಸಮುದಾಯದ ಸ್ವಾಮೀಜಿಗಳು, ಬೆಂಬಲಿತ ಮುಖಂಡರ ಮೂಲಕ ಒತ್ತಡ ಹಾಕುತ್ತಿದ್ದಾರೆ.

ಕಾಂಗ್ರೆಸ್‌ ಈಗಾಗಲೇ ಎರಡು ಹಂತದಲ್ಲಿ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಪ್ರಕಟವಾಗದ ಹಾಲಿ ಶಾಸಕರು ಆತಂಕಗೊಂಡಿದ್ದಾರೆ. ಈ ಪೈಕಿ ಲಿಂಗಸುಗೂರು ಹಾಲಿ ಶಾಸಕ ಡಿ.ಎಸ್‌.ಹೂಲಗೇರಿ, ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಹರಿಹರ ಶಾಸಕ ರಾಮಪ್ಪ ಅವರು ಶುಕ್ರವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಗೆ ಟಿಕೆಟ್‌ ಖಚಿತವಾಗದಿರುವ ಬಗ್ಗೆ ಚರ್ಚಿಸಿ ಮೂರನೇ ಪಟ್ಟಿಯಲ್ಲಾದರೂ ತಮ್ಮ ಹೆಸರು ಪ್ರಕಟಿಸಲು ಮನವಿ ಮಾಡಿದರು. ಈ ಮಧ್ಯೆ, ಹೂಲಗೇರಿ ಹಾಗೂ ಅಖಂಡ ಶ್ರೀನಿವಾಸ ಮೂರ್ತಿ ಪರವಾಗಿ ಅವರ ಸಮುದಾಯದ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಸಮುದಾಯದ ಹಾಲಿ ಶಾಸಕರು ಹಾಗೂ ಕೆಲ ಹೊಸ ಮುಖಗಳಿಗೆ ಸೇರಿ 7 ಕ್ಷೇತ್ರಗಳ ಟಿಕೆಟ್‌ ನೀಡುವಂತೆ ಮನವಿ ಮಾಡಿದರು.

ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿ ಗಂಗಾಬಿಕೆ ಮಲ್ಲಿಕಾರ್ಜುನ್‌ ಅವರ ಪರವಾಗಿ ಲಿಂಗಾಯತ ಸಮುದಾಯದ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ಕ್ಷೇತ್ರದಲ್ಲಿ ನಡೆಸಿದ ಬಹುತೇಕ ಸರ್ವೆಗಳಲ್ಲಿ ಗಂಗಾಂಬಿಕೆ ಅವರಿಗೆ ಟಿಕೆಟ್‌ ನೀಡಿದರೆ ಪಕ್ಷ ಗೆಲ್ಲುವ ವರದಿ ಬಂದಿದೆ. ಜತೆಗೆ ಅವರಿಗೆ ಟಿಕೆಟ್‌ ನೀಡುವ ಮೂಲಕ ಬೆಂಗಳೂರಿನಲ್ಲಿ ಲಿಂಗಾಯತ ಸಮುದಾಯ ಹಾಗೂ ಮಹಿಳಾ ಪ್ರಾತಿನಿಧ್ಯವನ್ನೂ ನೀಡಿದಂತಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸಿದ್ದರಾಮಯ್ಯ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನು, ಯಶವಂತಪುರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಟಿ ಭಾವನಾ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಗೆ ಟಿಕೆಟ್‌ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ನಿಮಗೆ ಬೇರೆ ಅವಕಾಶಗಳನ್ನು ನೀಡೋಣ ಎಂದು ಹೇಳಿ ಸಮಾಧಾನಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು: ಶಿಕಾರಿಪುರ ಕ್ಷೇತ್ರದಲ್ಲಿ ಬಿ.ವೈ. ವಿಜಯೇಂದ್ರ ವಿರುದ್ಧ ಕಾಂಗ್ರೆಸ್‌ನಿಂದ ಪ್ರಬಲ ಸ್ಪರ್ಧೆ ನೀಡಬಲ್ಲ ನಾಗರಾಜ್‌ ಗೌಡ ಅವರಿಗೆ ಪಕ್ಷದ ಟಿಕೆಟ್‌ ನೀಡಬೇಕೆಂದು ಕ್ಷೇತ್ರದ ಹಲವು ಕಾರ್ಯಕರ್ತರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಆಗ್ರಹಿಸಿದ ಘಟನೆ ನಡೆಯಿತು. ವಿಜಯೇಂದ್ರ ವಿರುದ್ಧ ಪ್ರಬಲ ಸ್ಪರ್ಧಿ ಹಾಕದೆ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಜಮಾಯಿಸಿದ ನಾಗರಾಜ್‌ ಗೌಡ ಬೆಂಬಲಿಗರು. ಯಾವುದೇ ಕಾರಣಕ್ಕೂ ಗೋಣಿ ಮಹಾಂತೇಶ್‌ ಅವರಿಗೆ ಟಿಕೆಟ್‌ ನೀಡಬಾರದು. ಅವರನ್ನು ಅಭ್ಯರ್ಥಿಯಾಗಿಸಿ ವಿಜಯೇಂದ್ರ ಅವರನ್ನು ಗೆಲ್ಲಿಸಲು ಪಕ್ಷವೇ ದಾರಿ ಮಾಡಿಕೊಡಬಾರದು. ಅವರು ವಿಜಯೇಂದ್ರ ವಿರುದ್ಧ ಪ್ರಬಲ ಸ್ಪರ್ದಿಯಲ್ಲ. ಇನ್ನು ಎಷ್ಟುವರ್ಷ ಶಿಕಾರಿಪುರವನ್ನು ಯಡಿಯೂರಪ್ಪ ಅವರ ಕುಟುಂಬಕ್ಕೆ ಅಡ ಇಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿ ನಾಗರಾಜ್‌ಗೌಡ ಅವರಿಗೆ ಟಿಕೆಟ್‌ ನೀಡಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಎರಡೂ ಪಟ್ಟಿಗಳಲ್ಲಿ ಬೋವಿ ಸಮುದಾಯದ ಆಕಾಂಕ್ಷಿಗಳಿಗೆ ಟಿಕೆಟ್‌ ಖಾತರಿಯಾಗದಿರುವುದು ಆತಂಕ ತಂದಿದೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಳೆದ ಬಾರಿ ಕೊಟ್ಟಂತೆ ಈ ಬಾರಿಯು ಹಾಲಿ ಶಾಸಕರನ್ನೂ ಒಳಗೊಂಡು ನಮ್ಮ ಸಮುದಾಯದ 7 ಮಂದಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದೇವೆ. ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಪಾಲನೆ ಆಗುವ ಭರವಸೆ ಇನ್ನೂ ಇದೆ ಅಂತ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.  ಸಿದ್ದರಾಮಯ್ಯ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಶಾಸಕ ಜಮೀರ್‌ ಅಹಮದ್‌ ಅವರು ನನ್ನ ಬೆನ್ನಿಗಿದ್ದಾರೆ. ಮೂರನೇ ಪಟ್ಟಿಯಲ್ಲಿ ನನ್ನ ಹೆಸರು ಪ್ರಕಟವಾಗುವ ಮೂಲಕ ಟಿಕೆಟ್‌ ಖಚಿತವಾಗುವ ಭರವಸೆ ಇದೆ. ನಾನು ಯಾವುದೇ ಪಕ್ಷಾಂತರ ಮಾಡಲು ಯೋಚನೆ ಮಾಡಿಲ್ಲ. ಅವಕಾಶ ಸಿಗದಿದ್ದರೆ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುತ್ತೇನೆ ಅಂತ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.

Karnataka Assembly Elections 2023: