ಚಿಕ್ಕಮಗಳೂರು:  ತಾವು ಹಾಗೂ ತಮ್ಮ ಸರ್ಕಾರ ಪ್ರಮಾಣಿಕ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವಿಸುವುದಾದರೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಒತ್ತಾಯದಂತೆ ಅಜ್ಜಯ್ಯನವರ ಮಠದಲ್ಲಿ ಅವರು ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಅಜ್ಜಯ್ಯನ ಮಠದ ಬಗ್ಗೆ ಇರುವ ಭಕ್ತಿ, ನಂಬಿಕೆ ಸಲುವಾಗಿ ಗುತ್ತಿಗೆದಾರರು ಈ ಒತ್ತಾಯ ಮಾಡಿದ್ದಾರೆ. ತಾವೇನೂ ತಪ್ಪೇ ಮಾಡಿಲ್ಲ ಎಂದಾದರೆ ಡಿ.ಕೆ.ಶಿವಕುಮಾರ್ ಅಲ್ಲಿಗೆ ಹೋಗಿ ಪ್ರಮಾಣ ಮಾಡಿ ಸಾಬೀತು ಪಡಿಸಬಹುದಲ್ಲ ಎಂದರು.

ಗುತ್ತಿಗೆದಾರರ ಬಳಿ ನಾನೂ ಸಹ ಮಾಹಿತಿ ಪಡೆದಿದ್ದೇನೆ. ಮೊದಲು ಹಳೇ ಕಾಮಗಾರಿಗಳ ಬಿಲ್‌ ಶೇ.7 ರಷ್ಟು ಕಮಿಷನ್ ನಿಗದಿಪಡಿಸಿದ್ದರು. ನಾವು ಅದಕ್ಕೆ ಒಪ್ಪಿದೆವು. ನಂತರ ಮಧ್ಯವರ್ತಿಗಳು ಶೇ.10 ಕೊಡಬೇಕು ಎಂದರು. ಸ್ವಲ್ಪ ಚರ್ಚೆ ಮಾಡಿದೆವು. ಆದರೂ ಶೇ.15ರಷ್ಟಕ್ಕೆ ಆದರೆ ಮಾತ್ರ ಬಿಲ್ ನೀಡುವುದಾಗಿ ತಿಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ಎಂದರು. ಆರೋಪ ಸುಳ್ಳು ಎನ್ನುವುದಾದರೆ ಗುತ್ತಿಗೆದಾರರ ಸಂಘದವರು ಕೇಳಿದಂತೆ ಅಜ್ಜಯ್ಯನ ಮಠ(Ajjaiah mutt)ಕ್ಕೆ ಹೋಗಿ ಪ್ರಮಾಣ ಮಾಡುವ ಮೂಲಕ ಅದನ್ನು ಸಾಬೀತು ಪಡಿಸಲಿ. ಇದೇ ವೇಳೆ ಸತ್ಯ ಮಾಡುವಾಗ ನನ್ನ ಜೀವನದಲ್ಲೇ ಇನ್ನಾವ ಲಂಚವನ್ನೂ ಸ್ವೀಕರಿಸಿಲ್ಲ ಎಂದು ಮಾಡಿದರೆ ಅವರಿಗೆ ಇನ್ನಾವ ಸಾಕ್ಷ್ಯವೂ ಬೇಕಾಗುವುದಿಲ್ಲ ಎಂದು ಟೀಕಿಸಿದರು.

ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಬಹುತೇಕ ಕಾಂಗ್ರೆಸ್ ಶಾಸಕರು ಒಂದೇ ದಿನದಲ್ಲಿ ವಸೂಲಿಗೆ ಹೊರಟುಬಿಟ್ಟಿದ್ದಾರೆ  ಎಂದು ಮಾಜಿ ಶಾಸಕ ಸಿ.ಟಿ.ರವಿ(CT Ravi) ಆರೋಪಿಸಿದರು. ಬಹಿರಂಗವಾಗಿ ನಾನು ಅಷ್ಟು ಖರ್ಚು ಮಾಡಿದ್ದೇನೆ, ನಾನೇನು ದಾನ-ಧರ್ಮಕ್ಕೆ ರಾಜಕಾರಣ ಮಾಡುತ್ತಿದ್ದೇನ, ನಾನೇನು ಧರ್ಮರಾಯನ, ಖರ್ಚು ಮಾಡಿದ ಹಣ ವಸೂಲಿ ಆಗದೇ ಇದ್ದಲ್ಲಿ ಹೆಂಡರು ಮಕ್ಕಳನ್ನು ಬೀದಿಗೆ ನಿಲ್ಲಿಸಬೇಕಾ ಎಂದು ಶಾಸಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಅಧಿಕಾರಕ್ಕೆ ಬಂದ ತಕ್ಷಣವೇ ಇದು ಆರಂಭವಾಗಿದೆ. ಕರಪ್ಶನ್ ಮತ್ತು ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳು. ನಮ್ಮ ದೇಶ ಮತ್ತು ರಾಜ್ಯದ ಹಗರಣಗಳನ್ನು ಪಟ್ಟಿ ಮಾಡಿದರೆ ಶೇ.90 ರಷ್ಟು ಹಗರಣಗಳು ನಡೆದಿರುವುದು ಕಾಂಗ್ರೆಸ್ ಕಾಲಘಟ್ಟದಲ್ಲೇ. ಶೇ.90 ರಷ್ಟು ಪ್ರತಿಶತ ಅಪರಾಧಿ ಸ್ಥಾನದಲ್ಲಿರುವವರು ಕಾಂಗ್ರೆಸ್ನ ಸಚಿವರು ಮತ್ತು ಅವರ ಕಾಲಘಟ್ಟದ ಅಧಿಕಾರಿಗಳು. ಭ್ರಷ್ಟಾಚಾರದ ಬೀಜ ಬಿತ್ತಿದ್ದೇ ಕಾಂಗ್ರೆಸ್ ಪಕ್ಷ, ಭ್ರಷ್ಟಾಚಾರದಿಂದ ವಿಮುಖವಾಗಿರುತ್ತದೆ ಎಂಬುದನ್ನು ಯಾರೂ ನಂಬುವುದಿಲ್ಲ ಎಂದರು. ಕಾಂಗ್ರೆಸಿಗರು ಯಾವ ಪ್ರಾಮಾಣಿಕತೆಯ ಸೋಗು ಹಾಕಿದರೂ ಅಲ್ಲಿ ಭ್ರಷ್ಟಾಚಾರದ ವಾಸನೆಯೇ ಇರುತ್ತದೆ. ಕಾಂಗ್ರೆಸ್‌ನ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿಯಬೇಕಾದ ಅವಶ್ಯಕತೆಯೇ ಇಲ್ಲ ಎಂದರು.

Let them swear in Ajjaya’s Math