ಚಿಕ್ಕಮಗಳೂರು: ನಗರ ಹೊರವಲಯದ ಶ್ರೀ ಜಯಬಸವ ತಪೋವನದಲ್ಲಿ ಮೇ.೧೦ ರಂದು ನಡೆಯಲಿರುವ ಬಸವ ಜಯಂತಿ ಹಿನ್ನೆಲೆಯಲ್ಲಿ ನಮ್ಮ ನಡಿಗೆ ಬಸವಣ್ಣನೆಡೆಗೆ ಎಂಬ ಧ್ಯೇಯವಾಕ್ಯದೊಂದಿಗೆ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಯಬಸವ ತಪೋವನ ವಿಶ್ವ ಧರ್ಮಪೀಠದ ಶ್ರೀ ಜಯಬಸವಾನಂದ ಸ್ವಾಮೀಜಿ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿರೇಮಗಳೂರು ಅಂಬೇಡ್ಕರ್ ವೃತ್ತದಿಂದ ಶ್ರೀ ಜಯಬಸವ ತಪೋವನದವರೆಗೆ ಬೆಳಗ್ಗೆ ೬ ರಿಂದ ೧ ಗಂಟೆ ಕಾಲ ೩ ಕಿಮೀ ದೂರವನ್ನು ಬಸವಾದಿ ಶರಣರ ವಚನಗಳ ಪಠಣದೊಂದಿಗೆ ವಾಯುವಿಹಾರ ನಡೆಸಲಾಗುವುದು. ನಗರ ಮತ್ತು ಗ್ರಾಮೀಣ ಪ್ರದೇಶದ ಬಸವಣ್ಣನ ಅಭಿಮಾನಿಗಳು, ಸರ್ವ ಜನಾಂಗದ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಬಸವ ತಪೋವನದಲ್ಲಿ ಬೆಳಗ್ಗೆ ೭ ಗಂಟೆಗೆ ಬಸವ ಧ್ವಜಾರೋಹಣ ನಂತರ ೮ ಗಂಟೆವರೆಗೆ ವಚನ ಗಾಯನ ಹಾಗೂ ೫ ಮಂದಿ ಗಣ್ಯರು ಬಸವ ಜಯಂತಿ ಬಗ್ಗೆ ಶುಭ ಸಂದೇಶ ನೀಡಲಿದ್ದಾರೆ ಎಂದರು.

ಬಸವ ನಡಿಗೆ ಕಾರ್ಯಕ್ರಮಕ್ಕೆ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡುವರು. ಬಸವ ಧ್ವಜಾರೋಹಣವನ್ನು ಕಾಫಿ ಬೆಳೆಗಾರ ರುದ್ರೇಗೌಡ ನೆರವೇರಿಸುವರು. ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮತ್ತು ಸಂಸ್ಕರಣೆ ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ವೈದ್ಯರಾದ ಡಾ. ಜೆ.ಪಿ ಕೃಷ್ಣೇಗೌಡ, ಎಐಟಿ ನಿರ್ದೇಶಕ ಡಾ.ಸಿ.ಕೆ.ಸುಬ್ಬರಾಯ, ವೀರಭದ್ರೇಶ್ವರ ಬಸ್ ಮಾಲೀಕ ಬಿ.ಎಚ್.ಲೋಕೇಶ್, ಕುಪ್ಪೇನಳ್ಳಿ ಚಂದ್ರಶೇಖರ್, ಜಯಕುಮಾರ್ ಭಾಗವಿಸಲಿದ್ದಾರೆ. ಇದೇ ವೇಳೆ ಜಂಗಮ ಜ್ಯೋತಿ ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಹಲವಾರು ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಎಲ್ಲಾ ಶರಣರು, ನಾಗರೀಕರು, ಎಲ್ಲಾ ಸಮಾಜ, ಸಮುದಾಯದ ಬಾಂಧವರು, ಗ್ರಾಮಸ್ಥರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಪೋವನದ ಭಕ್ತರಾದ ಜಯಣ್ಣ, ಸಂಗಮನಾಥ್, ರುದ್ರೇಶ್ ಉಪಸ್ಥಿತರಿದ್ದರು.

May 10 is Basava Jayanti in Basava Tapovana