ತನ್ನೆದುರಲ್ಲೇ ಲೈಂಗಿಕ ಕ್ರಿಯೆ ನಡೆಸುವಂತೆ ಹೇಳಿ ಜೋಡಿಯನ್ನು ಕೊಂದು ಹಾಕಿದ ಮಂತ್ರವಾದಿಯನ್ನು ಬಂಧಿಸಲಾಗಿದೆ. ರಾಜಸ್ಥಾನದ ಜೈಪುರದಲ್ಲಿ ಘಟನೆ ನಡೆದಿದೆ. ಜೋಡಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದು, ಅವರ ದೇಹದ ಮೇಲೆ ಅಂಟು ಸುರಿದು ಮಂತ್ರವಾದಿ ಕೊಲೆ ಮಾಡಿದ್ದಾನೆ.

ಸರ್ಕಾರಿ ಶಿಕ್ಷಕನಾದ 30 ವರ್ಷದ ರಾಹುಲ್ ಮತ್ತು 28 ವರ್ಷದ ಮಹಿಳೆಗೆ ಲೈಂಗಿಕ ಕ್ರಿಯೆ ನಡೆಸುವಂತೆ ಹೇಳಿ, ದೈಹಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಅವರ ಮೇಲೆ ಬೇಗ ಒಣಗುವ ಅಂಟು ಸುರಿದಿದ್ದಾನೆ. ದೇಹಗಳು ಅಂಟಿಕೊಂಡಾಗ ಅವರನ್ನು ಕಲ್ಲಿನಿಂದ ಹೊಡೆದು, ಚಾಕುವಿನಿಂದ ಇರಿದು ಕೊಂದು ಹಾಕಿದ ಆರೋಪ ಈ ಮಂತ್ರವಾದಿ ಮೇಲಿದೆ.

ಉದಯಪುರದ ಗೋಗುಂಡಾ ಅರಣ್ಯದಲ್ಲಿ ಬಟ್ಟೆ ಇಲ್ಲದೆ ಶವಗಳು ಪತ್ತೆಯಾಗಿವೆ. ಮಂತ್ರವಾದಿಯನ್ನು ಭಲೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಪೊಲೀಸ್ ವಶದಲ್ಲಿದ್ದಾನೆ.

ಗೋಗುಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಕೇಲ ಬಾವಡಿ ಅರಣ್ಯದಲ್ಲಿ ಇಬ್ಬರ ಮೃತದೇಹಗಳು ಬಟ್ಟೆ ಇಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರನ್ನು ರಾಹುಲ್ ಮೀನಾ, ಸೋನು ಕವರ್ ಎಂದು ಗುರುತಿಸಲಾಗಿದೆ. ಮೃತದೇಹಗಳು ಪತ್ತೆಯಾದಾಗ, ಇದು ಪ್ರೇಮ ಪ್ರಕರಣದ ತಪ್ಪು ಎಂದು ಪೊಲೀಸರು ಶಂಕಿಸಿದ್ದಾರೆ. ಘೋರ ಹತ್ಯೆಯನ್ನು ಬೇಧಿಸಲು ತಂಡ ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶಂಕಿತ ತಂತ್ರಿ ಭಲೇಶ್ ಕುಮಾರ್ ನನ್ನು ಬಂಧಿಸಲಾಗಿದೆ.

ಇಚ್ಛಾಪೂರ್ಣ ಶೇಷನಾಗ್ ಭಾವ್ಜಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೋನು ಮತ್ತು ರಾಹುಲ್ ಸ್ನೇಹಿತರಾಗಿದ್ದರು. ಅವರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಇದು ಮಂತ್ರವಾದಿಗೂ ತಿಳಿದಿತ್ತು.

ಮಂತ್ರವಾದಿ ದೇವಾಲಯದ ಆವರಣದಲ್ಲಿ ವರ್ಷಗಳ ಕಾಲ ಇರುತ್ತಿದ್ದ. ರಾಹುಲ್ ತನ್ನ ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಆತನ ಪತ್ನಿ ಜಗಳ ಪರಿಹಾರಕ್ಕಾಗಿ ಮಂತ್ರವಾದಿ ಮೊರೆ ಹೋಗಿದ್ದಾಳೆ. ಆತ ರಾಹುಲ್ ಮತ್ತು ಸೋನು ಅಕ್ರಮ ಸಂಬಂಧದ ಬಗ್ಗೆ ಹೇಳಿದ್ದಾನೆ.

ಇದರಿಂದ ಆಕ್ರೋಶಗೊಂಡ ರಾಹುಲ್ ಮತ್ತು ಸೋನು ಮಂತ್ರವಾದಿಗೆ ಬೆದರಿಕೆ ಹಾಕಿದ್ದಾರೆ. ಸಾರ್ವಜನಿಕವಾಗಿ ಮಾನಹಾನಿ ಮಾಡಲು ಯತ್ನಿಸಿದ್ದಾರೆ. ಇದರಿಂದಾಗಿ ರಾಹುಲ್ ಮತ್ತು ಸೋನು ಅವರನ್ನು ಕೊಲ್ಲುವ ಯೋಜನೆಯನ್ನು ಮಂತ್ರವಾದಿ ರೂಪಿಸಿದ್ದ.

ನವೆಂಬರ್ 15 ರಂದು ರಾಹುಲ್ ಮತ್ತು ಸೋನು ಅವರನ್ನು ಕೊಲೆಯಾದ ಸ್ಥಳಕ್ಕೆ ಕರೆದೊಯ್ದು ಬೆದರಿಸಿದ್ದಾನೆ. ನನ್ನ ಎದುರಲ್ಲೇ ದೈಹಿಕ ಸಂಬಂಧ ಬೆಳೆಸಿ ಎಂದು ಹೇಳಿ ಸರಸದ ವೇಳೆಯಲ್ಲೇ ಅವರ ಮೈಮೇಲೆ ಫೆವಿಕ್ವಿಕ್ ಸುರಿದು ಕಲ್ಲುಗಳಿಂದ ಹೊಡೆದು ಕೊಂದಿದ್ದಾನೆ ಎಂದು ಹೇಳಲಾಗಿದೆ. ತನಿಖೆ ಮುಂದುವರೆದಿದೆ.