ಚಿಕ್ಕಮಗಳೂರು: ಇಲ್ಲಿನ ವಕೀಲರ ಸಂಘದ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಸುಜೇಂದ್ರ, ಉಪಾಧ್ಯಕ್ಷರಾಗಿ ಶರತ್‌ಚಂದ್ರ, ಕಾರ್ಯದರ್ಶಿ ಅನಿಲ್‌ಕುಮಾರ್, ಖಜಾಂಚಿ ದೀಪಕ್, ಸಹಕಾರ್ಯದರ್ಶಿಯಾಗಿ ಪ್ರಿಯದರ್ಶಿನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಜೀಂದ್ರ ಮಾತನಾಡಿ, ೨೦೨೪ ರಿಂದ ೨೦೨೬ರ ಅವಧಿಗೆ ಇಂದು ಚುನಾವಣೆ ನಡೆದಿದ್ದು ಜಾತಿ, ಮತ, ಧರ್ಮ, ಗುಂಪುಗಾರಿಕೆಯನ್ನು ಮೀರಿ ಸಾಮಾಜಿಕ ಪರಿಕಲ್ಪನೆಯನ್ನು ಗಣನೆಗೆ ತೆಗೆದುಕೊಂಡು ನಡೆಸಿರುವ ನಿ?ಕ್ಷಪಾತ ಚುನಾವಣೆಯಾಗಿದೆ ಎಂದರು.

ನಮ್ಮ ತಂಡದ ಮೇಲೆ ವಿಶ್ವಾಸ ಇಟ್ಟಿರುವ ಎಲ್ಲಾ ವಕೀಲರ ನಂಬಿಕೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುವ ಜೊತೆಗೆ ವಕೀಲರ ರಕ್ಷಣೆಗೆ ಪ್ರಮುಖ ಪಾತ್ರ ವಹಿಸುವುದಾಗಿ ಭರವಸೆ ನೀಡಿದರು.

ಸುಮಾರು ೧೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡ ಸಂಕೀರ್ಣದಲ್ಲಿ ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ಬೇಕಾಗಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವಂತೆ ಕೋರಲಾಗಿದೆ. ಈ ನಿಟ್ಟಿನಲ್ಲಿ ಯುವ ವಕೀಲರಿಗೆ ತರಬೇತಿ ನೀಡುವ ಕಾರ್ಯಕ್ಕೆ ಸಧ್ಯದಲ್ಲೇ ಸಲಹೆ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಮಟ್ಟದ ಉನ್ನತವಾದ ಗ್ರಂಥಾಲಯದ ಅವಶ್ಯಕತೆ ಇದ್ದು, ತಮ್ಮ ಅವಧಿಯಲ್ಲಿ ಇದನ್ನು ಸ್ಥಾಪಿಸಲು ಅತಿ ಹೆಚ್ಚು ಆಸಕ್ತಿ ಹೊಂದಿದ್ದೇನೆ. ಹಿಂದೆ ವಕೀಲರ ಮೇಲೆ ದೌರ್ಜನ್ಯ ಆಗಿದ್ದು ಅದಕ್ಕೆ ನ್ಯಾಯ ಪಡೆದುಕೊಳ್ಳಲು ಬೇಕಾದ ಅಗತ್ಯ ಕ್ರಮವನ್ನು ಕೈಗೊಂಡು ಅದಕ್ಕೆ ನ್ಯಾಯ ಒದಗಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿದ ಚುನಾವಣಾಧಿಕಾರಿ ಶಿವಶಂಕರ್ ಮತ್ತು ತಂಡಕ್ಕೆ ನಮ್ಮನ್ನು ಆಯ್ಕೆ ಮಾಡಿದ ಸಂಘದ ಎಲ್ಲಾ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು.

ಕಾರ್ಯದರ್ಶಿ ಅನಿಲ್‌ಕುಮಾರ್ ಮಾತನಾಡಿ, ನನಗೆ ಸಿಕ್ಕಿರುವುದು ಅಧಿಕಾರ ಎಂದು ಭಾವಿಸದೆ ವಕೀಲರ ಗೌರವವನ್ನು ಕಾಪಾಡಿ ಅವರ ರಕ್ಷಣೆ ಮಾಡುವಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರು ಹಾಜರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

New officers of the Bar Association elected