ಹುಬ್ಬಳ್ಳಿ: ಇಳಿವಯಸ್ಸಿನಲ್ಲೂ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ ವೃದ್ಧರು, ತ್ರಿಚಕ್ರವಾಹನಗಳಲ್ಲಿ ಆಗಮಿಸಿ ಮತಚಲಾಯಿಸಿದ ವಿಕಲಚೇತನರು, ಪ್ರಥಮ ಬಾರಿಗೆ ಮತಚಲಾಯಿಸಿದ ಖುಷಿಯಲ್ಲಿ ಯುವಕರು..!

ಇದು ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಕಂಡು ಬಂದ ದೃಶ್ಯಗಳು. ವಯೋವೃದ್ಧರು ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತ ಚಲಾಯಿಸುವ ವ್ಯವಸ್ಥೆಯನ್ನೂ ಚುನಾವಣಾ ಆಯೋಗ ಈ ಸಲ ಕಲ್ಪಿಸಿತ್ತು. ಚುನಾವಣಾ ಸಿಬ್ಬಂದಿಯೇ 80 ವರ್ಷ ಮೇಲ್ಪಟ್ಟವರು, ವಿಕಲಚೇತನರ ಮನೆ ಮನೆಗೆ ತೆರಳಿ ಬ್ಯಾಲೇಟ್‌ ಪೇಪರ್‌ ಮೂಲಕ ಅಂಚೆ ಮತದಾನ ಮಾಡಿಸಿಕೊಳ್ಳಬೇಕು. ಆದರೆ ಇದು ಪ್ರಥಮ ಬಾರಿ ಜಾರಿಯಾಗಿದ್ದರಿಂದ ನಿರ್ಲಕ್ಷ್ಯತನವಾಯಿತೋ? ಎಲ್ಲ ಸಿಬ್ಬಂದಿಗೆ ಸರಿಯಾದ ಮಾಹಿತಿ ಕೊರತೆಯಿಂದಾಗಿಯೋ? ಸರಿಯಾಗಿ ಈ ಕೆಲಸ ಆಗಿರಲಿಲ್ಲ. ಈ ಕಾರಣದಿಂದ ಬಹುತೇಕ ಎಲ್ಲೆಡೆ ವೃದ್ಧರು, ವಿಕಲಚೇತನರು ಮತಗಟ್ಟೆಗೆ ಆಗಮಿಸಿ ಮತಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು.

ವೃದ್ಧರನ್ನು, ವಿಕಲಚೇತನರನ್ನು ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು ಮತಗಟ್ಟೆಗೆ ಕರೆತರುತ್ತಿದ್ದರು. ಇನ್ನು ಕೆಲವೆಡೆಯಂತೂ ಪೊಲೀಸ್‌ ಸಿಬ್ಬಂದಿ, ಮತಗಟ್ಟೆಸಿಬ್ಬಂದಿಗಳೂ ನೆರವಿಗೆ ಬರುತ್ತಿದ್ದ ದೃಶ್ಯವೂ ಕಂಡು ಬಂತು. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಮತದಾನಕ್ಕೆ ಆಗಮಿಸಿದ್ದ ವೃದ್ಧೆಯನ್ನು ಡಿವೈಎಸ್‌ಪಿ ಗೌರವ ಕೆ.ಸಿ. ಅವರೇ ಮತದಾನ ಕೇಂದ್ರಕ್ಕೆ ಕರೆದುಕೊಂಡು ಮತ ಹಾಕಿಸಿದರು. ನಂತರ ವೃದ್ಧೆಯನ್ನು ಹೊರಗೆ ಕರೆದುಕೊಂಡು ಬಂದು ಬೇರೊಬ್ಬರ ವಾಹನದಲ್ಲಿ ಕೂರಿಸಿ ಮನೆಗೆ ಬಿಡುವಂತೆ ಸೂಚಿಸಿದರು. ಇನ್ನು ಹಲವೆಡೆ ವಿಕಲಚೇತನರು ತ್ರಿಚಕ್ರವಾಹನಗಳಲ್ಲಿ ಬಂದಿದ್ದು ಅಲ್ಲಲ್ಲಿ ಕಂಡು ಬಂತು.

ಕುಂದಗೋಳ ಕ್ಷೇತ್ರದ ಅದರಗುಂಜಿ ಗ್ರಾಮದಲ್ಲಿ 90 ವರ್ಷದ ಪಾರ್ವತಮ್ಮ ಅಂಚಟಗೇರಿ ಮೊಮ್ಮಗನ ನೆರವಿನೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. 85 ವರ್ಷದ ಕಾಳಮ್ಮ ಬಡಿಗೇರ ಸಹ ಸ್ಥಳೀಯ ಕಾರ್ಯಕರ್ತರ ಸಹಾಯದೊಂದಿಗೆ ವೀಲ್‌ಚೇರ್‌ನಲ್ಲಿ ಆಗಮಿಸಿ ಹಕ್ಕು ಚಲಾಯಿಸಿದರು.

ಕಳೆದ ಚುನಾವಣೆಗಿಂತಲೂ ಈ ಬಾರಿ ಯುವ ಮತದಾರರ ಸಂಖ್ಯೆ ಹೆಚ್ಚಳವಾಗಿದ್ದು, ಮತದಾನ ಮಾಡಿ ಹೊರಗೆ ಬಂದು ಸಂತಸ ಹಂಚಿಕೊಳ್ಳುತ್ತಿರುವುದು, ಮತದಾನದ ಶಾಯಿ ಹಚ್ಚಿರುವ ಬೆರಳು ಹಿಡಿದು ಸೆಲ್ಫಿ ತೆಗೆಸಿಕೊಳ್ಳುತ್ತಿರುವುದು ಎಲ್ಲೆಡೆ ಕಂಡುಬಂದಿತು.

ಕಲಘಟಗಿಯ ಮತಗಟ್ಟೆ149ರಲ್ಲಿ ನಿರ್ಮಿಸಲಾಗಿರುವ ಸಾಂಪ್ರದಾಯಿಕ (ಎಥ್ನಿಕ್‌) ಮತಗಟ್ಟೆಯಲ್ಲಿ ಮತದಾನಕ್ಕೆ ಆಗಮಿಸಿದ ನವಜೋಡಿಯು ಮತಚಲಾಯಿಸಿ ಬಂದು ಮತಗಟ್ಟೆಯ ಎದುರು ಇರಿಸಲಾಗಿದ್ದ ಕಲಘಟಗಿ ಬಣ್ಣದ ತೊಟ್ಟಿಲಿನ ಎದುರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಕಲಘಟಗಿ ಕ್ಷೇತ್ರದ ಮಿಶ್ರಿಕೋಟೆಯಲ್ಲಿ ಸುನಂದಾ ಗಾಮನಗಟ್ಟಿಎಂಬ ಮಹಿಳೆಯ ಹೆಸರು ಮತದಾರರ ಪಟ್ಟಿಯಲ್ಲಿ ಡಿಲೀಟ್‌ ಆಗಿತ್ತು. ಈ ವೇಳೆ ಸುನಂದಾ ಅಲ್ಲಿನ ಬಿಎಲ್‌ಒ ಅವರೊಂದಿಗೆ ಕೆಲಕಾಲ ವಾಗ್ವಾದ ನಡೆಸಿದರು. ನನಗೆ 7 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ನಾನು ಇಲ್ಲಿಯೇ ಮತದಾನದ ಹಕ್ಕು ಹೊಂದಿದ್ದೇನೆ. ಮದುವೆಯಾದ ಮೇಲೆ 2 ಬಾರಿ ಮತ ಚಲಾವಣೆ ಮಾಡಿದ್ದು, ಈಗ ಪಟ್ಟಿಯಲ್ಲಿ ನನ್ನ ಹೆಸರು ಡಿಲೀಟ್‌ ಮಾಡಲಾಗಿದೆ. ಮತಹಾಕುವ ಸಲುವಾಗಿಯೇ ನಾನು ಬಂಕಾಪುರದಿಂದ ಇಲ್ಲಿಗೆ ಬಂದೆ. ಆದರೆ, ಹೆಸರು ಡಿಲೀಟ್‌ ಆಗಿರುವುದು ತುಂಬಾ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿ¨ರು.

ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೂ ಆಗಿರುವ ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ ಅದರಗುಂಚಿಯಲ್ಲಿ ಮತದಾನ ಮಾಡಲು ಕುಟುಂಬಸ್ಥರೊಂದಿಗೆ ಚಿಹ್ನೆಯ ಧ್ವಜ ಹೊಂದಿದ ಕಾರು ತಗೆದುಕೊಂಡು ಮತಗಟ್ಟೆಕೇಂದ್ರದೊಳಗೆ ಬಂದಿದ್ದರು. ಈ ವೇಳೆ ಮತಗಟ್ಟೆಯಲ್ಲಿದ್ದ ಅಧಿಕಾರಿಗಳು ವಾಹನಕ್ಕೆ ಹಾಕಿದ್ದ ಧ್ವಜ ತೆಗೆದು ಮತಗಟ್ಟೆಯಿಂದ ವಾಹನವನ್ನು ಹೊರ ಕಳುಹಿಸಿದರು.

Old people who exercised their rights even at a young age