ನವದೆಹಲಿ: ದಿ ಕೇರಳ ಸ್ಟೋರಿ’ ಚಿತ್ರವನ್ನು ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಿದ ನಂತರ ಯುಪಿಯಲ್ಲೂ ತೆರಿಗೆ ಮುಕ್ತಗೊಳಿಸಲಾಗಿದೆ. ಅದರ ನಂತರ ಈಗ ಚಿತ್ರತಂಡ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಬುಧವಾರ ಭೇಟಿ ಮಾಡಿದೆ.  ಸಿಎಂ ಜೊತೆಗಿನ ಸಭೆಯಲ್ಲಿ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಿದಕ್ಕೆ ಧನ್ಯವಾದ ಹೇಳುವುದರ ಜೊತೆಗೆ ಚಿತ್ರದ ಕಥೆಯ ಬಗ್ಗೆಯೂ ನಿರ್ಮಾಪಕರು ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ದಿ ಕೇರಳ ಸ್ಟೋರಿ ಚಿತ್ರಕ್ಕೆ ಕೆಲವು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಇನ್ನು ಕೆಲವು ರಾಜ್ಯಗಳಲ್ಲಿ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸುವ ಮೂಲಕ ಬೆಂಬಲಿಸಲಾಗುತ್ತಿದೆ. ಒಂದೆಡೆ ಪಶ್ಚಿಮ ಬಂಗಾಳದಲ್ಲಿ ಚಿತ್ರ ಪ್ರದರ್ಶನಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಮತ್ತೊಂದೆಡೆ ತಮಿಳುನಾಡಿನ ಥಿಯೇಟರ್ ಮಾಲೀಕರು ಚಿತ್ರ ಪ್ರದರ್ಶಿಸದಿರಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ, ಮಧ್ಯಪ್ರದೇಶದ ನಂತರ ಉತ್ತರ ಪ್ರದೇಶವು ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸುವ ಮೂಲಕ ಬೆಂಬಲಿಸಿದೆ.

ಕ್ಯಾಬಿನೆಟ್‌ ಜೊತೆ ಚಿತ್ರಿ ವೀಕ್ಷಿಸಲಿರುವ ಯೋಗಿ: ಕೇರಳ ಸ್ಟೋರಿಯನ್ನು ಬೆಂಬಲಿಸಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಇಡೀ ಕ್ಯಾಬಿನೆಟ್‌ನೊಂದಿಗೆ ಚಿತ್ರವನ್ನು ವೀಕ್ಷಿಸುವುದಾಗಿ ಘೋಷಿಸಿದ್ದಾರೆ. ಇದಲ್ಲದೆ, ಯುಪಿ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಉತ್ತರ ಪ್ರದೇಶದ ಜನರು ಚಿತ್ರವನ್ನು ನೋಡಿ ನಮ್ಮ ಸಹೋದರ ಸಹೋದರಿಯರು ಹೇಗೆ ಕಷ್ಟಗಳನ್ನು ಅನುಭವಿಸಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ನಾವು ಚಲನಚಿತ್ರವನ್ನು ನೋಡುತ್ತೇವೆ. ಬಂಗಾಳದಲ್ಲಿ ಚಿತ್ರವನ್ನು ನಿಷೇಧಿಸುವುದನ್ನು ಅಲ್ಲಿನ ಜನರೇ ಇಷ್ಟಪಟ್ಟಿಲ್ಲ ಎಂದಿದ್ದಾರೆ.

ಏನಿದು ವಿವಾದ: ‘ದಿ ಕೇರಳ ಸ್ಟೋರಿ’ ಚಿತ್ರದ ಟ್ರೈಲರ್ ಬಿಡುಗಡೆಯಾದ ನಂತರ ವಿವಾದ ಪ್ರಾರಂಭವಾಗಿತು. ಕೇರಳದಿಂದ 32,000 ಮಹಿಳೆಯರು ನಾಪತ್ತೆಯಾಗಿದ್ದಾರೆ ಮತ್ತು ಭಯೋತ್ಪಾದಕ ಗುಂಪು ಐಸಿಸ್ ಸೇರಿದ್ದಾರೆ ಎಂದು ಟ್ರೇಲರ್‌ನಲ್ಲಿ ಹೇಳಾಗಿತ್ತು. ಇದರ ಬೆನ್ನಲ್ಲಿಯೇ ರಾಜಕೀಯ ಚರ್ಚೆ ಕೂಡ ಆರಂಭವಾಗಿದ್ದರಿಂದ 32 ಸಾವಿರ ಜನರು ನಾಪತ್ತೆಯಾಗಿದ್ದಾರೆ ಎನ್ನುವ ಅಂಶದ ಕುರಿತು ಸತ್ಯಾಸತ್ಯತೆಯನ್ನು ಪ್ರಶ್ನೆ ಮಾಡಿದ್ದಾರೆ. ಬಳಿಕ ಕೇರಳ ಮುಖ್ಯಮಂತ್ರಿ ಪಿಣರಾಯಿವಿಜಯನ್‌ ಈ ಚಿತ್ರ ಸುಳ್ಳು ಸಂಗತಿಯನ್ನು ತಿಳಿಸುತ್ತಿದೆ ಎಂದು ಹೇಳಿದ್ದರು. ವಿವಾದ ಉಂಟಾಗಿದ್ದನ್ನು ನೋಡಿ ಟ್ರೇಲರ್‌ನಲ್ಲಿ ಸಣ್ಣ ಬದಲಾವಣೆ ಮಾಡಲಾಗಿತ್ತಲ್ಲದೆ, ಈ ಚಿತ್ರವು ಮೂವರು ಮಹಿಳೆಯರ ಕಥೆಯನ್ನು ಆಧರಿಸಿದೆ ಎಂದು ತಿಳಿಸಲಾಗಿತ್ತು.

ಇದಾದ ನಂತರ, ಈ ಚಿತ್ರದಲ್ಲಿ ಮುಸ್ಲಿಂ ಧರ್ಮದ ಮೇಲೆ ಯಾವುದೇ ಆರೋಪ ಮಾಡಿಲ್ಲ, ಬದಲಿಗೆ ಐಸಿಸ್ ಕಥೆಯನ್ನು ತೋರಿಸಲಾಗಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ. ವಾಸ್ತವವಾಗಿ, ಚಿತ್ರವು ನರ್ಸ್ ಆಗಲು ಬಯಸಿದ ಹುಡುಗಿಯರ ಕಥೆಯನ್ನು ಹೇಳುತ್ತದೆ, ಆದರೆ ಅವರು ಲವ್‌ ಜಿಹಾದ್‌ ಜಾಲಕ್ಕೆ ಸಿಲುಕಿ ಐಸಿಸ್ ಭಯೋತ್ಪಾದಕರಾದರು. ಈ ಚಿತ್ರಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಹಲವೆಡೆ ವಿವಾದಗಳು ನಡೆಯುತ್ತಿದ್ದು, ಹಲವೆಡೆ ಬೆಂಬಲ ವ್ಯಕ್ತವಾಗಿದೆ. ಅದು ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

The Kerala Story film crew met Uttar Pradesh CM Yogi Adityanath