ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದ್ದು, ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಸೂಚನೆಯನ್ನು ಲಕ್ಷಾಂತರ ಜನರು ರಾರ‍ಯಲಿಯಲ್ಲಿ ನೀಡಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷದ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಬಿಜೆಪಿ ರಾಜ್ಯಉಸ್ತುವಾರಿ ಅರುಣ್‌ಸಿಂಗ್‌ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಟ್ರೆಂಡ್‌ ಇದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ರಾರ‍ಯಲಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ರಾರ‍ಯಲಿಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ಸಂದೇಶವನ್ನು ರಾಜ್ಯದ ಜನರು ನೀಡಿದ್ದಾರೆ ಎಂದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪಿಎಫ್‌ಐ ನಂಟು ಹೊಂದಿತ್ತು, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ, ಪಿಎಫ್‌ಐನ ನಂಟು ಮೂಲೆ ಮೂಲೆಯಲ್ಲಿ ಹರಡಿತು. ಆ ಅವಧಿಯಲ್ಲಿ ಸುಮಾರು 23 ಹಿಂದೂ ಯುವಕರನು ಹತ್ಯೆ ಮಾಡಲಾಗಿತ್ತು. ಇದು ಎಲ್ಲ ಜನರಿಗೆ ಭಯಾನಕ ವಾತಾವರಣ ಸೃಷ್ಟಿಯಾಗುವುದರ ಜತೆಗೆ ಈ ರಾಜ್ಯದ ಕರಾಳ ಅವಧಿಗಳಲ್ಲಿ ಒಂದಾಗಿದೆ. ಇದರ ಜೊತೆಗೆ, ಬಿಬಿಎಂಪಿಯಲ್ಲಿ ರಸ್ತೆ ಹಗರಣ, ವಿದ್ಯುತ್‌ ಹಗರಣ, ಪಿಎಸೈ, ಶಿಕ್ಷಕರ ನೇಮಕಾತಿ ಹಗರಣ ಇತ್ಯಾದಿಗಳನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಜನರು ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರಲು ಹೆದರುತ್ತಿದ್ದಾರೆ ಎಂದರು.

ಗೋವಾದಲ್ಲಿ ಶ್ರೀರಾಮ ಸೇನೆ ನಿಷೇಧಿಸಿದ ಸಮಯದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಮೋದಿ ಚಕಾರ್‌ ಎತ್ತಿಲ್ಲ ಎಂಬ ಕಾಂಗ್ರೆಸ್‌ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಜರಂಗದಳ ಸಂಘಟನೆಯು ಯಾವುದೇ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಲ್ಲ. ಬಜರಂಗಳ ದಳದ ವಿರುದ್ಧ ಸಾಬೀತುಪಡಿಸುವ ಯಾವುದೇ ಪುರಾವೆಯನ್ನು ಬಹಿರಂಗಪಡಿಸಲಿ. ಅಲ್ಪಸಂಖ್ಯಾತರ ಮತಗಳನ್ನು ಓಲೈಸಲು ಕಾಂಗ್ರೆಸ್‌ ಪಕ್ಷವು ಕರ್ನಾಟಕದಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಘೋಷಿಸಿದೆ ಎಂದು ದೂರಿದರು.

ಗೋಷ್ಠಿಯಲ್ಲಿ ಮಹಾರಾಷ್ಟ್ರ ಸರ್ಕಾರದ ಸಚಿವ ಗಿರೀಶ್‌ ಮಹಾಜನ್‌, ಸಂಸದೆ ಮಂಗಳಾ ಅಂಗಡಿ, ಶಾಸಕ ಅನಿಲ ಬೆನಕೆ, ಎಫ್‌.ಎಸ್‌.ಸಿದ್ದನಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಳೆದ 3 ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷ ಜನರಿಗೆ ಏನು ಮಾಡಿದೆ ಮತ್ತು ಬಿಜೆಪಿ ಅವರಿಗಾಗಿ ಏನು ಮಾಡಿದೆ ಎಂಬುವುದನ್ನು ತಲುಪಲು ನಾವು ಮತ್ತು ನಮ್ಮ ನಾಯಕರು ಕೆಲಸ ಮಾಡಿದ್ದೇವೆ. ಬಿಜೆಪಿ ರಾಜ್ಯದಲ್ಲಿ ಸಂಸ್ಕೃತಿಯನ್ನು ಮರುಸ್ಥಾಪಿಸುವ ಕೆಲಸ ಮಾಡಿದೆ. ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲಿ ರಿವರ್ಸ್‌ ಗೇರ್‌ನಲ್ಲಿದ್ದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಾಗಿದೆ. ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳನ್ನು 420 ಯೋಜನೆಗಳಾಗಿದ್ದು, ಅದು ಎಂದಿಗೂ ಜಾರಿಗೆ ಬರುವುದಿಲ್ಲ. ಅವರು ಇತರ ರಾಜ್ಯಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ನೀಡಿದ್ದಾರೆ. ಆದರೆ, ಅವು ಇಂದಿಗೂ ಜಾರಿಗೆ ಬಂದಿಲ್ಲ ಅಂತ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ತಿಳಿಸಿದ್ದಾರೆ.

Pro-BJP wave in Karnataka