ಚಿಕ್ಕಮಗಳೂರು: ಉನ್ನತ ವ್ಯಾಸಂಗಕ್ಕಾಗಿ ಬ್ಯಾಂಕುಗಳಲ್ಲಿ ಸಾಲ ಪಡೆದಿರುವ ವಿದ್ಯಾರ್ಥಿಗಳ ಸಂಪೂರ್ಣ ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಬೇಕು ಇಲ್ಲವೇ ಉದ್ಯೋಗ ಕಲ್ಪಿಸಬೇಕು ಎಂದು ವಿವಿಧ ಪಕ್ಷ ಸಂಘಟನೆಗಳು ಒತ್ತಾಯಿಸಿವೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ, ಕನ್ನಡ ಸೇನೆ, ಬಿಎಸ್ಪಿ, ಕರವೇ ಮತ್ತಿತರೆ ಸಂಘಟನೆಗಳ ಮುಖಂಡರು ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆದ ವಿದ್ಯಾರ್ಥಿಗಳಿಗೆ ಈವರೆಗೆ ಉದ್ಯೋಗ ದೊರೆತಿಲ್ಲ. ಬ್ಯಾಂಕ್ ಸಾಲ ತೀರಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಅವರ ಸಾಲಮನ್ನಾ ಮಾಡಬೇಕು ಅಥವಾ ಅವರಿಗೆ ಉದ್ಯೋಗಾವಕಾಶ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ ಮಾತನಾಡಿ, ಹಿಂದುಳಿದ ಮತ್ತು ದಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ೨ ಲಕ್ಷ ದಿಂದ ೬ ಲಕ್ಷ ರೂ. ವರೆಗೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಎಂಬಿಬಿಎಸ್ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಪ್ರಮಾಣದ ಸಾಲ ಪಡೆದಿದ್ದಾರೆ ಎಂದರು.

ಸಾಲ ಪಡೆದು ಓದಿದ ವಿದ್ಯಾರ್ಥಿಗಳಲ್ಲಿ ಬಹುತೇಕರು ಈಗ ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಸರಕಾರ ಕೆಲಸ ಕೊಡಲಿಲ್ಲ. ಕೂಲಿಗೆ ಹೋಗುತ್ತಿದ್ದಾರೆ.ಈ ಮಧ್ಯೆ ಕೆಲ ಬ್ಯಾಂಕುಗಳು ಆಸ್ತಿ ಮುಟ್ಟುಗೋಲು ಮಾಡುತ್ತೇವೆ, ಪೊಲೀಸ್ ವಶಕ್ಕೆ ಕೊಡಿಸುತ್ತೇವೆ ಎಂದು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.

ಇದನ್ನು ಕೂಡಲೇ ಬ್ಯಾಂಕುಗಳು ನಿಲ್ಲಿಸಬೇಕು. ಸರಕಾರ ಇತ್ತ ಗಮನಹರಿಸಿ ವಿದ್ಯಾರ್ಥಿಗಳು ಪಡೆದ ಸಾಲವನ್ನು ಮನ್ನಾ ಮಾಡಬೇಕು ಅಥವಾ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಆರೋಗ್ಯ ಉಪಕೇಂದ್ರಗಳಲ್ಲಿ ದಾದಿಯರ ಕೊರತೆ ಇದೆ. ಕೋವಿಡ್ ಸಂದರ್ಭವಾಗಿರುವುದರಿಂದ ಗ್ರಾಮೀಣ ಭಾಗದ ಜನರ ಆರೋಗ್ಯ ಪರಿಶೀಲಿಸಲು ಅಗತ್ಯ ಪ್ರಮಾಣದ ನರ್ಸ್‌ಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಗುರುಶಾಂತಪ್ಪ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಕರವೇ ಜಯಪ್ರಕಾಶ್, ಸತೀಶ್, ಬಿಎಸ್ಪಿ ಗಂಗಾಧರ ಮತ್ತಿತರರು ಇದ್ದರು.

The state government has demanded loan waiver from banks for higher education