ಬೆಂಗಳೂರು: ನಾಡಹಬ್ಬ ದಸರಾಗೆ ಈಬಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲದಿರುವುದು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಬೇಸರಕ್ಕೆ ಕಾರಣವಾಗಿದೆ.

ಸೆ.26ರಿಂದ ಅಕ್ಟೋಬರ್ 5ರವರೆಗೆ ನಾಡಹಬ್ಬ ದಸರಾ, ನವರಾತ್ರಿ ಉತ್ಸವದ ಸಂಭ್ರಮ. ಆದರೆ ಶಾಲಾ-ಕಾಲೇಜುಗಳಿಗೆ ಮಾತ್ರ ಈ ಬಾರಿ ರಜೆಯನ್ನು ದಸರಾ ಬದಲಾಗಿ ದಸರಾ ಹಬ್ಬ ಮುಗಿದ ಬಳಿಕ ನೀಡಲಾಗಿರುವ ಶಿಕ್ಷಣ ಇಲಾಖೆ ಕ್ರಮಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಹೊರಡಿಸಿರುವ ಪ್ರಸಕ್ತ ಸಾಲಿನ ಶೈಕ್ಷಣಿಕ ಕ್ಯಾಲೇಂಡರ್ ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅಕ್ಟೋಬರ್ 3ರಿಂದ 16ವರೆಗೆ ಹಾಗೂ ಪದವಿ ಪೂರ್ವ ಇಲಾಖೆಯು ಅಕ್ಟೋಬರ್ 1ರಿಂದ 13ರವರೆಗೆ ದಸರಾ ರಜೆ ನಿಗದಿ ಪಡಿಸಿದೆ. ಅಂದರೆ ನವರಾತ್ರಿಯ ಕೊನೆ ಎರಡು ದಿನ ಮಕ್ಕಳು ಶಾಲೆಯಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ.

ಶಿಕ್ಷಣ ಇಲಾಖೆಗೆ ವರ್ಷದ ರಜೆ, ಹಬ್ಬಗಳ ಆಚರಣೆ ಬಗ್ಗೆ ಮೊದಲೇ ಗೊತ್ತಿದ್ದರೂ ಇಂತಹ ಎಡವಟ್ಟು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಈಗಲಾದರೂ ಹಬ್ಬಕ್ಕೆ ಅನುಗುಣವಾಗಿ ರಜೆ ಸಮಯ ನಿರ್ದಿಷ್ಟ ಪಡಿಸುವಂತೆ ಪೋಷಕರ ಒತ್ತಾಯಿಸಿದ್ದಾರೆ .

ಈ ಹಿಂದೆ ದಸರಾ ರಜೆ ಶಾಲೆಗಳಿಗೆ 28 ದಿನಗಳ ಕಾಲ ಇದ್ದುದನ್ನು ಬಳಿಕ 15 ದಿನಗಳಿಗೆ ಕಡಿತಗೊಳಿಸಲಾಯಿತು. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ 13 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಈ ಬಾರಿ ದಸರಾ ರಜೆ ಬಗ್ಗೆ ಇನ್ನೂ ಸ್ಪಷ್ಟತೆ ಸಿಗುತ್ತಿಲ್ಲ. ಸದ್ಯದ ಶಿಕ್ಷಣ ಇಲಾಖೆ ಕ್ಯಾಲೆಂಡರ್ ಪ್ರಕಾರ ದಸರಾ ಮುಗಿಯುವ ವೇಳೆಗೆ ರಜೆ ಆರಂಭವಾಗುತ್ತಿರುವುದು ಮಕ್ಕಳು, ಪೋಷಕರು, ಶಿಕ್ಷಕರ ಕೆಂಗಣ್ಣಿಗೆ ಕಾರಣವಾಗಿದೆ.