ನವದೆಹಲಿ: ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ಜೀವನದಲ್ಲಿರುವ ಪ್ರಮುಖ ವ್ಯಕ್ತಿಗಳು ಸ್ವಯಂ ನಿರ್ಬಂಧ ವಿಧಿಸಿಕೊಳ್ಳುವುದು ಅಲಿಖಿತ ನಿಯಮವಾಗಿದೆ. ದೇಶದ ಜನರನ್ನು ಅವಮಾನಿಸುವ ಮತ್ತು ಅವಹೇಳನ ಮಾಡುವ ವಿಷಯಗಳ ಬಗ್ಗೆ ನಾಲಿಗೆ ಹರಿ ಬಿಡಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ.

ಅಂತರ್ಗತ ಸಾಂವಿಧಾನಿಕ ನಿರ್ಬಂಧದ ಅಸ್ತಿತ್ವವನ್ನು ಒತ್ತಿಹೇಳಿದ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿಆರ್ ಗವಾಯಿ, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ, ಅವಹೇಳನಕಾರಿ ಹೇಳಿಕೆಗಳಿಂದ ದೂರವಿರುವ ಅಭ್ಯಾಸವನ್ನು ನಮ್ಮ ಜನಪ್ರತಿನಿಧಿಗಳು ಮತ್ತು ನಮ್ಮ ನಾಗರಿಕರು ರೂಢಿಸಿಕೊಳ್ಳಬೇಕು ಎಂದಿದೆ.

ನಪ್ರತಿನಿಧಿಗಳಿಗೆ ನಾವು ಹೇಗೆ ತಾನೇ ನೀತಿ ಸಂಹಿತೆ ರೂಪಿಸಲು ಸಾಧ್ಯ? ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರ ವ್ಯಾಪ್ತಿ ಕುರಿತಂತೆ ನಾವು ಹಸ್ತಕ್ಷೇಪ ಮಾಡಿದಂತಾಗುವುದಿಲ್ಲವೇ?’ ಎಂದು ನ್ಯಾಯಮೂರ್ತಿ ಗವಾಯಿ ವಿಚಾರಣೆ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಸಾರ್ವಜನಿಕ ಸೇವಕರಾಗಿರುವ ಯಾವುದೇ ವ್ಯಕ್ತಿಗೆ ಅಲಿಖಿತ ನಿಯಮವಿದೆ ಮತ್ತು ನಾವು ಜವಾಬ್ದಾರಿಗಳ ಹೊಂದಿರುವಾಗ ಸ್ವಯಂ ನಿರ್ಬಂಧವನ್ನು ವಿಧಿಸಿಕೊಳ್ಳಬೇಕು. ಇತರರನ್ನು ಅವಮಾನಿಸುವ ಅಥವಾ ಅವಹೇಳನ ಮಾಡುವ ವಿಷಯಗಳ ಬಗ್ಗೆ ಜನಪ್ರತಿನಿಧಿಗಳು ಮಾತನಾಡಬಾರದು ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಹೇಳಿದರು.

ಈ ವೇಳೆ ಸಂವಿಧಾನದ ತತ್ವಗಳ ಅನುಸಾರ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದೇ ಸೇರ್ಪಡೆ ಅಥವಾ ನಿಬಂಧನೆಗಳ ಪರಿಷ್ಕರಣೆ ಕುರಿತ ಪ್ರಸ್ತಾಪ ಸಂಸತ್ತಿನಿಂದಲೇ ಬರಬೇಕಾಗಿದೆ ಎಂದು ಅಟಾರ್ನಿ ಜನರಲ್ ಅವರು ಪೀಠದ ಗಮನಕ್ಕೆ ತಂದರು.

ಸೂಕ್ಷ್ಮ ವಿಷಯಗಳ ಕುರಿತು ನಿಲುವು ವ್ಯಕ್ತಪಡಿಸುವ ಜನಪ್ರತಿನಿಧಿಗಳು ಅಥವಾ ಸಾರ್ವಜನಿಕ ಜೀವನದಲ್ಲಿರುವ ಪ್ರಮುಖರು ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕಿನ ರಕ್ಷಣೆ ಪಡೆಯಬಹುದೇ ಎಂಬ ಕುರಿತ ವಿಷಯವನ್ನು ತ್ರಿಸದಸ್ಯರ ಪೀಠವು ಅಕ್ಟೋಬರ್ 5, 2017ರಂದು ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.

Tongue should not be opened: