ಚಿಕ್ಕಮಗಳೂರು: ಹಳೇ ವಿದ್ಯಾರ್ಥಿಗಳ ಸಾಧನೆ, ಹಾಗೂ ಅವರು ಸಲ್ಲಿಸುತ್ತಿರುವ ಸೇವೆಗಳ ಬಗ್ಗೆ ತಿಳಿದುಕೊಂಡರೆ ಈಗಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗುತ್ತದೆ ಎಂದು ಆದಿಚುಂಚನಗಿರಿ ವಿವಿಯ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ ತಿಳಿಸಿದರು. ತಿಳಿಸಿದರು.

ಅವರು ಭಾನುವಾರ ಆದಿಚುಂಚನಗಿರಿ ತಾಂತ್ರಿಕ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸುಮಾರು ೪೩ ವರ್ಷಗಳ ಹಿಂದೆ ಆದಿಚುಂಚನಗಿರಿ ತಾಂತ್ರಿಕ ಮಹಾ ವಿದ್ಯಾಲಯವನ್ನ ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾಜಕ್ಕೆ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಪೂಜ್ಯರು ಹುಟ್ಟು ಹಾಕಿದ್ದು ಇಂದು ಬೃಹದಾಕಾರವಾಗಿ ಬೆಳೆದಿದೆ. ನಮ್ಮಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಪದವಿ ಪಡೆದು ವಿಶ್ವದಾದ್ಯಂತ ಅವರದ್ದೇ ಆದ ಸಾಧನೆಗಳನ್ನ ಮಾಡುತ್ತಿದ್ದಾರೆ ಎಂದರು.

ಇಂದು ದೇಶ ವಿದೇಶಗಳಿಂದ ಬಹಳಷ್ಟು ವಿದ್ಯಾರ್ಥಿಗಳು ಆಗಮಿಸಿ ೨೫-೩೦ ವರ್ಷಗಳ ಸ್ನೇಹಿತರನ್ನು ಭೇಟಿಯಾಗುವ ಅವಕಾಶವನ್ನ ಸಂಸ್ಥೆ ಮಾಡಿಕೊಟ್ಟಿದೆ. ಎಲ್ಲರೂ ಬೆರತು ವಿದ್ಯಾರ್ಥಿ ಜೀವನದ ವಿಶಿಷ್ಠ ಮಜಲುಗಳನ್ನು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.

ಇದೊಂದು ವಿಶೇಷವಾದ ಸಂದರ್ಭ ಹಳೇ ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯತೆ ವಿವಿಧ ಕ್ಷೇತ್ರಗಳಲ್ಲಿವೆ. ಅವುಗಳ ಅನುಭವವನ್ನೂ ಉಪಯೋಗಿಸಿಕೊಳ್ಳಲು ಈ ಕಾರ್ಯಕ್ರಮ ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಇದಲ್ಲದೆ ಹಳೇ ವಿದ್ಯಾರ್ಥಿಗಳು ನಾವು ಓದಿದ ಸಂಸ್ಥೆ ಬಹಳ ವಿಶೇಷವಾದದ್ದು, ಈ ಎತ್ತರಕ್ಕೆ ಬೆಳೆಯಲು ಸಂಸ್ಥೆ ಕಾರಣವಾಗಿದೆ ಎನ್ನುವ ಕೃತಜ್ಞತಾ ಪೂರ್ವಕವಾಗಿ ಹಿಂತಿರುಗಿ ನೋಡುವ ದಿನವಾಗಿದೆ ಎಂದು ಹೇಳಿದರು.

ಸಂಸ್ಥೆಯ ಹಳೇ ವಿದ್ಯಾರ್ಥಿ ಭಾರತೀಯ ಸೇನೆಯ ಅಧಿಕಾರಿ ಕರ್ನಲ್ ಸಂಜೀವ್ ಶರ್ಮ ಮಾತನಾಡಿ ಜ್ಞಾನ ಸಂಪಾದನೆ ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಲು ಎಐಟಿ ವಿದ್ಯಾ ಸಂಸ್ಥೆ ಅಡಿಗಲ್ಲಾಗಿದೆ. ಸಂಸ್ಥೆಯು ಸಮಾಜದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಅಷ್ಟೇ ಮಹತ್ತರ ಕೊಡುಗೆಯನ್ನೂ ನೀಡುತ್ತಿದೆ. ಸಂಸ್ಥೆಯ ವಿದ್ಯಾರ್ಥಿಗಳು ದೇಶ, ವಿದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನಷ್ಟು ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಿ ಸಮಾಜ ಸೇವೆಗೆ ಹೆಚ್ಚು ಜನರು ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವಂತಾಗಲಿ ಎಂದು ಹೇಳಿದರು.

ಎಐಟಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್ ಮಾತನಾಡಿ, ೧೯೯೪ ರಿಂದ ೯೮ ವರೆಗೆ ಕಾಲೇಜಿನಲ್ಲಿ ಓದಿ ಪದವಿ ಪಡೆದು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೇ ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗವಹಿಸಿದ್ದಾರೆ. ತಮ್ಮ ಅನುಭವವಗಳನ್ನು ಹಂಚಿಕೊಂಡಿದ್ದಾರೆ.

ಈ ಕಾಲೇಜಿನಲ್ಲಿ ಓದಿದ ಮೇಲೆ ಅವರು ಪಡೆದ ಜ್ಞಾನವನ್ನ ಇಲ್ಲಿನ ವಿದ್ಯಾರ್ಥಿಗಳ ಜೊತೆಯಲ್ಲಿ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಈಗಿನ ಕಾಲೇಜು ಕ್ಯಾಂಪಸ್ ನೋಡಿ ಖುಷಿಪಟ್ಟಿದ್ದಾರೆ. ವಿದ್ಯಾರ್ಥಿಗಳು ಇಲ್ಲಿ ಭಾಗವಹಿಸಿರುವುದು ಎಲ್ಲರಿಗೂ ಹೆಮ್ಮೆ ಎಂದು ಹೇಳಿದರು.

ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ, ಲಯನ್ಸ್ ಸಂಸ್ಥೆ ಅಧ್ಯಕ್ಷ ಜಿ.ರಮೇಶ್, ಇತರರು ಉಪಸ್ಥಿತರಿದ್ದರು. ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಹಾಗೂ ಎಐಟಿ ಕಾಲೇಜು ಮೆಕಾನಿಕಲ್ ಇಂಜಿನೀಯರಿಂಗ್ ವಿಭಾಗ ಮುಖ್ಯಸ್ಥ ಸತ್ಯನಾರಾಯಣ ಸ್ವಾಗತಿಸಿದರು. ಪ್ರೊ. ಜಿ.ಆರ್. ವೀರೇಂದ್ರ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

College Alumni Convention of Adichunchanagiri Technical College