ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರ ಜಿಲ್ಲೆಗೆ ಸರ್ಕಾರಿ ವೈದ್ಯಕಿಯ ಶಿಕ್ಷಣ ಕಾಲೇಜು ತರಬೇಕೆಂದು ಡಾ.ಕೆ.ಸುಧಾಕರ್‌ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಹೇಳಿದರು.

ಚಿಕ್ಕಬಳ್ಳಾಪುರ(Chikkaballapur) ತಾಲೂಕಿನ ಆರೂರು ಬಳಿ 750 ಕೋಟಿ ರು, ವೆಚ್ಚದಲ್ಲಿ ನಿರ್ಮಿಸಿರುವ ನಂದಿ ವೈದ್ಯಕೀಯ ಶಿಕ್ಷಣ ಮಹಾ ವಿದ್ಯಾಲಯ(Nandi Medical College) ಹಾಗೂ ಸಂಶೋಧನಾ ಸಂಸ್ಥೆಯನ್ನು ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕಾಲೇಜು ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ನೀಡಲಿದ್ದು, ಇದರ ಎಲ್ಲ ಶ್ರೇಯಸ್ಸು ಸಚಿವ ಡಾ.ಸುಧಾಕರ್‌ಗೆ ಸಲ್ಲುತ್ತದೆ ಎಂದರು.

3 ವರ್ಷದ ಹಿಂದೆ ಯಾರೂ ಕೂಡ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜ್‌ ನಿರ್ಮಾಣ ಆಗುತ್ತದೆಯೆಂದು ನಿರೀಕ್ಷಿಸಿರಲಿಲ್ಲ. ಆದರೆ ಡಾ.ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಸಮಗ್ರ ಅಭಿವೃದ್ದಿಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಆರೋಗ್ಯ ಸಚಿವರಾಗಿ ಜಿಲ್ಲೆಗೆ ತಮ್ಮ ಮೊದಲ ಸಚಿವ ಸಂಪುಟದಲ್ಲಿ ಜಿಲ್ಲೆಗೆ ವೈದ್ಯಕೀಯ ಕಾಲೇಜ್‌ ಮಂಜೂರು ಮಾಡಿಸಿಕೊಂಡರು. ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರವಲ್ಲದೇ ನನ್ನ ಜಿಲ್ಲೆ ಹಾವೇರಿಗೂ ಕೂಡ ವೈದ್ಯಕೀಯ ಕಾಲೇಜು ಕೊಟ್ಟರೆಂದು ಸಿಎಂ ಬೊಮ್ಮಾಯಿ ಅಭಿನಂದಿಸಿದರು.

ಹಾವೇರಿ, ಚಿಕ್ಕಮಗಳೂರು, ಯಾದಗಿರಿ ಜಿಲ್ಲೆಗಳಲ್ಲೂ ಮೆಡಿಕಲ್‌ ಕಾಲೇಜು ನಿರ್ಮಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ನಿಯಮಗಳಲ್ಲಿ ಬದಲಾವಣೆ ತಂದು, ಸುಲಭವಾಗಿ ಹೊಸ ಮೆಡಿಕಲ್‌ ಕಾಲೇಜು ನಿರ್ಮಿಸಲು ಕಾರಣರಾಗಿದ್ದಾರೆ. ಕೇಂದ್ರ ಸರ್ಕಾರ ಶೇ.60 ರಷ್ಟುಹಾಗೂ ರಾಜ್ಯ ಸರ್ಕಾರ ಶೇ.40 ರಷ್ಟುಅನುದಾನದಲ್ಲಿ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮ ವಹಿಸಲಾಗಿದೆ ಎಂದರು.

ಸಚಿವ ಡಾ.ಕೆ.ಸುಧಾPರ್‌ ಮಾತನಾಡಿ, ಸುಮಾರು 57 ಎಕರೆ ಪ್ರದೇಶದಲ್ಲಿರುವ ಈ ಕಾಲೇಜಿನಲ್ಲಿ ಸುಸಜ್ಜಿತ ಅಕಾಡೆಮಿಕ್‌ ಬ್ಲಾಕ್‌, ಹಾಸ್ಟೆಲ್‌ ಮೊದಲಾದ ಸೌಲಭ್ಯಗಳಿವೆ. ಚಿಕ್ಕಬಳ್ಳಾಪುರದಲ್ಲಿ ಸತ್ಯ ಸಾಯಿ ಮೆಡಿಕಲ್‌ ಕಾಲೇಜು ಕೂಡ ಆರಂಭವಾಗಿದೆ. ಎರಡು ಮೆಡಿಕಲ್‌ ಕಾಲೇಜುಗಳಿರುವ ಈ ಜಿಲ್ಲೆಯ ಜನರು ಅದೃಷ್ಟವಂತರು. ಕೋವಿಡ್‌ ಸಮಯದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪನವರು ಉತ್ತಮವಾಗಿ ಆಡಳಿತ ನೀಡಿದ್ದರು. ಚಿಕ್ಕಬಳ್ಳಾಪುರದ ಅರೂರು ಗ್ರಾಮದಲ್ಲಿ 2019 ರ ನ.8 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ….ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು ಎಂದು ಸ್ಮರಿಸಿದರು.

ಸುಮಾರು 525 ಕೋಟಿ ರೂ. ವೆಚ್ಚದಲ್ಲಿ ಕಾಲೇಜು ನಿರ್ಮಾಣವಾಗಿದ್ದು, 4 ಬೋಧನಾ ಕೊಠಡಿ, ಡಿಜಿಟಲ್‌ ಗ್ರಂಥಾಲಯಗಳು, ಲ್ಯಾಬ್‌ಗಳು., ಪರೀಕ್ಷಾ ಕೊಠಡಿ, ಸಿಬ್ಬಂದಿ ಕೊಠಡಿ, 330 ಹಾಸಿಗೆಗಳ ಒಳರೋಗಿ ವಿಭಾಗ, ಐಸಿಯು ಲಭ್ಯವಿದೆ. 373 ವಿದ್ಯಾರ್ಥಿಗಳಿಗೆ, 373 ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್‌ ಇದೆ. ಹಾಗೆಯೇ ಈ ಕಾಲೇಜು ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡಿದ್ದರು. ಅವರಿಗೆ ಧನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌, ಜಿಪಂ ಮಾಜಿ ಅಧ್ಯಕ್ಷ ಕೇಶವರೆಡ್ಡಿ ಸೇರಿದಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ವೈದ್ಯಕೀಯ ಕಾಲೇಜಿನ ಅಧಿಕಾರಿಗಳು ಮತ್ತಿತರರು ಇದ್ದರು.

ಈ ಮೊದಲು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಉದ್ಘಾಟಿಸಬೇಕಿತ್ತು. ಆದರೆ ಮೋದಿ ಕಾರ್ಯದೊತ್ತಡದಿಂದ ಬರಲು ಆಗಲಿಲ್ಲ. ಕೊನೆಗೆ ಕೇಂದ್ರ ಆರೋಗ್ಯ ಸಚಿವರು ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜ್‌ ಉದ್ಘಾಟಿಸಬೇಕಿತ್ತಾದರೂ ಅವರು ಕೊನೆ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಗೈರು ಹಾಜರಿ ಆದರು. ಹೀಗಾಗಿ ಸಿಎಂ ಬೊಮ್ಮಾಯಿ ಅವರೇ ಜಿಲ್ಲೆಯ ವೈದ್ಯಕೀಯ ಕಾಲೇಜ್‌ನ್ನು ಉದ್ಘಾಟಿಸಿದರು.

Nandi Medical College Dr. Sudhakar Struggle Result: