ಚಿಕ್ಕಮಗಳೂರು: ಕಮಲೇಶಚಂದ್ರ ಸಮಿತಿ ಶಿಫಾರಸ್ಸಿನಂತೆ ಏಳನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಜಿಲ್ಲಾ ವಿಭಾಗವು ನಗರದ ಕೇಂದ್ರ ಅಂಚೆ ಕಚೇರಿ ಮುಂಭಾಗದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ವಿಭಾಗೀಯ ಅಧ್ಯಕ್ಷ ಟಿ.ಸಿ.ಚಂದ್ರಪ್ರಕಾಶ್ ಕರ್ತವ್ಯದಲ್ಲಿ ಎಂಟು ಗಂಟೆ ಗಳ ಕಾಲ ಕೆಲಸ, ಪಿಂಚಣಿ, ೧೮೦ ದಿನಗಳವರೆಗೆ ರಜೆ ಉಳಿಸಿಕೊಳ್ಳಲು ಹಾಗೂ ಗ್ರೂಪ್ ಇನ್ಸೂರೆನ್ಸ್ ಕವರೇಜ್‌ನ್ನು ಐದು ಲಕ್ಷಗಳವರೆಗೆ ಹೆಚ್ಚಿಸಿ ನೌಕರರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಏಳನೇ ವೇತನದ ಆಯೋಗ ಜಾರಿಗೊಳಿಸಿದ ಸಂದರ್ಭದಲ್ಲಿ ಗ್ರಾಮೀಣ ಅಂಚೆ ನೌಕರರಿಗೆ ಉತ್ತಮ ಸವಲತ್ತುಗಳನ್ನು ಒದಗಿಸುವ ಸಂಬಂಧ ಪ್ರತ್ಯೇಕವಾಗಿ ಕಮಲೇಶಚಂದ್ರ ಸಮಿತಿ ರಚಿಸಿ ಕೆಲವು ಶಿಫಾರಸ್ಸುಗಳನ್ನು ಮಾತ್ರ ಜಾರಿಗೊಳಿಸಿದೆ. ಉಳಿದ ಸವಲತ್ತುಗಳನ್ನು ಜಾರಿಗೊಳಿಸದೇ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.

ಪ್ರಸ್ತುತ ಗ್ರಾಮೀಣ ಅಂಚೆ ನೌಕರರು ೪-೫ ಗಂಟೆಗಳ ಕಾಲ ಕೆಲಸ ನಿರ್ವಹಿಸಲು ಸೀಮಿತವಿದ್ದರೂ ಕೂಡಾ ೮-೧೦ ಗಂಟೆಗಳ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಕೆಲಸ ನಿಭಾಯಿಸಿದರೂ ದಿನಗೂಲಿ ನೌಕರರಾಗದೇ, ಇನ್ನೊಂದೆಡೆ ಇಲಾಖೆಯ ಸಿಬ್ಬಂದಿಗಳಾಗದೇ ತ್ರಿಶಂಖು ಸ್ಥಿತಿಯಲ್ಲಿ ಸಿಲುಕಿಕೊಂಡಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಈ ಹಿಂದೆ ಸುಪ್ರೀಂ ಕೋರ್ಟ್ ಗ್ರಾಮೀಣ ಅಂಚೆ ನೌಕರರಿಗೆ ಸಿವಿಲ್ ನೌಕರರೆಂದು ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದ್ದರೂ ಸಹ ಕಣ್ಣಿಲ್ಲದ ಸರ್ಕಾರ ಹಾಗೂ ಅಹಂನ ಅಧಿಕಾರಿಗಳು ಇವುಗಳನ್ನು ಪರಿಗಣಿಸದೇ ಅಸಡ್ಡೆ ತೋರುವ ಮೂಲಕ ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿ ಜೀತದಾಳುಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಭಾರತದಲ್ಲಿ ಈಗಾಗಲೇ ೩.೫೦ ಲಕ್ಷ ಗ್ರಾಮೀಣ ಅಂಚೆ ನೌಕರರು ಕಡಿಮೆ ವೇತನದಲ್ಲಿ ಸಂಕಷ್ಟದಿಂದ ಜೀವನ ನಡೆಸುವಂತಾಗಿದ್ದು ನೌಕರರು ಆಕಸ್ಮಿಕ ಕಾಯಿಲೆಗಳಿಗೆ ತುತ್ತಾದರೆ ಕೂಡಾ ಸೂಕ್ತ ವೈದ್ಯಕೀಯ ಸೌಲಭ್ಯವು ಇಲ್ಲವಾಗಿದೆ. ಈ ವೇತನದಿಂದ ಮಕ್ಕಳು ಹಾಗೂ ಕುಟುಂಬ ನಿರ್ವಹಣೆಯು ಕಷ್ಟಕರವಾಗಿದೆ ಎಂದು ತಿಳಿಸಿದರು.

ಅಂಚೆ ಇಲಾಖೆಯಲ್ಲಿ ಮೂರು ದಶಕಗಳ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ನೌಕರರಿಗೂ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ನೌಕರರಿಗೆ ಏಕಸಮಾನ ವೇತನ ನಿಗಧಿಪಡಿಸಿರುವುದು ಸೂಕ್ತವಲ್ಲ. ಸೇವಾಹಿರಿತನದ ಆಧಾರದ ಮೇಲೆ ಕಮಲೇಶಚಂದ್ರ ಆಯೋಗದಂತೆ ೧೨, ೨೪ ಮತ್ತು ೩೬ ವರ್ಷಗಳ ಸೇವೆ ಸಲ್ಲಿಸಿದವರಿಗೆ ಇಂಕ್ರಿಮೆಂಟ್ ನೀಡಲು ಸರ್ಕಾರಗಳು ಮುಂದಾಗಬೇಕು ಎಂದು ಹೇಳಿದರು.

ಪ್ರತಿಭಟನೆ ಬಳಿಕ ಎಪಿಎಂಸಿ ಸಮೀಪವಿರುವ ಮುಖ್ಯ ಅಂಚೆ ಅಧೀಕ್ಷಕ ರಮೇಶ್ ಅವರ ಕಚೇರಿವರೆಗೆ ಗ್ರಾಮೀಣ ಅಂಚೆ ನೌಕರರು ಕಾಲ್ನಡಿಗೆ ಮೂಲಕ ತೆರಳಿ ಏಳನೇ ವೇತನ ಜಾರಿ ಸಂಬಂಧ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ವಿಭಾಗೀಯ ಕಾರ್ಯದರ್ಶಿ ಟಿ.ಹನುಮಂತಪ್ಪ, ಖಜಾಂಚಿ ಎ.ಓ.ಭರತ್, ಕಾರ್ಯಕಾರಿ ಸಮಿತಿಯವರಾದ ಗಂಗಾಧರ್, ಸುರೇಶ್, ಶಿವಣ್ಣ, ಹರ್ಷ, ಘನಲಿಂಗಮೂರ್ತಿ, ನಿಶಾಂತ್, ನೌಕರರಾದ ಶೇಖರಪ್ಪ, ಪರ್ವತಮ್ಮ, ರಫೀಕ್, ಲಾವಣ್ಯ, ಕವಿತ, ರಶ್ಮಿ, ರಮಮಣಿ, ಬಿಂಧು, ಕಮಲಮ್ಮ, ಪ್ರಕಾಶ್, ಶಿವಶಂಕರ್, ರವಿ, ಶೇಷಣ್ಣಗೌಡ ಮತ್ತಿತರರು ಹಾಜರಿದ್ದರು.

Protest of rural postal workers demanding implementation of seventh pay