ಚಿಕ್ಕಮಗಳೂರು: ಟಿಪ್ಪು ಕಾಲಮಾನದಲ್ಲಿ ನಾನು ಇದ್ದಿದ್ದರೇ ಆಂಜನೇಯ ಮಂದಿರ ಮಸೀದಿ ಆಗಲು ಬಿಡುತ್ತಿರಲಿಲ್ಲ. ನಾನೇ ಉರಿಗೌಡ (Urigowda), ನಾನೇ ದೊಡ್ಡ ನಂಜೇಗೌಡನಂತೆ (Nanjegowda) ಕತ್ತಿ ಹಿಡಿದು ಸಿಡಿದು ನಿಲ್ಲುತ್ತಿದ್ದೆ. ಇತಿಹಾಸದಲ್ಲಿ ಮತಾಂಧನ ವಿರುದ್ಧ ಕತ್ತಿ ಎತ್ತಿದ ಅನ್ನಿಸಿಕೊಳ್ಳುತ್ತಿದೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

ನಗರದ ಬಸವನಹಳ್ಳಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಉರಿಗೌಡ, ಅಶ್ವಥ್ ನಾರಾಯಣ್ (Ashwath Narayan) ನಂಜೇಗೌಡ ಎಂಬಂತೆ ಬಿಂಬಿಸಿ ಸೋಶಿಯಲ್ ಮೀಡಿಯಾದಲ್ಲಿ ಆಧಾರ್ ಕಾರ್ಡ್ ಹರಿಬಿಟ್ಟಿರುವುದನ್ನು ಸಮರ್ಥಿಸಿಕೊಂಡರು. ಹೌದು, ನಾವು ಅದೇ. ನಮಗೆ ಖುಷಿ, ಹೆಮ್ಮೆ ಇದೆ ಎಂದರು. ಗುಲಾಮಿ ಮಾನಸಿಕತೆಯಲ್ಲಿ ಬದುಕುವ ಜನರಿಗಿಂತ ಹಾಗೆ ಕರೆಸಿಕೊಳ್ಳುವುದು ಒಳ್ಳೆಯದು ಎಂದು ಕಾಂಗ್ರೆಸ್ (Congress) ಪ್ರಚಾರಕ್ಕೆ ಟಾಂಗ್ ನೀಡಿದರು.

ಇವತ್ತು ಟಿಪ್ಪುಯಿದ್ದು ಆತ ಆಂಜನೇಯ ದೇವಸ್ಥಾನವನ್ನು ಮಸೀದಿ ಮಾಡ ಹೊರಟಿದ್ದರೆ ಸುಮ್ಮನೆ ಇರ್ತಿದ್ವಾ, ಕೆಲವರಿಗೆ ಸತ್ಯ ಗೊತ್ತು. ಆದರೂ ಹೇಡಿಗಳಂತೆ ಬದುಕುತ್ತಿದ್ದಾರೆ. ವೋಟಿನ ಆಸೆಗೆ ಒಪ್ಪಿಕೊಳ್ಳಲು ಅವರು ತಯಾರಿರಲಿಲ್ಲ, ನಾವು ಸತ್ಯವನ್ನು ಪ್ರತಿಪಾದನೆ ಮಾಡುತ್ತಿದ್ದೇವೆ. ದುರ್ದೈವ ಕೆಲವರು ಕಪಾಲೇಶ್ವರ ಬೆಟ್ಟವನ್ನೇ ಮತಾಂತರ ಮಾಡಲು ಹೊರಟಿದ್ದ ಜನ, ಇಂದು ದೊಡ್ಡ-ದೊಡ್ಡ ಮಾತುಗಳನ್ನ ಆಡುತ್ತಾರೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಟಿಪ್ಪುವನ್ನು ನೀವು ಹೇಗೆ ಮೈಸೂರಿನ ಹುಲಿ, ಧರ್ಮಸಹಿಷ್ಣು, ಕನ್ನಡ ಪ್ರೇಮಿ ಅಂತ ಕರೆಯುತ್ತೀರಾ. ಆತ ತನ್ನ ಖಡ್ಗದ ಮೇಲೆ ಕಾಫಿಗರ ರಕ್ತಕ್ಕಾಗಿ ತನ್ನ ಖಡ್ಗ ತಹತಹಿಸುತ್ತಿದೆ ಎಂದು ಅರೆಬಿಕ್ ಭಾಷೆಯಲ್ಲಿ ಬರೆಸಿಕೊಂಡಿದ್ದ. ರಕ್ತಕ್ಕಾಗಿ ಹಾತೊರೆಯುತ್ತಿದ್ದವನನ್ನು ಮತಾಂಧ ಅನ್ನದೆ ಇನ್ನೇನು ಹೇಳಬೇಕು ಎಂದು ಟಿಪ್ಪು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಫಿಗರು ಅಂದರೆ ಯಾರು? ಯಾರ‍್ಯಾರು ಇಸ್ಲಾಂ ಧರ್ಮವನ್ನು ನಂಬುವುದಿಲ್ಲವೋ ಅವರೆಲ್ಲರೂ ಕಾಫಿಗರು. ಓಕ್ಕಲಿಗರು, ಲಿಂಗಾಯಿತರು, ಕುರುಬರು, ಬ್ರಾಹ್ಮಣರು, ಜೈನರು ಎಲ್ಲರೂ ಕೂಡ ಕಾಫಿಗರು. ಅವನನ್ನ ಹೇಗೆ ಧರ್ಮಸಹಿಷ್ಣು ಅಂತೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಪ್ರಾಪ್ತ ಸ್ನೇಹಿತರ ನಡುವೆ ಜಗಳ- ದವಡೆಗೆ ಚಾಕು ಹಾಕಿ ಹಲ್ಲೆ

ಟಿಪ್ಪುವನ್ನು ಮೈಸೂರು ಹುಲಿ, ಕನ್ನಡಪ್ರೇಮಿ, ಧರ್ಮಸಹಿಷ್ಣು ಎಂದು ಓದಿದ್ದೇವೆ. ಆದರೆ, ನಾವು ಪುಸ್ತಕದಲ್ಲಿ ಓದಿದ್ದು ಬೇರೆ, ವಾಸ್ತವದಲ್ಲಿ ದಾಖಲೆಗಳ ಪ್ರಕಾರ ಸತ್ಯವೇ ಬೇರೆ. ರಕ್ತಕ್ಕಾಗಿ ಹಾತೊತೆಯುತ್ತಿದ್ದ ಅವನನ್ನ ಮತಾಂಧ ಎಂದು ಹೇಳಬೇಕಿತ್ತು. ಆದರೆ, ದುರ್ದೈವ ಸರ್ವಧರ್ಮ ಸಹಿಷ್ಣು ಅಂತ ಸುಳ್ಳು ಇತಿಹಾಸ ಬರೆದರು. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಮೋಸದಿಂದ ನಮ್ಮ ಆಳಿದರು ಎಂದು ಓದಿದ್ದೇವೆ ಇದು ಕೂಡ ಅದೇ ರೀತಿ. ಕೂಲಿಗೆ ಬಂದ ಹೈದರಾಲಿಯೂ ಮೋಸದಿಂದಲೇ ಅಧಿಕಾರ ನಡೆಸಿದ್ದು, ಹೈದರಾಲಿ ನಂಬಿಕೆದ್ರೋಹಿ ಅಂತ ನಮ್ಮ ಪಠ್ಯಪುಸ್ತಕದಲ್ಲಿ ಬರೆಯಬೇಕಿತ್ತು ಎಂದು ಇತಿಹಾಸದ ವಿರುದ್ಧ ಕಿಡಿಕಾರಿದರು.

Urigowda-Nanjegowda