ಮೂಡಿಗೆರೆ: ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದ ಕವಿ ಲಕ್ಷ್ಮೀಶ ವೇದಿಕೆಯಲ್ಲಿ ಆಯೋಜಿಸಿರುವ ೧೯ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ನಂದೀಶ್ ಬಂಕೇನಹಳ್ಳಿ ಅವರ ಕಣ್ಣ ಕನ್ನಡಿಯಲ್ಲಿ ಭಾಗ ೧ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಲೇಖಕರು ಹಾಗೂ ಸಂಶೋದಕರಾದ ಡಾ. ಪ್ರದೀಪ್ ಕೆಂಜಿಗೆ ಅವರು ಪುಸ್ತಕ ಬಿಡುಗಡೆ ಮಾಡಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಲೇಖಕರಾದ ನಂದೀಶ್ ಬಂಕೇನಹಳ್ಳಿ, ಎರಡು ವರ್ಷಗಳ ಕಾಲ ದಿನಪತ್ರಿಕೆಯೊಂದಕ್ಕೆ ಬರೆದ ಅಂಕಣ ಬರಹಗಳ ಕೃತಿ ಇದಾಗಿದ್ದು ಸ್ಮಶಾನ ಕಾಯುವವರು, ಪೋಸ್ಟ್ ಮಾರ್ಟಂ ಮಾಡುವವರು, ಸೂಲಗಿತ್ತಿಯರು, ಅಂಬುಲೆನ್ಸ್ ಚಾಲಕರು, ನದಿ ಮುಂತಾದ ಕಡೆಗಳಲ್ಲಿ ಸಿಗುವ ಹೆಣಗಳನ್ನು ಹೊರತೆಗೆಯುವವರು, ಮಂಗಳಮುಖಿಯರು ಸೇರಿದಂತೇ ಜನಸಾಮಾನ್ಯರ ಬದುಕಿನ ವಿವರಗಳು ಈ ಕೃತಿಯಲ್ಲಿ ದಟ್ಟೈಸಿವೆ. ಪೋಟೊಗ್ರಾಪರ್‌ಗಳು, ಮಡಿಕೆ ಮಾಡುವವರು, ತೊಗಲು ಗೊಂಬೆ ಆಡಿಸುವವರು, ಕಲಾಯಿ ಹಾಕುವವರು ಸೇರಿದಂತೇ ಬೇರೆ ಬೇರೆ ಕ್ಷೇತ್ರಗಳ ಬದುಕಿನ ಚಿತ್ರಣಗಳು ಈ ಕೃತಿಯಲ್ಲಿವೆ ಎಂದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರಾದ ರಮೇಶ್ ಹಳೇಕೋಟೆ, ಚೀಕನಹಳ್ಳಿ ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷರಾದ ಡಾ.ಎನ್.ಕೆ.ಪ್ರದೀಪ್ ಚೀಕನಹಳ್ಳಿ, ಕಾಫಿ ಬೆಳೆಗಾರರಾದ ಹಳಸೆ ಶಿವಣ್ಣ, ಪ್ರಗತಿಪರ ಕೃಷಿಕರಾದ ವಿಜಯ ಅಂಗಡಿ, ಮೈಸೂರು ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಅವರೆಕಾಡು ವಿಜಯಕುಮಾರ್, ಪ್ರಗತಿಪರ ಕೃಷಿಕರಾದ ಚಂದ್ರಶೇಖರ ನಾರಾಯಣಪುರ, ಡಿ.ಕೆ.ಲಕ್ಷ್ಮಣಗೌಡ, ಮುಂತಾದವರು ಇದ್ದರು.

Author Nandish Bankenahalli Kanna Kannadili part 1 work release at Kannada Sahitya Sammelan