ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ (Elephant Attack) ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಮಹಿಳೆಯ ಶವವಿಟ್ಟು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮೃತದೇಹ ನೋಡಲು ಬಂದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ (MP Kumaraswamy) ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.

ಜನಪ್ರತಿನಿಧಿ ಎಂಬುದನ್ನೂ ನೋಡದೆ, ಶಾಸಕರು ಆನೆ ಸಾಕಿದ್ದಾರೆ ಎಂದು ಜನ ಹಿಗ್ಗಾಮುಗ್ಗ ಥಳಿಸಿ ಬಟ್ಟೆಯನ್ನೂ ಹರಿದುಹಾಕಿದ್ದಾರೆ. ಬಳಿಕ ಹರಿದ ಬಟ್ಟೆಯಲ್ಲೇ ಹೇಳಿಕೆ ನೀಡಿರುವ ಶಾಸಕ ಎಂ.ಪಿ ಕುಮಾರಸ್ವಾಮಿ, ಇದರಲ್ಲಿ ಬೇಕು ಅಂತ ಕೆಲವರು ಗುಂಪು ಮಾಡಿಕೊಂಡು ಹಲ್ಲೆ ಮಾಡಿದ್ದಾರೆ. ಶಾಸಕರು ಆನೆ ಸಾಕಿದ್ದಾರೆ ಎಂದು ಜನ ಹೊಡೆದು ಕಳುಹಿಸಿದ್ದಾರೆ. ಸಂಚು ಮಾಡಿ ಹಲ್ಲೆ ಮಾಡಿದ್ರು. ನನ್ನನ್ನು ರಕ್ಷಿಸುವಲ್ಲಿ ಪೊಲೀಸರು (Police) ವಿಫಲರಾಗಿದ್ದಾರೆ. ನಾನು ಅಲ್ಲೇ ಇರ್ತಿದ್ದೆ ಪೊಲೀಸರು ಮಿಸ್‌ಗೈಡ್ ಮಾಡಿ ಹೊರಗೆ ಕಳುಹಿಸಿದ್ರು. ಸಾರ್ವಜನಿಕರ ಸೇವೆ ಮಾಡಲು ಇರೋರು ನಾವು. ಎಲ್ಲ ತಾಗ್ಯಕ್ಕೂ ರೆಡಿ ಇರ್ತೀವಿ. ಆ ಜಾಗ ಬಿಟ್ಟು ಕದಲ್ತಾ ಇರ್ಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: BJP ಎಸ್ಟಿ ಸಮಾವೇಶಕ್ಕೆ ತೆರಳಿದ್ದ 26ರ ಯುವಕ ನೀರುಪಾಲು

ಏನಿದು ಘಟನೆ?
ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕಾಡಾನೆ ದಾಳಿಯಿಂದ ಮಹಿಳೆ ಶೋಭಾ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಹಾಗೂ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು, ಕಾಫಿ ಬೆಳೆಗಾರರು, ರೈತ ಮುಖಂಡರು (Farmers) ಸ್ಥಳದಲ್ಲಿ ಜಮಾಯಿಸಿದ್ದರು.

ಈ ವೇಳೆ ಮೃತ ಮಹಿಳೆಯ ಶವ ಮುಂದಿಟ್ಟುಕೊಂಡು ಸರ್ಕಾರ (Government of Karnataka) ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು, ಕಾಡಾನೆ ದಾಳಿಗಳಿಗೆ ರಾಜ್ಯ ಸರ್ಕಾರ, ಅರಣ್ಯ ಇಲಾಖೆಯೇ (Forest Department) ಹೊಣೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟ ಹಿಡಿದರು.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರಾದರೂ ಜನರ ಆಕ್ರೋಶ ಕಡಿಮೆಯಾಗಲಿಲ್ಲ. ಘಟನೆ ನಡೆದು ಸುಮಾರು 2 ಗಂಟೆ ಬಳಿಕ ಸ್ಥಳಕ್ಕೆ ಚಿಕ್ಕಮಗಳೂರು ಅರಣ್ಯ ವಿಭಾಗದ ಡಿಎಫ್‌ಒ ಕ್ರಾಂತಿ ತೆರಳಿದ್ದು, ಇದರಿಂದ ಮತ್ತಷ್ಟು ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

MLA M P Kumaraswamy attacked by villagers