ಭಿವಾನಿ: ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಕುರಿತು ದೇಶಾದ್ಯಂತ ತೀವ್ರ ಚರ್ಚೆಯಾಗುತ್ತಿರುವಂತೆಯೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನಮಗೆ ಒಂದು ರಾಷ್ಟ್ರ, ಒಂದು ಚುನಾವಣೆ ಬೇಡ, ಒಂದು ರಾಷ್ಟ್ರ, ಒಂದು ಶಿಕ್ಷಣ ಬೇಕು ಎಂದಿದ್ದಾರೆ.

ಹರಿಯಾಣದ ಭಿವಾನಿಯಲ್ಲಿ ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಜ್ರಿವಾಲ್,  ಬಿಜೆಪಿ ಇದೀಗ ಒಂದು ರಾಷ್ಟ್ರ ಒಂದು ಚುನಾವಣೆ ಗಿಮ್ಮಿಕ್ ನೊಂದಿಗೆ ಬಂದಿದೆ. ಒಂದು ಅಥವಾ 10, 12 ಚುನಾವಣೆಗಳಿಂದ ನಮಗೆ ಏನು ಸಿಗುತ್ತದೆ.  ನಮಗೆ ‘ಒಂದು ರಾಷ್ಟ್ರ, ಒಂದು ಶಿಕ್ಷಣ’ ಬೇಕು. ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ಸಿಗಬೇಕು. ನಮಗೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಬೇಡ. ಒಂದು ಚುನಾವಣೆ ಅಥವಾ 1000 ಚುನಾವಣೆಗಳು ನಮಗೆ ಮುಖ್ಯವಲ್ಲ ಎಂದರು.

‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ ದೆಹಲಿ ಸಿಎಂ, ಇಂತಹ ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ ಏನು ಸಿಗುತ್ತದೆ ಎಂದು ಕುತೂಹಲ ವ್ಯಕ್ತಪಡಿಸಿದರು. “ದೇಶಕ್ಕೆ ಯಾವುದು ಮುಖ್ಯ?  ಎಂದು ಪ್ರಶ್ನಿಸಿದ ಅವರು, ಒಂದು ರಾಷ್ಟ್ರ ಒಂದು ಚುನಾವಣೆ ಅಥವಾ ಒಂದು ರಾಷ್ಟ್ರ ಒಂದು ಶಿಕ್ಷಣ (ಶ್ರೀಮಂತ ಅಥವಾ ಬಡವರು ಎಲ್ಲರಿಗೂ ಸಮಾನವಾದ ಉತ್ತಮ ಶಿಕ್ಷಣ)  ಒಂದು ರಾಷ್ಟ್ರ ಒಂದು ಟ್ವೀಟ್ ಮೆಂಟ್ ( ಶ್ರೀಮಂತ ಅಥವಾ ಬಡವ ಎಲ್ಲರಿಗೂ ಸಮಾನ ಗೌರವ) ಒಂದು ರಾಷ್ಟ್ರ ಒಂದು ಚುನಾವಣೆಯಿಂದ ಸಾಮಾನ್ಯ ಜನರು ಏನು ಪಡೆಯಲಿದ್ದಾರೆ ಎಂದು ಪ್ರಶ್ನಿಸಿದರು.

ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆ ಕಾರ್ಯ ಸಾಧ್ಯತೆ ಕುರಿತು ಶೀಘ್ರವಾಗಿ ಪರಿಶೀಲಿಸಿ ಶಿಫಾರಸುಗಳನ್ನು ಮಾಡಲು ಎಂಟು ಸದಸ್ಯರ ಉನ್ನತ ಮಟ್ಟದ ಸಮಿತಿಗೆ ಕೇಂದ್ರ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ಅದರ ಪರ ಹಾಗೂ ವಿರುದ್ಧ ದೇಶಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಆಡಳಿತರೂಢ ಬಿಜೆಪಿ ಬೆಂಬಲಿಗರು ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ವಿರೋಧಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ.

One nation needs one education