ಕೊಲೊಂಬೊ: ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಗೆಲುವಿನ ನಾಗಲೋಟ ಮುಂದುವರಿಸಿದೆ.  ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವಿನ ಬಳಿಕ ಇದೀಗ ಶ್ರೀಲಂಕಾ ವಿರುದ್ಧ ರೋಚಕ ಗೆಲುವು ದಾಖಲಿಸಿದೆ. ಲಂಕಾ ತಂಡಕ್ಕೆ 214ರನ್ ಸುಲಭ ಟಾರ್ಗೆಟ್ ನೀಡಿದ ಟೀಂ ಇಂಡಿಯಾ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸುವ ಮೂಲಕ 172 ರನ್‌ಗೆ ಆಲೌಟ್ ಮಾಡಿದೆ. ಈ ಮೂಲಕ 41 ರನ್ ಗೆಲುವು ದಾಖಲಿಸಿದೆ.

ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಗೆಲುವಿನ ನಾಗಾಲೋಟಕ್ಕೆ ಭಾರತ ಬ್ರೇಕ್ ಹಾಕಿದೆ.  ಸತತ 13 ಪಂದ್ಯ ಗೆದ್ದು ಸಾಧನೆ ಮಾಡಿದ್ದ ಶ್ರೀಲಂಕಾ ಇದೀಗ 14ನೇ ಗೆಲುವು ಸಾಧ್ಯವಾಗಿಲ್ಲ. ಈ ಕನಸನ್ನು ಟೀಂ ಇಂಡಿಯಾ ಛಿದ್ರಗೊಳಿಸಿದೆ. ಭಾರತ ತಂಡ ನಿರೀಕ್ಷತ ಬ್ಯಾಟಿಂಗ್ ಪ್ರದರ್ಶನ ಮಾಡಲು ವಿಫಲವಾಗಿತ್ತು. ದುನಿತ್ ವೆಲ್ಲಲಾಗೆ ಸ್ಪಿನ್ ಮೋಡಿಗೆ ಸಿಲುಕಿದ ಟೀಂ ಇಂಡಿಯಾ 213 ರನ್‌ಗೆ ಆಲೌಟ್ ಆಗಿತ್ತು.

ಸುಲಭ ಟಾರ್ಗೆಟ್ ಪಡೆದ ಶ್ರೀಲಂಕಾ ತಂಡಕ್ಕೆ  ಟೀಂ ಇಂಡಿಯಾ ಬೌಲರ್ಸ್ ಶಾಕ್ ನೀಡಿದರು. ಆರಂಭದಲ್ಲೇ ಜಸ್ಪ್ರೀತ್ ಬುಮ್ರಾ ದಾಳಿಗೆ ಲಂಕಾ ತತ್ತರಿಸಿತು. ಪಥುಮ್ ನಿಸಾಂಕ ಹಾಗೂ ಕುಸಾಲ್ ಮೆಂಡಿಸ್ ವಿಕೆಟ್ ಕೈಚೆಲ್ಲಿದರು. ಇನ್ನು ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ದಿಮುತ್ ಕರುಣಾರತ್ನೆ ನಿರ್ಗಮಿಸಿದರು.  25 ರನ್‌ಗೆ 3 ವಿಕೆಟ್ ಕಳೆದುಕೊಂಡ ಲಂಕಾ ಸಂಕಷ್ಟಕ್ಕೆ ಸಿಲುಕಿತು.

ಮೂರು ವಿಕೆಟ್ ಪತನದ ಬಳಿಕ ಕುಲ್ದೀಪ್ ಯಾದವ್ ಸ್ಪಿನ್ ಮೋಡಿ ಆರಂಭಗೊಂಡಿತು. ಶ್ರೀಲಂಕಾದ ಒಂದೊಂದೆ ವಿಕೆಟ್ ಪತನ ಆರಂಭಗೊಂಡಿತು. ಸದೀರಾ ಸಮರವಿಕ್ರಮ, ಚಾರಿತ್ ಅಸಲಂಕ ಪೆವಿಲಿಯನ್ ಸೇರಿದರು. ಇತ್ತ ರವೀಂದ್ರ ಜಡೇಜಾ ಕೂಡ ಉತ್ತಮ ಸ್ಪಿನ್ ದಾಳಿ ಮೂಲಕ ಶ್ರೀಲಂಕಾ ತಂಡದ ಮೇಲೆ ಒತ್ತಡ ಹೆಚ್ಚಿಸಿದರು. ಧನಂಜಯ ಡಿಸಿಲ್ವ, ನಾಯಕ ದಸೂನ್ ಶನಕ ಕೂಡ  ನಿರ್ಗಮಿಸಿದರು. 41.3ಓವರ್‌ಗಳಲ್ಲಿ ಶ್ರೀಲಂಕಾ 172 ರನ್‌ಗೆ ಆಲೌಟ್ ಆಯಿತು.

India win by 41 runs against Sri Lanka