ಚಿಕ್ಕಮಗಳೂರು:  ಹಿರೇಮಗಳೂರಿನ ಶ್ರೀಕೋದಂಡರಾಮಚಂದ್ರಸ್ವಾಮಿ ದೇವಸ್ಥಾನದಲ್ಲಿ ರಾಮ ನವಮಿಯ ಅಂಗವಾಗಿ ಆಯೋಜಿಸಿದ್ದ ರಾಮ ತಾರಕ ಹೋಮದಲ್ಲಿ ‘ಪ್ರಾಮಾಣಿಕವಾಗಿ ಮತದಾನವ ಮಾಡುವ’ ಪ್ರತಿಜ್ಞಾ ವಿಧಿಯನ್ನು ಯಜ್ಞೇಶ್ವರನ ಮುಂದೆ ಭಕ್ತಾದಿಗಳು ಸ್ವೀಕರಿಸುವ ಮೂಲಕ ಸಂಕಲ್ಪಿಸಿದರು.

ಆಧ್ಯಾತ್ಮಿಕ ಸಾಧಕ ವೈಷ್ಣವಸಿಂಹ ನೇತೃತ್ವದ ವೈದಿಕರ ತಂಡ ಮೂರುಗಂಟೆಗಳ ಕಾಲ ಶ್ರೀರಾಮತಾರಕ ಹೋಮ ನೂರಾರು ಭಕ್ತರ ಶ್ರೀರಾಮ ಜಯರಾಮ ಜಯ ಜಯ ರಾಮ ಮಂತ್ರ ಘೋಷದೊಂದಿಗೆ ನೆರವೇರಿತು. ಮಧ್ಯಾಹ್ನ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಪೂರ್ಣಾಹುತಿ ಸಮರ್ಪಿಸಲಾಯಿತು.

ಭಾರತ ದೇಶ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವುದನ್ನು ಪ್ರಸ್ತಾಪಿಸಿದ ಹಿರೇಮಗಳೂರು ಕಣ್ಣನ್ ಮತದಾನ ರಾಷ್ಟ್ರೀಯ ಕರ್ತವ್ಯವೆಂದು ಸಾರಿದರು. ‘ದೇಶ ದೇಶದ ಎಲ್ಲ ಜನರೂ ಸೌಖ್ಯದಿಂದ ಬಾಳಲಿ. ಕಾಲ ಕಾಲಕ್ಕೆ ಮಳೆಯು ಸುರಿದು ಸಸ್ಯಶ್ಯಾಮಲೆ ಅರಳಲಿ. ದೀನ ನಾನು ದಾನಿ ನೀನು ನಿನ್ನ ವಸ್ತು ಅರ್ಪಿಪ ಅಪ್ರಮೆಯ ಸ್ವಾಮಿಯೆ, ಶರಣು ಸ್ವಾಮಿ, ಶರಣು ಗುರುವೇ ನಿನ್ನ ನಾಮ ಮಂಗಳ ಎಂಬ ಸಂಕಲ್ಪದ ಜೊತೆಗೆ ‘ಇದೇ ೨೬ರಂದು ಮತದಾನ ಮಾಡುವ ಮೂಲಕ ರಾಷ್ಟ್ರದ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಕಾಯ್ದುಕೊಳ್ಳುತ್ತೇವೆ. ಕೊರಳಿನ ಮೂಲಕ, ಕರುಳಿನ ಮೂಲಕ, ಬೆರಳಿನ ಮೂಲಕ ಮತಯಂತ್ರವನ್ನು ಒತ್ತಿ ಮತ ಚಲಾಯಿಸಿ ನಾವೆಲ್ಲರೂ ವಿಶ್ವಮಾನವರಾಗಿ ಭಾರತ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತೇವೆ.

ಪ್ರಾಮಾಣಿಕವಾಗಿ ಮತ ಹಾಕುವ ಮೂಲಕ ಭಾರತದ ಪ್ರಜಾಪ್ರಭುತ್ವಕ್ಕೆ ಭಗವಂತನ ಸನ್ನಿಧಿಯಲ್ಲಿ ಉತ್ತಮೋತ್ತಮ ರಾಷ್ಟ್ರೀಯ ಪುರುಷನನ್ನು ಆಯ್ಕೆ ಮಾಡುವುದರ ಮೂಲಕ ಸರ್ವರನ್ನೂ ಸೀತಾರಾಮರು ರಕ್ಷಿಸಲಿ’ ಎಂದೂ ಯಜ್ಞೇಶ್ವರನ ಮುಂದೆ ಸಂಕಲ್ಪಿಸಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಮೂಲಕ ಧಾರ್ಮಿಕ ಉತ್ಸವಕ್ಕೆ ರಾಷ್ಟ್ರೀಯತೆಯ ಛಾಪು ನೀಡಲಾಯಿತು.

ದೆಹಲಿ ಕನ್ನಡ ಸಂಘದ ಮಾಜಿಅಧ್ಯಕ್ಷ ಮದ್ದೂರುನಾಗರಾಜ, ದೇವಸ್ಥಾನದ ಆಡಳಿತಮಂಡಳಿ ಸಂಚಾಲಕಿ ರಮಾಮೋಹನ್, ಅಭಿವೃದ್ಧಿ ಟ್ರಸ್ಟ್ ಮುಖ್ಯಸ್ಥ ಗೋಪಿನಾಥ್ ಮತ್ತು ರಂಗನಾಥ, ದಲಿತಜನಸೇನಾ ಜಿಲ್ಲಾಧ್ಯಕ್ಷ ಅನಿಲಆನಂದ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಇಂಜಿನಿಯರ್ ಗಂಗಾಧರ ಮತ್ತಿತರರು ಸಾಕ್ಷೀಕರಿಸಿದರು.

ಚೈತ್ರ ಶುದ್ಧ ನವಮಿ ಬುಧವಾರ ಪ್ರಾತಃಕಾಲದಲ್ಲಿ ಲಕ್ಷ್ಮಣ ಸಹಿತ ಸೀತಾರಾಮರಿಗೆ ಪಂಚಾಭಿಷೇಕ ವಿಶೇಷ ಪೂಜೆ ನಡೆಸುವ ಮೂಲಕ ಗುಡಿಯಲ್ಲಿ ರಾಮನವಮಿ ಆರಂಭಗೊಂಡಿತು. ಎಚ್.ಗೋಪಿನಾಥ ನೇತೃತ್ವದಲ್ಲಿ ಭಜನೆ, ಭಕ್ತಿಗೀತೆಗಳ ಸಮರ್ಪಣೆಯಾಯಿತು. ಸಂಜೆ ಸಾಂಸ್ಕೃತಿಕ ಕಾರ್‍ಯಕ್ರಮಗಳು, ಸೀತಾರಾಮ ಕಲ್ಯಾಣೋತ್ಸವ, ವಸಂತೋತ್ಸವ, ಉಯ್ಯಾಲೆ ಸೇವೆ ನೆರವೇರಿತು. ಬೆಳಗಿನಿಂದ ರಾತ್ರಿಯವರೆಗೂ ವೇಣುಗೋಪಾಲ್ ನೇತೃತ್ವದಲ್ಲಿ ಪ್ರಸಾದ ವಿತರಿಸಲಾಯಿತು.

Screen at Rama Taraka Homa held in Hiremagalur